ಇತ್ತೀಚೆಗೆ ಸೆಟ್ಟೇರಿದ್ದ ಸಸ್ಪೆನ್ಸ್, ಥ್ರಿಲ್ಲರ್ ಕಥಾಹಂದರವುಳ್ಳ ‘ಅಂಜು’ ಚಿತ್ರ ಮೊದಲ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಚಿಕ್ಕಾಬಳ್ಳಾಪುರ, ಚಿಂತಾಮಣಿ, ನಂದಿ ಗಿರಿಧಾಮಗಳಲ್ಲಿ ‘ಅಂಜು’ ಚಿತ್ರದ ಮೊದಲ ಹಂತದ ಚಿತ್ರೀಕರಣವನ್ನು ಸೆರೆ ಹಿಡಿಯಲಾಗಿದೆ. ಚಿತ್ರಕ್ಕೆ ರಾಜೀವ್ ಕೃಷ್ಣ ಆಕ್ಷನ್ ಕಟ್ ಹೇಳುತ್ತಿದ್ದು, ಚಿತ್ರಕ್ಕೆ ಕಥೆ, ಚಿತ್ರಕಥೆ ಕೂಡ ಇವರೇ ಬರೆದಿದ್ದಾರೆ.
ಹೊಸ ಹಾಗೂ ನವ ಉತ್ಸಾಹಿ ಪ್ರತಿಭೆಗಳ ದಂಡೇ ‘ಅಂಜು’ ಚಿತ್ರದಲ್ಲಿದೆ. ಸಿನಿಮಾ ನಾಯಕ, ನಾಯಕಿಯರಾಗಬೇಕೆಂದು ಆಡಿಷನ್ ಗಾಗಿ ಬೆಂಗಳೂರಿನಿಂದ ಹೈದರಾಬಾದ್ಗೆ ಪ್ರಯಾಣ ಬೆಳೆಸುವ ಮೂವರು ನಾಯಕ, ನಾಯಕಿಯರು ಸೈಕೋಗಳಿಂದ ಎದುರಿಸುವ ಸಮಸ್ಯೆ ಹಾಗೂ ಅವರಿಂದ ಪಾರಾಗಲು ಏನೆಲ್ಲ ಮಾಡುತ್ತಾರೆ ಎಂಬ ಕುತೂಹಲಕಾರಿ ಕಥಾಹಂದರ ‘ಅಂಜು’ ಚಿತ್ರದಲ್ಲಿದೆ. ಚಿತ್ರದಲ್ಲಿ ನಾಯಕಿಯರಾಗಿ ಬಿಗ್ಬಾಸ್ ಸ್ಪರ್ಧಿ ಸೋನು ಪಾಟೀಲ್, ರಮ್ಯ, ಯಶಸ್ವಿನಿ ನಾಯಕನಟರಾಗಿ ಊಲಿಬೆಲೆ ರಾಜೇಶ್ ರೆಡ್ಡಿ, ರಾಜ್ ಪ್ರತೀಕ್ ಮತ್ತು ಸಿದ್ದಾರ್ಥ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.
ಖಳನಟನ ಪಾತ್ರದಲ್ಲಿ ಬಾಂಬೆ ಮೂಲದ ರಾಜೇಶ್ ಮುಂಡ್ಕೂರ್ ಮತ್ತು ಆನಂದ್ ರಂಗ್ರೇಜ ಚಿತ್ರದಲ್ಲಿ ಬಣ್ಣ ಹಚ್ಚಿದ್ದಾರೆ. ಚಿತ್ರದ ತಾರಾಬಳಗದಲ್ಲಿ ನರಸಾಪುರ ಭಕ್ತರಹಳ್ಳಿ ರವಿ, ರೇಣುಕಾ, ಜೀವನ್ ಶಿವು, ಅಬ್ದುಲ್ ರೆಹಮಾನ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸುತ್ತಿದ್ದಾರೆ. ಹಿರಿಯ ನಟ ಅಭಿಜಿತ್ ಹಾಗೂ ಜೂನಿಯರ್ ರವಿಚಂದ್ರನ್ ‘ಅಂಜು’ ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ವಿನು ಮನಸು ಸಂಗೀತ ಸಂಯೋಜನೆ, ಸುರೇಶ್ ಕಂಬಳಿ ಸಾಹಿತ್ಯ, ರಮೇಶ್ ಕೊಯಿರಾ ಛಾಯಾಗ್ರಹಣ ಚಿತ್ರಕ್ಕಿದ್ದು, ಟೆನ್ ಟ್ರೀಸ್ ಫಿಲಂ ಪ್ರೊಡಕ್ಷನ್ ಹೌಸ್ ಬ್ಯಾನರ್ ನಡಿ ‘ಅಂಜು’ ಸಿನಿಮಾ ನಿರ್ಮಾಣವಾಗುತ್ತಿದೆ. ಸದ್ಯ ಮೊದಲ ಹಂತದ ಚಿತ್ರೀಕರಣ ಮುಗಿಸಿರುವ ‘ಅಂಜು’ ಚಿತ್ರತಂಡ ಎರಡನೇ ಹಂತದ ಚಿತ್ರೀಕರಣಕ್ಕಾಗಿ ಉತ್ತರ ಕರ್ನಾಟಕದತ್ತ ಪಯಣ ಬೆಳೆಸಲಿದೆ