ಸಮಾಜ ಸೇವೆ ನನಗೆ ಆತ್ಮ ತೃಪ್ತಿ ನೀಡಿದೆ: ಪೋಷಕ ನಟ ಜಯಪ್ರಕಾಶ್ ಎನ್.ಬಿ

Public TV
5 Min Read
jayaprakash NB 2

ರಂಗಭೂಮಿ ಕಲಾವಿದ, ಪೋಷಕ ನಟ, ಸಾಮಾಜಿಕ ಕೆಲಸಗಳ ಮೂಲಕ ಎಲ್ಲರಿಗೂ ಪ್ರೇರಣೆಯಾಗಿರೋ ಜಯಪ್ರಕಾಶ್ ಎನ್.ಬಿ ಚಿತ್ರರಂಗದಲ್ಲಿ ಜೆಪಿ ಎಂದೇ ಖ್ಯಾತಿ. ರಂಗಭೂಮಿ, ಚಿತ್ರರಂಗ ಹಾಗೂ ಸಾಮಾಜಿಕ ಕೆಲಸಗಳ ಬಗ್ಗೆ ಹಲವು ಮಾಹಿತಿಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ. ಜೀವನದ ಪ್ರಮುಖ ಘಟನೆಗಳ ಬಗ್ಗೆ ಅವರ ಮಾತುಗಳು ಇಲ್ಲಿವೆ.

jayaprakash NB 3

ಜೆಪಿ ಎಂದೇ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನೀವು ನಿಮ್ಮ ಹಿನ್ನೆಲೆಯ ಬಗ್ಗೆ ತಿಳಿಸಿ.
ನಾನು ಹುಟ್ಟಿ ಬೆಳೆದಿದ್ದು ಬೆಂಗಳೂರಿನ ಚಿಕ್ಕಪೇಟೆಯಲ್ಲಿ. ನನ್ನ ತಂದೆ ದೇವಸ್ಥಾನದಲ್ಲಿ ಅರ್ಚಕರು. ಚಿಕ್ಕಲ್ಲಿರುವಾಗಲೇ ನಾನು ಸಂಸ್ಕೃತ, ಶಾಸ್ತ್ರ ಎಲ್ಲವನ್ನು ಅಭ್ಯಾಸ ಮಾಡಿದ್ದೇನೆ. ಬಿಎಸ್‍ಸಿ ಪದವಿ ಕೂಡ ಪಡೆದಿದ್ದೇನೆ. ನನಗೆ ಹರಿಕಥೆ ಹಾಗೂ ನಾಟಕದಲ್ಲಿ ವಿಪರೀತವಾದ ಆಸಕ್ತಿ ಇತ್ತು. ಹರಿಕಥೆ, ಸಿನಿಮಾ, ನಾಟಕ, ಸಿನಿಮಾ ಕುರಿತಾದ ಓದು ನನಗೆ ಬಹಳ ಖುಷಿ ಕೊಡುತ್ತಿದ್ವು. ಪ್ರೌಢ ಶಾಲೆ ಶಾಲೆಯಲ್ಲಿರುವಾಗಲೇ ನಾಟಕದ ಗೀಳು ಹತ್ತಿಕೊಂಡಿತ್ತು ಮನೆಯ ಹತ್ತಿರದಲ್ಲಿದ್ದ ಅಪ್ಸರ ಚಿತ್ರಮಂದಿರ ಬಳಿ ಮಹದೇವ ಸ್ವಾಮಿ ನಾಟಕ ಕಂಪನಿಯಲ್ಲಿ ನಾಟಕ ನಡೆಯುತ್ತಿತ್ತು. ನಾನು ಅಲ್ಲಿಗೆ ಪ್ರತಿನಿತ್ಯ ಹೋಗುತ್ತಿದ್ದೆ. ರಾಜಾ ಹರಿಶ್ಚಂದ್ರ, ರಾಜಾ ವಿಕ್ರಮ, ಸಾಹುಕಾರ, ಚಂದ್ರಹಾಸ ಹೀಗೆ ಹಲವಾರು ನಾಟಕಗಳನ್ನು ನೋಡುತ್ತಾ ಪ್ರಭಾವಿತನಾದೆ. ನಾನು ರಂಗಭೂಮಿಗೆ ಬರಬೇಕೆಂದು ಅನಿಸಿತು. ಆಗ ನಾನು ಕನ್ನಡ, ಹಿಂದಿ, ಹೀಗೆ ಎಲ್ಲಾ ಭಾಷೆಯ ಸಿನಿಮಾ, ರಂಗಭೂಮಿ ನಾಟಕಗಳನ್ನು ನೋಡಲು ಆರಂಭಿಸಿದೆ. ಇದರ ಜೊತೆಗೆ ಹಲವು ಪುಸ್ತಕಗಳನ್ನು ಓದಿ ಸಿನಿಮಾ ಬಗೆಗೆ ಒಂದಿಷ್ಟು ವಿಷಯಗಳನ್ನು ಕಲಿಯುತ್ತಾ ಹೋದೆ. ಹರಿಕಥೆ ಬಗ್ಗೆಯೂ ಆಳವಾಗಿ ಅಧ್ಯಯನ ಮಾಡುತ್ತಾ ಮಾಡುತ್ತಾ ರಂಗಭೂಮಿಯಲ್ಲಿ ನಟಿಸಲು ಆರಂಭಿಸಿದೆ. ಇದನ್ನೂ ಓದಿ: ಒಂದೇ ದಿನ ಜೀವನದಲ್ಲಿ ಗಳಿಸಿದ್ದೆಲ್ಲ ಕಳೆದುಕೊಂಡೆ- ಮಿಮಿಕ್ರಿ ದಯಾನಂದ್ ಮನದಾಳದ ಮಾತು

