ಮಡಿಕೇರಿ: ರಾಜ್ಯದಲ್ಲಿ ಕೋವಿಡ್ ಸೋಂಕು ಇನ್ನೂ ಸಂಪೂರ್ಣ ಹೋಗಿಲ್ಲ ಎನ್ನುವ ಕಾರಣದಿಂದಲೇ ಸರ್ಕಾರ ಕೆಎಸ್ಆರ್ ಟಿಸಿ ಬಸ್ಸುಗಳಲ್ಲಿ ಅಥವಾ ಯಾವುದೇ ಸಾರಿಗೆ ಬಸ್ಸುಗಳಲ್ಲಿ ಶೇ.50 ರಷ್ಟು ಸೀಟುಗಳಲ್ಲಿ ಮಾತ್ರ ಜನರ ಸಾಗಾಟಕ್ಕೆ ಅವಕಾಶ ಮಾಡಲಾಗಿದೆ. ಆದರೆ ಕೊಡಗು ಜಿಲ್ಲೆಯಲ್ಲಿ ಮಾತ್ರ ಕೆಎಸ್ಆರ್ ಟಿಸಿ ಬಸ್ಸುಗಳಲ್ಲೇ ಕೋವಿಡ್ ನಿಯಮ ಸಂಪೂರ್ಣ ಉಲ್ಲಂಘನೆ ಆಗುತ್ತಿದೆ.
ಎಲ್ಲಾ ಸೀಟುಗಳಲ್ಲಿ ಜನರನ್ನು ಭರ್ತಿಯಾಗಿ ಕುಳಿತುಕೊಳ್ಳುವ ಜೊತೆಗೆ ಬಸ್ಸಿನಲ್ಲಿ ಜನರು ನೇತಾಡಿಕೊಂಡು ಹೋಗುತ್ತಿದ್ದಾರೆ. ಆ ಮೂಲಕ ಕೆಎಸ್ಆರ್ ಟಿಸಿ ಬಸ್ಸುಗಳಲ್ಲಿ ಕೋವಿಡ್ ನಿಯಮಗಳನ್ನು ಉಲ್ಲಂಘಿಸಿ ಸೋಂಕು ಇನ್ನಷ್ಟು ಹರಡುವುದಕ್ಕೆ ಕಾರಣವಾಗುತ್ತಿದ್ದಾರೆ.
ಮಡಿಕೇರಿಯಿಂದ ಕುಶಾಲನಗರಕ್ಕೆ ಹೋಗುತ್ತಿದ್ದ ಬಸ್ಸಿನಲ್ಲಿ ಜನರು ನೇತಾಡಿಕೊಂಡು ಪ್ರಯಾಣಿಸುತ್ತಿದ್ದರು. ಮಾಧ್ಯಮಗಳನ್ನು ಕಂಡು ಮಡಿಕೇರಿಯ ಟೋಲ್ ಗೇಟ್ ನಲ್ಲಿ ಡ್ರೈವರ್ ಬಸ್ಸು ನಿಲ್ಲಿಸಿದ್ದಾನೆ. ಒಂದಷ್ಟು ಜನರು ಕೆಳಗಿಳಿಯುವಂತೆ ಹೇಳಿದ್ದಕ್ಕೆ ಜನರು ಗಲಾಟೆ ಮಾಡಿದ್ದಾರೆ. ಇದನ್ನೂ ಓದಿ: ಅಡುಗೆ ಮಾಡುವ ವರ ಬೇಕಾಗಿದ್ದಾನೆ- ಜಾಹೀರಾತು ವೈರಲ್
ಒಂದೆಡೆ ಕೊಡಗು ಜಿಲ್ಲೆಯಲ್ಲಿ ಕೊವಿಡ್ ಸೋಂಕು ನಿಯಂತ್ರಣಕ್ಕೆ ಬಾರದೆ ಇಂದಿಗೂ ಲಾಕ್ ಡೌನ್ ಮುಂದುವರಿಸಲಾಗಿದೆ. ಆದರೂ ಕೆಎಸ್ಆರ್ ಟಿಸಿ ಬಸ್ಸುಗಳಲ್ಲಿ ಕೊವಿಡ್ ನಿಯಮ ಉಲ್ಲಂಘಿಸಿ ಮತ್ತಷ್ಟು ಜನರಿಗೆ ಸೋಂಕು ಹರಡುವಂತೆ ಮಾಡುತ್ತಿರುವುದು ವಿಷಾದನೀಯ.