ಮಡಿಕೇರಿ: ಮೈಸೂರು ದಸರಾದಷ್ಟೇ ಖ್ಯಾತಿ ಪಡೆಯುತ್ತಿದ್ದ ಮಂಜಿನ ನಗರಿ ಮಡಿಕೇರಿ ದಸರಾ ಉತ್ಸವಕ್ಕೆ ಈ ಬಾರಿ ಕೊರೊನಾ ಸೂತಕದ ಛಾಯೆ ಆವರಿಸಿದೆ. ಸಾಂಪ್ರದಾಯಿಕ ದಸರಾ ಆಚರಣೆಗೆ ಮಡಿಕೇರಿಯಲ್ಲಿ ತಯಾರಿ ನಡೆದಿದ್ದು, ನಗರದ ನಾಲ್ಕು ಶಕ್ತಿ ದೇವತೆಗಳೂ ಸೇರಿದಂತೆ ಮಡಿಕೇರಿಯ ದಶದೇವಾಲಯಗಳಲ್ಲಿ ಇಂದು ರಾತ್ರಿ ನಡೆಯುವ ಮೆರವಣಿಗೆಗೆ ಸಿದ್ಧತೆ ನಡೆಯುತ್ತಿದೆ.
ಇದೇ ಮೊದಲ ಬಾರಿಗೆ ಅತ್ಯಂತ ಸರಳವಾಗಿ, ಜನರೇ ಸೇರದ ರೀತಿಯಲ್ಲಿ ನಾಡಹಬ್ಬದ ಆಚರಣೆಯಾಗುತ್ತಿದೆ. ಕೊರೊನಾ ಹಿನ್ನೆಲೆಯಲ್ಲಿ ಹೆಚ್ಚು ಜನರು ಸೇರದಂತೆ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದ್ದು, ಸರಳ ದಸರಾ ಆಚರಿಸುವುದಾಗಿ ದಸರಾ ಸಮಿತಿಯಿಂದ ನಿರ್ಧಾರ ಕೈಗೊಂಡಿದ್ದು, ಸಾರ್ವಜನಿಕರು ಸಹಕರಿಸುವಂತೆ ಮಡಿಕೇರಿ ದಸರಾ ಸಮಿತಿ ಮನವಿ ಮಾಡಿದೆ.
ಇನ್ನು ಇಂದು ರಾತ್ರಿ ದಶದೇವಾಲಯಗಳಿಂದ ಅತ್ಯಂತ ಸರಳ ರೀತಿಯಲ್ಲಿ ಪಿಕ್ ಅಪ್ ವಾಹನದಲ್ಲಿ ದೇವರ ಒಂದು ಮೂರ್ತಿಯನ್ನು ಇಟ್ಟು ಕಳಸದೊಂದಿಗೆ ನಗರದ ಬನ್ನಿ ಮಂಟಪಕ್ಕೆ ಮೆರವಣಿಗೆ ಸಾಗಲಿದೆ. ಅಲ್ಲದೇ ಈ ಬಾರಿ ಮಂಟಪಗಳ ಪ್ರದರ್ಶನ ಅಥವಾ ಬಹುಮಾನಗಳ ಸ್ಪರ್ಧೆಗಳು ಇಲ್ಲ. ಒಂದು ದೇವಾಲಯದ ಮಂಟಪದೊಂದಿಗೆ. 20 ಮಂದಿ ಮಾತ್ರ ದೇವಾಲಯದ ಸಮಿತಿ ಸದಸ್ಯರು ತೆರಳಲು ಅವಕಾಶ ಮಾಡಿಕೊಡಲಾಗಿದೆ.
ದಸರಾ ಹಿನ್ನೆಲೆಯಲ್ಲಿ ಕೊಡಗಿನ ಪ್ರವಾಸಿತಾಣಗಳು ಕೂಡ ಬಂದ್ ಆಗಿದ್ದು, ನಗರದಲ್ಲಿ ಜನ ದಟ್ಟಣೆಯು ಬೆಳಿಗ್ಗೆಯಿಂದ ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಕಂಡು ಬರುತ್ತಿದೆ. ಜಿಲ್ಲಾಡಳಿತದಿಂದ ಮಾಸ್ಕ್ ದರಿಸುವಿಕೆ ಕಟ್ಟುನಿಟ್ಟಿನ ನಿಯಮ ಜಾರಿಗೊಳಿಸಿರುವ ಬೆನ್ನಲ್ಲೇ ಇದೀಗಾ ಕಳೆದ ಒಂದು ವಾರದಿಂದ ಕೊಡಗಿನಲ್ಲಿ ಕೊರೊನಾ ಸೋಂಕು ಪೀಡಿತರ ಸಂಖ್ಯೆಯು ಗಣನೀಯವಾಗಿ ಇಳಿಕೆಯಾಗುತ್ತಿದೆ.