jayaprakash NB 4

ಸಿನಿಮಾ, ಸೀರಿಯಲ್ ನಂಟು ಬೆಳೆದಿದ್ದು ಹೇಗೆ?
ಬಿಎಸ್‍ಸಿ ನಂತರ ನಾನು ಎನ್‍ಜಿಎಫ್‍ನಲ್ಲಿ ಕೆಲಸ ನಿರ್ವಹಿಸುತ್ತಿದ್ದೆ. ಇದರ ಜೊತೆಗೆ ರಂಗಭೂಮಿಯ ನಟನೆಯೂ ಮುಂದುವರಿದಿತ್ತು ಈ ಸಂದರ್ಭದಲ್ಲಿ ಸರಿಗಮ ವಿಜಿ ಪರಿಚಿತರಾದ್ರು. ನಂತರ ನಾವೆಲ್ಲ ಸೇರಿ ಒಂದು ಗುಂಪು ಮಾಡಿಕೊಂಡು ಹಾಸ್ಯ ನಾಟಕಗಳನ್ನು ಪ್ರದರ್ಶನ ಮಾಡಲು ಆರಂಭಿಸಿದ್ವಿ. ನಾವು ಆರಂಭಿಸಿದ ಸಂಸಾರದಲ್ಲಿ ಸರಿಗಮ ನಾಟಕ ಕಡಿಮೆ ಅವಧಿಯಲ್ಲಿ ಹೆಚ್ಚು ಪ್ರದರ್ಶನ ಕಂಡು ಹೆಸರು ಮಾಡಿತು. ಇದರಲ್ಲಿನ ನನ್ನ ಪಾತ್ರ ಕೂಡ ಜನಮನ್ನಣೆ ಪಡೆಯಿತು. ಹೀಗೆ ನಾವೆಲ್ಲರೂ ಹೊಸ ಅಭಿರುಚಿಯ ಹಾಸ್ಯ ನಾಟಕಗಳನ್ನು ಮಾಡುತ್ತಾ ಮನರಂಜನೆ ನೀಡುತ್ತಿದ್ವಿ. ನನ್ನ ನಟನೆ ನೋಡಿ ಮೆಚ್ಚಿಕೊಂಡ ಅಮೃತಂ ಅವರು ಸಿನಿಮಾದಲ್ಲಿ ನಟಿಸಲು ಅವಕಾಶ ಕಲ್ಪಿಸಿಕೊಟ್ರು. ಅಂಬರೀಶ್, ಗೀತಾ ಅಭಿನಯದ ಮಧುರ ಬಾಂದವ್ಯ ನಾನು ನಟಿಸಿದ ಮೊದಲ ಸಿನಿಮಾ. ಈ ಚಿತ್ರದಲ್ಲಿ ಗೀತಾ ಅವರ ಅಣ್ಣನ ಪಾತ್ರದಲ್ಲಿ ನಾನು ನಟಿಸಿದೆ.

