ಬೆಂಗಳೂರು: ಸರ್ಕಾರದ ವಿರುದ್ಧ ಸಾರಿಗೆ ನೌಕರರು ಆಕ್ರೋಶ ಹೊರ ಹಾಕುತ್ತಿದ್ದು, ರಾಜ್ಯದಲ್ಲಿ ಮತ್ತೆ ಕೆಎಸ್ಆರ್ ಟಿಸಿ, ಬಿಎಂಟಿಸಿ ಸಂಚಾರ ಸ್ತಬ್ಧವಾಗುತ್ತಾ ಪ್ರಶ್ನೆಯೊಂದು ಹುಟ್ಟಿಕೊಂಡಿದೆ.
ಡಿಸೆಂಬರ್ ನಲ್ಲಿ ಬರೋಬ್ಬರಿ ನಾಲ್ಕು ದಿನ ಬಸ್ ಸಂಚಾರ ಸ್ತಬ್ಧವಾಗಿ ಪ್ರಯಾಣಿಕರು ಸಂಕಷ್ಟದಲ್ಲಿ ಸಿಲುಕಿದ್ದರು. ಸಾರಿಗೆ ನೌಕರರು ಸರ್ಕಾರಕ್ಕೆ ಕೊಟ್ಟಿದ್ದ ಡೆಡ್ಲೈನ್ನಲ್ಲಿ ಅರ್ಧ ಅವಧಿ ಮುಕ್ತಾಯಗೊಂಡಿದ್ದು, ಭರವಸೆಗಳು ಈಡೇರದ ಹಿನ್ನೆಲೆ ಮತ್ತೆ ಪ್ರತಿಭಟನೆ ನಡೆಸುವ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ. ಡಿಸೆಂಬರ್ ನಲ್ಲಿ ಬಸ್ ಬಂದ್ ಸರ್ಕಾರ ನೌಕರರಿಗೆ ಲಿಖಿತ ಭರವಸೆ ಕೊಟ್ಟಿತ್ತು. ಬಂದ್ ಹಿಂಪಡೆದು 2 ತಿಂಗಳಾದ್ರೂ ಭರವಸೆ ಈಡೇರದ ಹಿನ್ನೆಲೆ ಫೆಬ್ರವರಿ ತಿಂಗಳಲ್ಲಿ ಮತ್ತೆ ಸಾರಿಗೆ ಬಂದ್ ಮಾಡುವ ಎಚ್ಚರಿಕೆ ನೀಡಿದ್ದಾರೆ.
ಸಾರಿಗೆ ನೌಕರರ ಪ್ರತಿಭಟನೆಯ ಮುಂದಾಳು ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವದಲ್ಲಿಂದು ಸುದ್ದಿಗೋಷ್ಠಿ ನಡೆಸಲಾಗುತ್ತಿದೆ. ಸುದ್ದಿಗೋಷ್ಠಿಯಲ್ಲಿ ತಮ್ಮ ಮುಂದಿನ ಹೋರಾಟದ ರೂಪುರೇಷೆಗಳ ಬಗ್ಗೆ ಕೋಡಿಹಳ್ಳಿ ಚಂದ್ರಶೇಖರ್ ಮಾಹಿತಿ ನೀಡುವ ಸಾಧ್ಯತೆಗಳಿವೆ. ಪ್ರತಿಭಟನೆ ವೇಳೆ ಸಾರಿಗೆ ನೌಕರರ 10 ಬೇಡಿಕೆಗಳ ಪೈಕಿ 9ಕ್ಕೆ ಸರ್ಕಾರ ಒಪ್ಪಿ ಲಿಖಿತ ಭರವಸೆ ನೀಡಿತ್ತು.