ಮೈಸೂರು: ನಮ್ಮದು ದೊಡ್ಡ ಬಜೆಟ್ ಸಿನಿಮಾವಾಗಿದ್ದು, ಅರ್ಧ ಪ್ರೇಕ್ಷಕರಿಗೆ ಚಿತ್ರ ನೋಡಲು ಅವಕಾಶ ನೀಡಿದ್ರೆ ನಷ್ಟವಾಗುತ್ತೆ. ಹೀಗಾಗಿ ಸದ್ಯ ಚಿತ್ರ ಬಿಡುಗಡೆ ಮಾಡಲ್ಲ ಎಂದು ‘ಸಲಗ’ ಚಿತ್ರದ ನಿರ್ಮಾಪಕ ಕೆ.ಪಿ ಶ್ರೀಕಾಂತ್ ಹೇಳಿದ್ದಾರೆ.
ಚಿತ್ರಮಂದಿರ ತೆರೆಯಲು ಸರ್ಕಾರದಿಂದ ಅನುಮತಿ ಹಿನ್ನೆಲೆ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಅರ್ಧ ಪ್ರೇಕ್ಷಕರರಿಗಾಗಿ ಸಲಗ ಚಿತ್ರ ಬಿಡುಗಡೆ ಮಾಡಲ್ಲ. ಚಿತ್ರಮಂದಿರ ತೆರೆಯಲು ಅವಕಾಶ ನೀಡಿದ್ದಾರೆ ಸರಿ. ಆದರೆ ಅರ್ಧ ಪ್ರೇಕ್ಷಕರಿಗೆ ಅವಕಾಶ ನೀಡಿರೋದಕ್ಕೆ ನಮಗೆ ಅಸಮಾಧಾನ ಇದೆ. ನಮ್ಮ ಸಿನಿಮಾ ದೊಡ್ಡ ಬಜೆಟ್ ಸಿನಿಮಾ ಆಗಿದೆ. ಇದಕ್ಕೆ ಅರ್ಧ ಪ್ರೇಕ್ಷಕರಿಗೆ ಚಿತ್ರ ನೋಡಲು ಅವಕಾಶ ನೀಡಿದ್ರೆ ನಷ್ಟವಾಗುತ್ತೆ. ಈ ಹಿನ್ನೆಲೆಯಲ್ಲಿ ಪೂರ್ಣ ಪ್ರಮಾಣದಲ್ಲಿ ಥಿಯೇಟರ್ ಓಪನ್ ಆದ ಮೇಲೆಯೇ ಸಲಗ ಚಿತ್ರ ತೆರೆಗೆ ಬರಲಿದೆ ಎಂದು ಹೇಳಿದರು.
ಆಕ್ಟಿವ್ ಪ್ರೋಡ್ಯೂಸರ್ ಟೀಂನಿಂದ ಸೋಮವಾರ ಸಭೆ ಕರೆದಿದ್ದೇವೆ. ಆ ಟೀಂನಲ್ಲಿ ರಾಬರ್ಟ್, ಕೋಟಿಗೊಬ್ಬ, ಕೆಜಿಎಫ್ ಹಾಗೂ ಯುವರತ್ನ ಮೊದಲಾದ ಚಿತ್ರಗಳ ನಿರ್ಮಾಪಕರಿದ್ದಾರೆ. ಎಲ್ಲರು ಒಟ್ಟಾಗಿ ಕುಳಿತು ನಿರ್ಧಾರ ಮಾಡ್ತೀವಿ. ಯಾವ ಚಿತ್ರ ಬಿಡುಗಡೆ ಮಾಡಬೇಕು ಅನ್ನೋ ಬಗ್ಗೆಯೂ ನಿರ್ಧಾರ ಮಾಡ್ತೀವಿ. ಆದರೆ ದೊಡ್ಡ ಬಜೆಟ್ನ ಸಿನಿಮಾಗಳಿಗೆ ಅರ್ಧ ಪ್ರೇಕ್ಷಕರು ಸಾಕಗೋದಿಲ್ಲ. ನಮಗೆ ಪೂರ್ತಿ ಅನುಮತಿ ಸಿಕ್ಕರಷ್ಟೇ ನಾವು ಚಿತ್ರ ಬಿಡುಗಡೆ ಮಾಡಲು ಆಗೋದು. ಆನ್ಲೈನ್ ಫ್ಲಾಟ್ಫಾರ್ಮ್(ಓಟಿಟಿ) ವೇದಿಕೆಗಳು ದೊಡ್ಡ ಬಜೆಟ್ ಸಿನಿಮಾಗಳಿಗೆ ಸರಿ ಹೊಂದುವುದಿಲ್ಲ ಎಂದು ತಿಳಿಸಿದರು.
ಕೇಂದ್ರ ಸರ್ಕಾರ ಅನ್ಲಾಕ್ 5ರ ಮಾರ್ಗಸೂಚಿಯನ್ನು ಬುಧವಾರ ಪ್ರಕಟಿಸಿದ್ದು, ಚಿತ್ರಮಂದಿರ ಮತ್ತು ಈಜುಕೊಳ ತೆರೆಯಲು ಷರತ್ತುಬದ್ಧ ಅನುಮತಿಯನ್ನು ನೀಡಿದೆ. ಬಹುತೇಕ ಚಟುವಟಿಕೆಗಳಿಗೆ ಅಕ್ಟೋಬರ್ 15ರ ನಂತ್ರವೇ ಗ್ರೀನ್ ಸಿಗ್ನಲ್ ನೀಡಿದೆ. ಹಾಗೇ ಸರ್ಕಾರ ಮೈಕ್ರೋ ಲೆವಲ್ ಕಂಟೈನ್ಮೆಂಟ್ ಝೋನ್ ಮಾಡಲು ಜಿಲ್ಲಾಡಳಿತಗಳಿಗೆ ಅವಕಾಶ ನೀಡಿದೆ.
ಈ ಲಾಕ್ಡೌನ್ 2020 ಅಕ್ಟೋಬರ್ 31ರವರೆಗೆ ಮುಂದುವರಿಯಲಿದೆ. ರಾಜ್ಯ/ಕೇಂದ್ರ ಸರ್ಕಾರ ಯಾವುದೇ ಲೋಕಲ್ ಲಾಕ್ಡೌನ್ ಮಾಡುತ್ತಿಲ್ಲ. ಜಲ್ಲಾಡಳಿತಗಳು ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಮೈಕ್ರೋ ಲೆವಲ್ ಝೋನ್ ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಕಂಟೈನ್ಮೆಂಟ್ ಝೋನ್ ಗಳಲ್ಲಿ ಅವಶ್ಯಕ ಸೇವೆಗಳನ್ನು ಹೊರತುಪಡಿಸಿದ ಇನ್ನುಳಿದ ಎಲ್ಲ ಚಟುವಟಿಕೆಗಳ ಮೇಲೆ ನಿರ್ಬಂಧವಿದೆ. ಅಂತರಾಜ್ಯ ಮತ್ತು ಅಂತರ್ ಜಿಲ್ಲೆ ಪ್ರಯಾಣದ ಮೇಲೆ ಯಾವುದೇ ನಿಬಂಧನೆಗಳಿಲ್ಲ ಎಂದು ಮಾರ್ಗಸೂಚಿಯಲ್ಲಿ ತಿಳಿಸಲಾಗಿದೆ.