ಬೆಂಗಳೂರು: ಶಾಸಕ ಉಮೇಶ್ ಕತ್ತಿ ಅವರು ಬಂಡಾಯವೆದ್ದಿದ್ದು ಇದು ಮೂರನೇ ಬಾರಿಯಾಗಿದ್ದು, ಕತ್ತಿಯವರ ಮೂರನೇ ಬಂಡಾಯ ಸಕ್ಸಸ್ ಆಗುತ್ತಾ ಅಥವಾ ಫೇಲ್ ಆಗುತ್ತಾ ಎಂಬುದು ಕುತೂಹಲ ಹುಟ್ಟಿಸಿದೆ.
ಸರ್ಕಾರಕ್ಕೆ ಇನ್ನೆರಡು ತಿಂಗಳಲ್ಲಿ 1 ವರ್ಷ ತುಂಬಲಿದೆ. ಈ ಹತ್ತು ತಿಂಗಳಲ್ಲಿ ಯಡಿಯೂರಪ್ಪ ಆಪ್ತರೇ ಮೂರು ಬಾರಿ ಬಂಡಾಯ ಎದ್ದಿದ್ದಾರೆ. ಈ ಮೂರೂ ಬಂಡಾಯಗಳಲ್ಲೂ ಉಮೇಶ್ ಕತ್ತಿಯೇ ಮುಂಚೂಣಿಯಲ್ಲಿದ್ದಿದ್ದು ವಿಶೇಷವಾಗಿದೆ.
ಸರ್ಕಾರ ರಚನೆ ಆದಾಗ ಉಮೇಶ್ ಕತ್ತಿ ಬದಲು ಸೋತಿದ್ದ ಲಕ್ಷ್ಮಣ್ ಸವದಿಗೆ ಬಂಪರ್ ಗಿಫ್ಟ್ ನೀಡಲಾಗಿತ್ತು. ಇದರಿಂದ ತಿವ್ರವಾಗಿ ಸಿಟ್ಟಿಗೆದ್ದಿದ್ದ ಕತ್ತಿ, ನಾನು ಬೇರೆ ನಿರ್ಧಾರ ತಗೋಬೇಕಾಗುತ್ತೆ ಅನ್ನೋ ಸಂದೇಶವನ್ನು ಮೊದಲ ಬಾರಿ ಬಂಡಾಯವೆದ್ದ ಸಂದರ್ಭದಲ್ಲಿ ಕೊಟ್ಟಿದ್ದರು. ಅಲ್ಲದೆ ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಪ್ರಧಾನಿ ದೇವೇಗೌಡರ ಜೊತೆ ಮಾತಕತೆಯನ್ನೂ ನಡೆಸಿದ್ದರು. ಆದರೆ ಆಗ ಯಡಿಯೂರಪ್ಪ ಅವರು ಉಮೇಶ್ ಕತ್ತಿಯನ್ನು ಮನವೊಲಿಸುವಲ್ಲಿ ಸಕ್ಸಸ್ ಆಗಿದ್ದರು. ಇದನ್ನೂ ಓದಿ: BIG EXCLUSIVE- ರಾಜ್ಯ ಬಿಜೆಪಿಯಲ್ಲಿ ಭುಗಿಲೆದ್ದ ಭಿನ್ನಮತ!
ನಂತರ ವಲಸೆ ಬಂದ ಅನರ್ಹರಿಗೆ ಸಚಿವ ಸ್ಥಾನ ಕೊಟ್ಟಾಗ ಎರಡನೇ ಬಾರಿ ಉಮೇಶ್ ಕತ್ತಿ ಮತ್ತೆ ಬಂಡಾಯ ಎದ್ದಿದ್ದರು. ಆ ಸಂದರ್ಭದಲ್ಲಿ ಜಗದೀಶ್ ಶೆಟ್ಟರ್ ನಿವಾಸದಲ್ಲಿ ಸಭೆ ನಡೆಸಿ ದೊಡ್ಡ ರಾದ್ಧಾಂತವೇ ನಡೆದಿತ್ತು. ಉಮೇಶ್ ಕತ್ತಿ ಸಹೋದರ ರಮೇಶ್ ಕತ್ತಿ ಜೊತೆ ದೆಹಲಿಯಲ್ಲಿ ಮೂರು ದಿನ ಬೀಡು ಬಿಟ್ಟಿದ್ದರು. ಕತ್ತಿಯ ಎರಡನೇ ಬಂಡಾಯ ಹೈಕಮಾಂಡ್ ಗೆ ಹತ್ತಿರ ಇರುವ ನಾಯಕರ ಮನವೊಲಿಕೆಯಿಂದ ಶಮನವಾಗಿತ್ತು. ಈ ಮಧ್ಯೆ ಯಡಿಯೂರಪ್ಪ ಸಹ ವಿಧಾನಪರಿಷತ್ ಚುನಾವಣೆ ಬಳಿಕ ಮಂತ್ರಿ ಸ್ಥಾನ ಕೊಡೋದಾಗಿ ಭರವಸೆ ಕೊಟ್ಟಿದ್ದರು.
ಇದೀಗ ರಾಜ್ಯಸಭೆ, ವಿಧಾನಪರಿಷತ್ ಚುನಾವಣೆ ವೇಳೆ ಮತ್ತೆ ಕತ್ತಿ ಟೀಮ್ ಕಟ್ಟಿಕೊಂಡು ಬಂಡಾಯವೆದ್ದಿದ್ದಾರೆ. ಉಮೇಶ್ ಕತ್ತಿಯವರ ಮೂರನೇ ಬಂಡಾಯ ಸಕ್ಸಸ್ ಆಗುತ್ತಾ ಎಂಬುದನ್ನು ಕಾದು ನೋಡಬೇಕಿದೆ. ಇದನ್ನೂ ಓದಿ: ಬಂಡಾಯ ಅಲ್ಲ, ಕೊಟ್ಟ ಮಾತು ನೆನಪಿಸಿದ್ದೇವೆ: ಉಮೇಶ್ ಕತ್ತಿ ಸೋದರ ರಮೇಶ್ ಕತ್ತಿ