ಬೆಂಗಳೂರು: 2021 ಹೊಸ ವರ್ಷದ ಮೊದಲ ವಾರದಲ್ಲೇ ಸರ್ಕಾರಿ ನೌಕರರ ಗಳಿಕೆ ರಜೆಯ ನಗದೀಕರಣ ಸೌಲಭ್ಯವನ್ನು ರದ್ದು ಪಡಿಸುವ ಮೂಲಕ ರಾಜ್ಯ ಸರ್ಕಾರ ಸರ್ಕಾರಿ ನೌಕರರಿಗೆ ಶಾಕ್ ಕೊಟ್ಟಿದೆ.
2021ನೇ ಜನವರಿ 1 ರಿಂದ ಡಿಸೆಂಬರ್ 31 ರವರೆಗಿನ ಅವಧಿಯಲ್ಲಿ ಸರ್ಕಾರಿ ನೌಕರರಿಗೆ ಗಳಿಕೆ ರಜೆಯ ನಗದೀಕರಣ ಸೌಲಭ್ಯವನ್ನು ರದ್ದುಪಡಿಸಿ ಆದೇಶ ಹೊರಡಿಸಿದೆ. ಇದರಲ್ಲಿ ನಿವೃತ್ತಿ ಹೊಂದುವ ನೌಕರರಿಗೆ ಸ್ವಲ್ಪ ವಿನಾಯಿತಿ ಕೊಡಲಾಗಿದೆ.
2021ರ ಜನವರಿಯಿಂದ ಡಿಸೆಂಬರ್ವರೆಗಿನ ಅವಧಿಯಲ್ಲಿ ನಿವೃತ್ತಿ ಹೊಂದುವ ಅರ್ಹ ಸರ್ಕಾರಿ ನೌಕರರು ಅಥವಾ ಅಧಿಕಾರಿಗಳಿಗೆ ಈ ಆದೇಶದಿಂದ ವಿನಾಯಿತಿ ಕೊಡಲಾಗಿದೆ ಎಂದು ಹಣಕಾಸು ಇಲಾಖೆ ತಿಳಿಸಿದೆ.
ಹಣಕಾಸು ಇಲಾಖೆಯು ತನ್ನ ಹೊಸ ಆದೇಶದ ಪ್ರಕಾರ 2021ರ ಜನವರಿಯಿಂದ ಡಿಸೆಂಬರ್ವರೆಗಿನ ಅವಧಿಯಲ್ಲಿ ನಿವೃತ್ತಿ ಹೊಂದುವ ಅಧಿಕಾರಿಗಳು ಮತ್ತು ನೌಕರರು ನಿವೃತ್ತಿ ಹೊಂದುವ ತಿಂಗಳಲ್ಲಿ ಗಳಿಕೆ ರಜೆ ನಗದೀಕರಣ ಪಡೆಯಬಹುದೆಂದು ಸ್ಪಷ್ಟ ಪಡಿಸಿದೆ. ಈ ಆದೇಶವು ಸರ್ಕಾರದಿಂದ ಅನುದಾನ ಪಡೆಯುವ ಅಥವಾ ಪಡೆಯದಿರುವ ಸರ್ಕಾರದ ಎಲ್ಲಾ ಉದ್ಯಮ ಸಂಸ್ಥೆಗಳ ನೌಕರರಿಗೂ ಅನ್ವಯಿಸಲಿದೆ ಎಂದು ತಿಳಿಸಿದೆ.