ಉಡುಪಿ: ಮುಂಗಾರು ಮಳೆಯಿಂದ ಅರಬ್ಬೀ ಸಮುದ್ರ ಪ್ರಕ್ಷುಬ್ಧವಾಗಿದೆ. ಭಾರೀ ಅಲೆಗಳು ಸಾಗರದಲ್ಲಿ ಏಳುತ್ತಿವೆ. ಉಡುಪಿ ಜಿಲ್ಲೆಯ ಉಪ್ಪುಂದದ ಮಡಿಕಲ್ ನಲ್ಲಿ ಮೀನುಗಾರಿಗೆ ತೆರಳಲು ಹೊರಟ ದೋಣಿಯೊಂದು ಕಡಲ ಅಲೆಗಳ ಅಬ್ಬರಕ್ಕೆ ಸಿಲುಕಿ ಮಗುಚಿಬಿದ್ದಿದೆ.
ಯಾಂತ್ರೀಕೃತ ಮೀನುಗಾರಿಕೆ ನಿಷೇಧ ಇದ್ದು, ಸಾಂಪ್ರದಾಯಿಕ ನಾಡದೋಣಿಗಳಲ್ಲಿ ಮೀನುಗಾರರು ಮೀನುಗಾರಿಕೆ ನಡೆಸುತ್ತಾರೆ. ಹೀಗೆ ದೋಣಿಯಲ್ಲಿ ಮೀನುಗಾರಿಕೆಗೆ ದಡದಿಂದ ಕಡಲಿಗೆ ಇಳಿದ ಕೆಲವೇ ಕ್ಷಣಗಳಲ್ಲಿ ಅಲೆಗಳ ಹೊಡೆತಕ್ಕೆ ಸಿಕ್ಕಿದ ದೋಣಿ ಮಗುಚಿ ಬಿದ್ದಿದೆ.
ನಾಡ ದೋಣಿಯಲ್ಲಿ ಆರು ಜನರಿದ್ದು ಅವರೆಲ್ಲಾ ಘಟನೆಯ ಮುನ್ಸೂಚನೆಯನ್ನು ಅರಿತುಕೊಂಡು ಸಮುದ್ರಕ್ಕೆ ಹಾರಿದ್ದಾರೆ. ಕ್ಷಣಾರ್ಧದಲ್ಲಿ ಅಲೆಗೆ ಸಿಕ್ಕಿ ದೋಣಿ ಮಗುಚಿದೆ. ಮೀನುಗಾರರು ಈಜಿ ದಡ ಸೇರಿದ್ದಾರೆ. ಸದ್ಯ ದೋಣಿಯನ್ನು ಮೇಲಕ್ಕೆಳೆಯಲಾಗಿದೆ.
ಕಡಲ ಮಕ್ಕಳು ಪ್ರಾಣ ಪಣಕ್ಕಿಟ್ಟಂತ ಹೋರಾಟದ ಜೀವನ ನಡೆಸುತ್ತಾರೆ ಎಂಬೂದಕ್ಕೆ ಈ ವೀಡಿಯೋ ಒಂದು ಸಾಕ್ಷಿಯಂತಿದೆ.