– 8 ಎಟಿಎಂ ಕಾರ್ಡ್, 55 ಸಾವಿರ ನಗದು ವಶ
ಹಾವೇರಿ: ಎಟಿಎಂ ಆಪರೇಟ್ ಮಾಡೋಕೆ ಬಾರದ ಅಮಾಯಕ ಮತ್ತು ಅನಕ್ಷರಸ್ಥ ಮಹಿಳೆಯರಿಗೆ ಸಹಾಯ ಮಾಡುವ ನೆಪದಲ್ಲಿ ಎಟಿಎಂ ಕಾರ್ಡ್ ಪಡೆದು ಅವರಿಗೆ ಗೊತ್ತಾಗದಂತೆ ಪಾಸ್ ವರ್ಡ್ ಪಡೆದು ಹಣ ಎಗರಿಸುತ್ತಿದ್ದ ಆರೋಪಿಯನ್ನು ಹಾನಗಲ್ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಮಹಿಳೆ ಜಿಲ್ಲೆಯ ಹಾನಗಲ್ ತಾಲೂಕಿನ ಬಾಳೂರು ಗ್ರಾಮದ ನಿವಾಸಿ 38 ವರ್ಷದ ಕೌಸರಬಾನು ಬಂಕಾಪುರ ಎಂದು ಗುರುತಿಸಲಾಗಿದೆ. ಈಕೆ ಜಿಲ್ಲೆಯ ಹಾನಗಲ್, ಹಿರೇಕೆರೂರು, ರಾಣೆಬೆನ್ನೂರು, ಶಿವಮೊಗ್ಗ ಜಿಲ್ಲೆಯ ಶಿರಾಳಕೊಪ್ಪ, ಶಿಕಾರಿಪುರ ಸೇರಿದಂತೆ ಹಲವೆಡೆ ಜನರನ್ನು ವಂಚಿಸಿ ಎಟಿಎಂ ಕಾರ್ಡ್ ಎಗರಿಸಿ ಹಣ ಲಪಟಾಯಿಸಿದ್ದಾಳೆ.
ಎಟಿಎಂ ಬರುವ ಅಸಹಾಯಕ ಮತ್ತು ಅನಕ್ಷರಸ್ಥ ಮಹಿಳೆಯರನ್ನು ಟಾರ್ಗೆಟ್ ಮಾಡುತ್ತಿದ್ದ ಈಕೆ, ಅವರಿಂದ ಎಟಿಎಂ ಕಾರ್ಡ್ ಎಗರಿಸಿ ಹಣ ದೋಚುತ್ತಿದ್ದಳು. ಸಹಾಯ ಮಾಡುವ ನೆಪದಲ್ಲಿ ಅಮಾಯಕರ ಎಟಿಎಂ ಕಾರ್ಡ್ ತೆಗೆದು ಅವರಿಗೆ ಹಣ ತೆಗೆದುಕೊಡುತ್ತಿದ್ದಳು. ಈ ವೇಳೆ ಹಣ ಎಣಿಸೋದು ಅಥವಾ ಬಣ್ಣಬಣ್ಣದ ಮಾತುಗಳಲ್ಲಿ ತೊಡಗಿ ಅವರ ಎಟಿಎಂ ಕಾರ್ಡ್ಅನ್ನು ಕ್ಷಣಾರ್ಧದಲ್ಲಿ ಬದಲಿಸುತ್ತಿದ್ದಳು. ಹಣ ಡ್ರಾ ಮಾಡೋ ವೇಳೆ ಪಿನ್ ನಂಬರ್ ಗಮನಿಸಿ ಬಳಿಕ ಬೇರೆ ಬೇರೆ ಎಟಿಎಂ ಕೇಂದ್ರಗಳಲ್ಲಿ ಹಣ ಡ್ರಾ ಮಾಡುತ್ತಿದ್ದಳು.
ಆರೋಪಿಯಿಂದ ವಂಚನೆಗೊಳಗಾಗಿದ್ದ ಇಬ್ಬರು ಎಟಿಎಂ ಕಾರ್ಡ್ ಕಳೆದುಕೊಂಡ ಬಗ್ಗೆ ಹಾನಗಲ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಸಿಪಿಐ ಶಿವಶಂಕರ ಗಣಾಚಾರಿ ಮತ್ತು ಪಿಎಸ್ಐ ಶ್ರೀಶೈಲ ಪಟ್ಟಣಶೆಟ್ಟಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ ಖತರ್ನಾಕ್ ಕಳ್ಳಿಯನ್ನು ಬಂಧಿಸಿದ್ದಾರೆ. ವಿಶೇಷವಾಗಿ ಆರೋಪಿ ಸೆಕ್ಯೂರಿಟಿ ಗಾರ್ಡ್ ಇಲ್ಲದ ಎಟಿಎಂಗಳ ಬಳಿ ಹೆಚ್ಚಾಗಿದ್ದು, ಸಹಾಯದ ನೆಪದಲ್ಲಿ ಯಾಮಾರಿಸುತ್ತಿದ್ದಳು. ಬಂಧಿತಳಿಂದ ಎಂಟು ಎಟಿಎಂ ಕಾರ್ಡ್ ಮತ್ತು ಐವತ್ತೈದು ಸಾವಿರ ರೂ. ಹಣವನ್ನು ಪೊಲೀಸರು ಜಪ್ತಿ ಮಾಡಿದ್ದಾರೆ.