ಚಿಕ್ಕೋಡಿ/ಬೆಳಗಾವಿ: ಸರ್ಕಾರಿ ಕೋವಿಡ್ ಕೇರ್ ಸೆಂಟರ್ ಗೆ 50 ಲಕ್ಷ ರೂ. ಮೌಲ್ಯದ 50 ಆಕ್ಸಿಜನ್ ಕಾನ್ಸಂಟ್ರೇಟ್ ಯಂತ್ರಗಳನ್ನು ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ತಮ್ಮ ಸ್ವಂತ ಹಣದಿಂದ ನೀಡಿದ್ದಾರೆ.
ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದ ಹೊರವಲಯದಲದಲ್ಲಿ ತಾಲೂಕಾಡಳಿತ ನಿರ್ಮಿಸಿರುವ ಕೊವಿಡ್ ಕೇರ್ ಸೆಂಟರ್ ಗೆ 50 ಲಕ್ಷ ರೂ. ಮೌಲ್ಯದ ಆಕ್ಸಿಜನ್ ಕಾನ್ಸಂಟ್ರೇಟ್ ಯಂತ್ರಗಳು ಹಾಗೂ ಸಲಕರಣೆಗಳನ್ನು ನೀಡಿದ್ದಾರೆ. ತಲಾ 85 ಸಾವಿರ ರೂ.ಗಳ 50 ಆಕ್ಸಿಜನ್ ಕಾನ್ಸಂಟ್ರೇಟ್ ಯಂತ್ರಗಳನ್ನು ಅಥಣಿ ತಾಲೂಕು ದಂಡಾಧಿಕಾರಿ ದುಂಡಪ್ಪ ಕೋಮಾರ ಮೂಲಕ ಹಸ್ತಾಂತರಿಸಿದ್ದಾರೆ.
ಲಕ್ಷ್ಮಣ ಸವದಿ ಅವರು ತಂದೆ, ತಾಯಿ ಹೆಸರಿನಲ್ಲಿರುವ ಸತ್ಯ ಸಂಗಮ ಪ್ರತಿಷ್ಠಾನದ ಮೂಲಕ ಈ ಆಕ್ಸಿಜನ್ ಕಾನ್ಸಂಟ್ರೇಟ್ ಯಂತ್ರಗಳನ್ನು ನೀಡಿದ್ದಾರೆ. ಈ ಮೂಲಕ ಬಡ ಜನರ ಕಷ್ಟಕ್ಕೆ ಸ್ಪಂದಿಸಿದ್ದಾರೆ. ಕೋವಿಡ್ ಕೇರ್ ಆಸ್ಪತ್ರೆಗೆ ಡಿಸಿಎಂ ಲಕ್ಷ್ಮಣ ಸವದಿ ಚಾಲನೆ ನೀಡಿದರು. ಕೋವಿಡ್ ನಿಂದ ಸಾವನ್ನಪ್ಪಿದ ಅವರ ಸಹೋದರ ಹಾಗೂ ಸಹೋದರನ ಪುತ್ರನನ್ನು ನೆನೆದು ಭಾವುಕರಾದರು. ಕೋವಿಡ್ ಕೇರ್ ಉದ್ಘಾಟನಾ ಸಮಾರಂಭದಲ್ಲಿ ಡಿಸಿಎಂ ಪುತ್ರ ಚಿದಾನಂದ ಸವದಿ, ತಾಲೂಕು ಆರೋಗ್ಯಾಧಿಕಾರಿ ಬಸವರಾಜ್ ಕಾಗೆ ಸೇರಿದಂತೆ ಹಲವರು ಉಪಸ್ಥಿತರಿದ್ದರು.