ಬೆಂಗಳೂರು: ರಾಜ್ಯದಲ್ಲಿ ಕೊರೊನಾ ರೋಗಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದರೂ ಸರಕಾರ ಮೌಖಿಕ ಆದೇಶದ ಮೂಲಕ ತಪಾಸಣೆಗಳನ್ನು ಕಡಿಮೆಗೊಳಿಸಲಾಗಿದೆ. ಕರ್ನಾಟಕದಲ್ಲಿ ರೋಗಿಗಳ ಸಂಖ್ಯೆ ಇಳಿಮುಖವಾಗಿದೆ ಎಂದು ಅಂಕಿ ಅಂಶಗಳ ತೋರಿಸುವ ಮೂಲಕ ರಾಜ್ಯದ ಜನತೆಯ ಆರೋಗ್ಯದ ಸ್ಥಿತಿಯನ್ನು ತೀರ ಗಂಭೀರವಾಗಿಸುವತ್ತ ಸರ್ಕಾರ ಮುನ್ನಡೆದಿದೆ ಎಂದು ಮಾಜಿ ಸಚಿವ ಎಂ.ಬಿ.ಪಾಟೀಲ ಆರೋಪಿಸಿದ್ದಾರೆ.
ಬಿ.ಎಲ್.ಡಿ.ಇ ವಿಶ್ವವಿದ್ಯಾಲಯದಲ್ಲಿ ಬಸವ ಜಯಂತಿ ಆಚರಣೆಯ ನಂತರ ವೈದ್ಯರನ್ನು ಉದ್ದೇಶಿಸಿ ಮಾತನಾಡಿ ಬಸವ ಜಯಂತಿಯ ಈ ಶುಭ ಸಂದರ್ಭದಲ್ಲಿ ನಾವೆಲ್ಲರೂ ಕೆರೊನಾ ವಿರುದ್ಧ ಇನ್ನೂ ಹೆಚ್ಚುಹೋರಾಟ ನಡೆಸಬೇಕಿದೆ, ಡಾ ಎಂ ಎಸ್ ಬಿರಾದಾರ ಅವರ ಆಕಸ್ಮಿಕ ಅಗಲಿಕೆಯಿಂದ ದೃತಿಗೆಡದೆ ನೀವೆಲ್ಲ ನನ್ನೊಂದಿಗೆ ಕೈಜೋಡಿಸಿ ರೋಗಿಗಳ ಸೇವೆ ಮಾಡೋಣ ಎಂದು ಕರೆ ನೀಡಿದೆ. pic.twitter.com/tDvlWXQxaQ
— M B Patil (@MBPatil) May 15, 2021
ಈ ಕುರಿತು ಹೇಳಿಕೆ ನೀಡಿರುವ ಅವರು ಕರ್ನಾಟಕದಲ್ಲಿ ರಾಜಧಾನಿ ಬೆಂಗಳೂರು ನಗರದಲ್ಲಿ ಅತೀ ಹೆಚ್ಚು ಪ್ರಕರಣಗಳು ದಾಖಲಾಗುತ್ತಿರುವುದರಿಂದ ಬಿ.ಬಿ.ಎಂ.ಪಿ ವ್ಯಾಪ್ತಿಯಲ್ಲಿ ಕಳೆದ ವಾರದಿಂದ ತಪಾಸಣೆಗಳನ್ನು ಅತೀ ಕನಿಷ್ಠಗೊಳಿಸಲಾಗಿದೆ. ಇದರಿಂದ ಪಾಸಿಟಿವ್ ರೋಗಿಗಳ ಸಂಖ್ಯೆ ಸ್ವಾಬಾವಿಕವಾಗಿ ಇಳಿಮುಖವಾಗುತ್ತದೆ. ಇದೇ ಪ್ರಯೋಗವನ್ನು ರಾಜ್ಯಾದ್ಯಂತ ಮಾಡಲು ಹೊರಟಿರುವ ರಾಜ್ಯ ಸರಕಾರ, ಇಂದಿನಿಂದ ರಾಜ್ಯದ ಎಲ್ಲ ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಕೇವಲ 10 ಆರ್.ಟಿ.ಪಿ.ಸಿ.ಆರ್ ತಪಾಸಣೆಗೆ ಸೀಮಿತಗೊಳಿಸಿ ಮಾತ್ರ ಮೌಖಿಕ ಆದೇಶ ಹೊರಡಿಸಿದೆ.
