ವಿಜಯಪುರ: ಡೆಲಿವರಿ ಸಮಯದಲ್ಲಿ ಗರ್ಭಿಣಿಯ ಹೊಟ್ಟೆಯಲ್ಲಿ ಡ್ರೆಸ್ಸಿಂಗ್ ಬಟ್ಟೆ ಬಿಟ್ಟಿರುವ ಘಟನೆ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕು ಆಸ್ಪತ್ರೆಯಲ್ಲಿ ನಡೆದಿದೆ.
ಮುದ್ದೇಬಿಹಾಳ ನಿವಾಸಿ ಶಾಹಿನ್ ಉತ್ನಾಳ ಡೆಲಿವರಿಗೆಂದು ವಿಜಯಪುರ ಜಿಲ್ಲಾ ಸರ್ಕಾರಿ ಆಸ್ಪತ್ರಗೆ ದಾಖಲಾಗಿದ್ದರು. ಸರ್ಕಾರಿ ಆಸ್ಪತ್ರೆಯಲ್ಲಿ 6 ತಿಂಗಳ ಹಿಂದೆ ಮಹಿಳೆಗೆ ಹೆರಿಗೆಯಾಗಿತ್ತು. ಆಸ್ಪತ್ರೆಯಿಂದ ಮನೆಗೆ ಹೋಗುವಾಗ ತಾಯಿ ಮತ್ತು ಮಗು ಆರೋಗ್ಯವಾಗಿಯೇ ಹೋಗಿದ್ದರು. ಆದರೆ 6 ತಿಂಗಳ ನಂತರ ಶಾಹಿನ್ಗೆ ಹೊಟ್ಟೆನೋವು ಕಾಣಿಸಿಕೊಂಡಿದೆ. ನಂತರ ವೈದ್ಯರನ್ನು ಸಂಪರ್ಕಿಸಿದಾಗ ಮಹಿಳೆಗೆ ವೈದ್ಯರು ಆಘಾತಕಾರಿ ವಿಷಯವನ್ನು ಹೇಳಿದ್ದಾರೆ.
ಡೆಲಿವರಿ ಸಮಯದಲ್ಲಿ ರಕ್ತಸ್ರಾವ ಆಗದಂತೆ ವೈದ್ಯರು ಬಟ್ಟೆ ಕಟ್ಟಿದ್ದರು. ಆದರೆ ವೈದ್ಯರು ಕೊನೆಯಲ್ಲಿ ಬಾಣಂತಿಯ ಹೊಟ್ಟೆಯಲ್ಲಿ ಬಟ್ಟೆ ಬಿಟ್ಟಿರುವುದನ್ನೆ ಮರೆತು ಬಿಟ್ಟಿದ್ದಾರೆ. ಹಾಗಾಗಿ ಮಹಿಳೆಗೆ ಹೊಟ್ಟೆ ನೋವು ಕಾಣಿಸಿಕೊಂಡಿದೆ. ವೈದ್ಯರು ಹೊಟ್ಟೆಯಲ್ಲಿ ಬಟ್ಟೆ ಇರುವುದನ್ನು ತಿಳಿದು ಮಹಿಳೆ ಹೊಟ್ಟೆಯಲ್ಲಿ ಇರುವ ಡ್ರೆಸ್ಸಿಂಗ್ ಬಟ್ಟೆಯನ್ನು ಡಾ. ಮಕಾನದಾರ ತೆಗೆದು ಮಹಿಳೆಯ ಜೀವ ಉಳಿಸಿದ್ದಾರೆ.
ವೈದ್ಯರ ಎಡವಟ್ಟಿಗೆ ಕುಟುಂಬಸ್ಥರು ಕಂಗಾಲಾಗಿದ್ದಾರೆ. ಡಾಕ್ಟರ್ ಗಳನ್ನು ನಂಬಿ ನಾವು ಸರ್ಕಾರಿ ಆಸ್ಪತ್ರೆಗೆ ಬರುತ್ತೇವೆ. ನಮ್ಮಂತೆ ಯಾರಿಗೂ ಆಗಬಾರದು. ವೈದ್ಯರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಕುಟುಂಬಸ್ಥರ ಹಾಗೂ ಸ್ಥಳೀಯರು ಆಗ್ರಹಿಸುತ್ತಿದ್ದಾರೆ.