ದಾವಣಗೆರೆ: ಜನರನ್ನು ಕೋವಿಡ್ ನಿಂದ ಕಾಪಾಡಬೇಕು ಎಂದರೆ ಸರಿಯಾದ ಸಮಯಕ್ಕೆ ಲಸಿಕೆ ನೀಡಬೇಕು. ಆದರೆ ಸರ್ಕಾರದ ಬಳಿ ಲಸಿಕೆ ದಾಸ್ತಾನು ಇಲ್ಲ, ಸರಿಯಾಗಿ ಪೂರೈಕೆ ಮಾಡುತ್ತಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಗುಡುಗಿದರು.
ನಗರದ ದುರ್ಗಾಂಬಿಕ ದೇವಸ್ಥಾನ ಬಳಿ ಶಾಸಕ ಶಾಮನೂರು ಶಿವಶಂಕರಪ್ಪ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಲಸಿಕೆ ನೀಡುತ್ತಿದ್ದು, ಲಸಿಕಾ ಕೆಂದ್ರಕ್ಕೆ ಭೇಟಿ ನೀಡಿದ ಬಳಿಕ ಮಾತನಾಡಿದರು. ಸರ್ಕಾರ ಮಾಡುವ ಕೆಲಸವನ್ನು ಶಾಮನೂರು ಶಿವಶಂಕರಪ್ಪ, ಎಸ್.ಎಸ್.ಮಲ್ಲಿಕಾರ್ಜುನ್ ಮಾಡುತ್ತಿದ್ದು, ಅರ್ಹ ಪ್ರತಿಯೊಬ್ಬರಿಗೂ ಲಸಿಕೆ ಕೊಡಿಸುವ ಕೆಲಸ ಮಾಡುತ್ತಿದ್ದಾರೆ. ಸರ್ಕಾರ ಸಕಾಲಕ್ಕೆ ಲಸಿಕೆ ನೀಡದ ಕಾರಣ ಈ ಕೆಲಸವನ್ನು ಶಾಮನೂರು ಶಿವಶಂಕರಪ್ಪ ಮಾಡುತ್ತಿದ್ದಾರೆ. ಸರ್ಕಾರದ ಬಳಿ ವ್ಯಾಕ್ಸಿನ್ ಇಲ್ಲ, ದಾಸ್ತಾನು ಇದೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮುಂದಿನ ಸಿಎಂ ಸಿದ್ದರಾಮಯ್ಯ
ಜಿಲ್ಲೆಯ ಹರಿಹರ ಕ್ಷೇತ್ರದ ಶಾಸಕ ಎಸ್.ರಾಮಪ್ಪ ಅವರ ಪುತ್ರಿಯ ವಿವಾಹಕ್ಕೆ ಸಿದ್ದರಾಮಯ್ಯ ಆಗಮಿಸಿದ್ದು, ಈ ವೇಳೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಎಂದು ಕಾರ್ಯಕರ್ತರು ಕೂಗಿದ್ದಾರೆ.
ಸಿದ್ದರಾಮಯ್ಯನವರು ಕಲ್ಯಾಣ ಮಂಟಪಕ್ಕೆ ಆಗಮಿಸುತ್ತಿದ್ದಂತೆ ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಜಯವಾಗಲಿ ಎಂದು ಕಾರ್ಯಕರ್ತರು ಕೂಗಿದರು. ಶಾಸಕ ರಾಮಪ್ಪ ಅವರ ಮಗಳ ಮದುವೆಯಲ್ಲಿ ಸಾಮಾಜಿಕ ಅಂತರ ಮಾಯ ಆಗಿದ್ದು, ಕಾರ್ಯಕರ್ತರು ಸಾಮಾಜಿಕ ಅಂತರ ಮರೆತು ಘೋಷಣೆ ಕೂಗಿದರು. ಜನ ಗುಂಪು ಸೇರಿದರು. ಅಲ್ಲದೆ ಮದುವೆಗೆ ಕೇವಲ 40 ಜನರಿಗೆ ಮಾತ್ರ ಅವಕಾಶ ಇದೆ. ಆದರೆ ಶಾಸಕರ ಮಗಳ ಮದುವೆಯಲ್ಲಿ ಹೆಚ್ಚು ಜನ ಸೇರಿದ್ದರು. ಈ ಮೂಲಕ ಜನಪ್ರತಿನಿಧಿಗಳೇ ಕೋವಿಡ್ ನಿಯಮವನ್ನು ಗಾಳಿಗೆ ತೂರಿದ್ದಾರೆ.