– ಗೌರವ, ಕೃತಜ್ಞತೆ ಸಲ್ಲಿಸಲು ಪಠ್ಯದಲ್ಲಿ ಸೇರಿಸಿ
ಹೈದರಾಬಾದ್: ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಜೀವನ ಚರಿತ್ರೆಯನ್ನು ಶಾಲೆ ಪಠ್ಯಕ್ಕೆ ಸೇರಿಸುವಂತೆ ತೆಲಂಗಾಣ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್ ಅವರಿಗೆ ಎಐಸಿಸಿ ವಕ್ತಾರ ದಾಸೋಜು ಶ್ರವಣ್ ಮನವಿ ಮಾಡಿದ್ದಾರೆ.
ಸೋನಿಯಾ ಗಾಂಧಿ ಅವರ 74ನೇ ಹುಟ್ಟುಹಬ್ಬದ ಸಮಾರಂಭದಲ್ಲಿ ಈ ಕುರಿತು ಹೇಳಿದ್ದು, ತೆಲಂಗಾಣ ಸಿಎಂಗೆ ಪತ್ರವನ್ನು ಸಹ ಬರೆಯಲಾಗಿದೆ. ಸೋನಿಯಾ ಗಾಂಧಿ ಅವರಿಗೆ ಗೌರವ ಹಾಗೂ ಕೃತಜ್ಞತೆಯ ಸಂಕೇತವಾಗಿ ಅವರ ಜೀವನ ಚರಿತ್ರೆಯನ್ನು ಶಾಲಾ ಪಠ್ಯದಲ್ಲಿ ಅಳವಡಿಸಲು ಅಧಿಕಾರಿಗಳಿಗೆ ಸೂಚಿಸುವಂತೆ ಕೋರಲಾಗಿದೆ.
ತೆಲಂಗಾಣ ರಾಜ್ಯವನ್ನು ಘೋಷಿಸುವ ಮೂಲಕ ದೊಡ್ಡ ಉಡುಗುರೆಯನ್ನು ಸೋನಿಯಾ ಗಾಂಧಿ ನೀಡಿದ್ದಾರೆ. ಹೀಗಾಗಿ ಅವರನ್ನು ಗೌರವಿಸುವುದು ನಮ್ಮೆಲ್ಲರ ಪ್ರಮುಖ ಜವಾಬ್ದಾರಿಯಾಗಿದೆ. ಕೆಸಿಆರ್ ಪ್ರತ್ಯೇಕ ರಾಜ್ಯದ ಮೊದಲ ಫಲಾನುಭವಿಯಾಗಿದ್ದರೂ, ಸೋನಿಯಾ ಗಾಂಧಿ ಅವರನ್ನು ಗೌರವಿಸುವ ಕುರಿತು ಆಸಕ್ತಿ ತೋರಲಿಲ್ಲ ಎಂದು ಅವರು ಹೇಳಿದ್ದಾರೆ.
ಯುಪಿಎ ಅಧಿಕಾರದಲ್ಲಿದ್ದಾಗ ತೆಲಂಗಾಣ ರಾಜ್ಯವನ್ನು ರಚಿಸಲಾಗಿದೆ. ಅಲ್ಲದೆ ಟಿಆರ್ಎಸ್ ಮುಖ್ಯಸ್ಥರು ಈ ಕುರಿತು ವಿಧಾನಸಭೆಯಲ್ಲಿ ಅಧಿಕೃತವಾಗಿ ಹೇಳಿಕೆ ನೀಡಿದ್ದು, ತೆಲಂಗಾಣ ಪ್ರತ್ಯೇಕ ರಾಜ್ಯದ ಕನಸು ನನಸಾಗಲು ಸೊಣಿಯಾ ಗಾಂಧಿಯವರಿಂದ ಮಾತ್ರ ಸಾಧ್ಯ ಎಂದಿದ್ದರು ಎಂದು ಶ್ರವಣ್ ಉಲ್ಲೇಖಿಸಿದ್ದಾರೆ.
2014ರಲ್ಲಿ ತೆಲಂಗಾಣ ಪ್ರತ್ಯೇಕ ರಾಜ್ಯವಾಗಿ ಅಧಿಕೃತವಾಗಿ ರಚನೆಯಾಯಿತು. 2014ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ಸಹ ನಡೆಯಿತು. ಈ ವೇಳೆ ಒಟ್ಟು 119 ಸ್ಥಾನಗಳ ಪೈಕಿ ತೆಲಂಗಾಣ ರಾಷ್ಟ್ರ ಸಮಿತಿ(ಟಿಆರ್ಎಸ್) 63 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಅಧಿಕಾರದ ಗದ್ದುಗೆ ಏರಿತು. 21 ಸ್ಥಾನಗಳಲ್ಲಿ ಜಯಗಳಿಸುವ ಮೂಲಕ ಕಾಂಗ್ರೆಸ್ ವಿರೋಧ ಪಕ್ಷದ ಸ್ಥಾನಕ್ಕೆ ಸೀಮಿತವಾಯಿತು.