ಉದಾಹರಣೆಗೆ ವಿಜಯಪುರ ಜಿಲ್ಲೆಯಲ್ಲಿ ಪೆಭ್ರುವರಿಯಿಂದ ಇಲ್ಲಿಯವರಗೆ ಪ್ರತಿನಿತ್ಯ 4000 ತಪಾಸಣೆಗಳನ್ನು ಮಾಡಲಾಗುತ್ತಿತ್ತು, ಇದೀಗ ಜಿಲ್ಲೆಯಲ್ಲಿ 1660 ಆರ್.ಟಿ.ಪಿ.ಸಿ.ಆರ್ ಟೆಸ್ಟ್ ಗಳಿಗೆ ಗರಿಷ್ಠ ಅವಕಾಶ ನೀಡಲಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಕೂಡಾ ಪ್ರತಿನಿತ್ಯ 6000 ಆರ್.ಟಿ.ಪಿ.ಸಿ.ಆರ್ ಟೆಸ್ಟ್ಗಳನ್ನು 2500ಕ್ಕೆ ಇಳಿಸಲಾಗಿದೆ. ಇದರಿಂದ ರೋಗಿಗಳ ಸಂಖ್ಯೆ ಇಳಿಮುಖವಾಗಿದೆ ಎಂದು ತೋರಿಸುವ ಸರ್ಕಾರ ನಿಜವಾದ ರೋಗಿಗಳ ಸಂಖ್ಯೆಯನ್ನು ಮುಚ್ಚಿಟ್ಟು ರೋಗಿಗಳಿಗೆ ಚಿಕಿತ್ಸೆ ಸೌಲಭ್ಯವನ್ನು ಒದಗಿಸದೇ ವಂಚನೆ ಮಾಡುತ್ತಿರುವುದು ಅತ್ಯಂತ ಅಮಾನವೀಯ ಕೃತ್ಯ ಎಂದು ಎಂ.ಬಿ.ಪಾಟೀಲ ತಿಳಿಸಿದ್ದಾರೆ.
ಮಹಾನಗರ, ನಗರ, ಪಟ್ಟಣಗಳಲ್ಲಿ ಹೆಚ್ಚಾಗಿದ್ದ ಕೊರೊನಾ ಗ್ರಾಮಾಂತರ ಪ್ರದೇಶಕ್ಕೂ ವ್ಯಾಪಿಸಿದ್ದು, ಅತೀ ಕಡಿಮೆ ಜನಸಾಂದ್ರತೆ ಹೊಂದಿರುವ ಮಲೆನಾಡಿನ ಹಳ್ಳಿಗಳಲ್ಲಿಯೂ ಇದು ವ್ಯಾಪಕವಾಗಿ ಹಬ್ಬುತ್ತಿದೆ. ಉತ್ತರಕನ್ನಡ ಜಿಲ್ಲೆಯಲ್ಲಿ ಇದರ ಹರಡುವಿಕೆಯನ್ನು ಗಮನಿಸಿದರೆ ಈ ರೋಗದ ಭೀಕರತೆ ತಿಳಿಯುತ್ತದೆ.
ಇಂತಹ ಸ್ಥಿತಿಯಲ್ಲಿ ಸರಕಾರ ಹೆಚ್ಚೆಚ್ಚು ಆರ್.ಟಿ.ಪಿ.ಸಿ.ಆರ್. ಟೆಸ್ಟ್ಗಳನ್ನು ಮಾಡಿ, ಅಗತ್ಯವಿರುವ ರೋಗಿಗಳಿಗೆ ಚಿಕಿತ್ಸೆ ಸೌಲಭ್ಯ, ಔಷಧಿ ಒದಗಿಸಲು ಮುಂದಾಗಬೇಕು ಅದನ್ನು ಬಿಟ್ಟು ವಾಮ ಮಾರ್ಗದ ಮೂಲಕ ರೋಗಿಗಳ ಸಂಖ್ಯೆ ಇಳಿಕೆಯಗಿದೆ ಎಂದು ತೋರಿಸುವ ಮೂಲಕ ಮಾಡಿದೆ ಎಂದು ರಾಜ್ಯದ ಜನತೆಯನ್ನು ಮತ್ತಷ್ಟು ಪ್ರಪಾತಕ್ಕೆ ದೂಡುವ ಕಾರ್ಯ ಇದಾಗಿದೆ ಎಂದು ಎಂ.ಬಿ.ಪಾಟೀಲ ತಿಳಿಸಿದ್ದಾರೆ.