jayaprakash NB 8

ಸಿನಿಮಾದಲ್ಲಿ ಅವಕಾಶಗಳಿದ್ದರೂ ನಾಟಕ ಹಾಗೂ ಸೀರಿಯಲ್‍ನಲ್ಲೇ ಹೆಚ್ಚು ಗುರುತಿಸಿಕೊಂಡಿದ್ದು ಯಾಕೆ?
ಎನ್‍ಜಿಎಫ್‍ನಲ್ಲಿ ಕಾರ್ಯ ನಿರ್ವಹಿಸುತ್ತಿದ್ದರಿಂದ ಸಿನಿಮಾ ಶೂಟಿಂಗ್‍ನಲ್ಲಿ ಭಾಗವಹಿಸಲು ರಜೆಗಳು ಸಿಗುತ್ತಿರಲಿಲ್ಲ. ಸಿನಿಮಾಕ್ಕೆ ಹೆಚ್ಚಿನ ಸಮಯ ವ್ಯಯವಾಗುತ್ತಿದ್ದರಿಂದ ಸಿನಿಮಾದಲ್ಲಿ ನಟಿಸೋದು ಬಿಟ್ಟು ಧಾರಾವಾಹಿ, ನಾಟಕಗಳಿಗೆ ಹೆಚ್ಚಿನ ಆದ್ಯತೆ ಕೊಡಲು ಆರಂಭಿಸಿದೆ. ಸಂಬಂಧ ಮಾಲೆ, ತರಾಸು ಕಥೆಗಳು, ಒಂದು ಘಟನೆಯ ಸುತ್ತಾ, ಎಲ್ಲರಂತಲ್ಲ ನನ್ನ ಹೆಂಡತಿ ಹೀಗೆ ಸುಮಾರು 120ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ನಟಿಸಿದ್ದೇನೆ. ತಮಿಳು, ಉರ್ದು ಭಾಷೆಯ ಧಾರಾವಾಹಿಯಲ್ಲೂ ನಾನು ನಟಿಸಿದ್ದೇನೆ. ತ್ರಿಮೂರ್ತಿಗಳು, ಹಲೋ ಡಾರ್ಲಿಂಗ್, ಭಾರತೀಪುರ, ಕಂಬಳಿ ಸೇವೆ ಹೀಗೆ ಹಲವಾರು ನಾಟಕಗಳನ್ನು ನಾನು ಮಾಡಿದ್ದೇನೆ.

jayaprakash NB 7

ನಾಟಕ, ಸಿನಿಮಾ, ಧಾರಾವಾಹಿ ನಡುವೆ ಸಮಾಜ ಸೇವೆ ಕಡೆ ವಾಲಿದ್ದು ಹೇಗೆ?
ನಾಟಕಗಳಲ್ಲಿ ಅಭಿನಯಿಸುತ್ತಿರುವಾಗ ನಡಹಳ್ಳಿ ಶ್ರೀಪಾದ್ ರಾವ್ ಅವರ ಪರಿಚಯವಾಯಿತು. ವಿಧವೆಯರ ಕಲ್ಯಾಣಕ್ಕಾಗಿ ಅವರು ಸ್ಥಾಪಿಸಿದ್ದ ಪರಿವರ್ತನಾ ಸಂಸ್ಥೆ ಅದರ ಕಾರ್ಯಕ್ರಮಗಳ ಬಗ್ಗೆ ತಿಳಿದ ಮೇಲೆ ನಾನೂ ಪ್ರಭಾವಿತನಾದೆ. ಒಬ್ಬ ಕಲಾವಿದನಾಗಿ ಒಂದು ನಾನೂ ಕೂಡ ಎನ್‍ಜಿಓ ಜೊತೆ ಗುರುತಿಸಿಕೊಳ್ಳಬೇಕು ಎನಿಸಿತು. ಸಮಾಜಕ್ಕೆ ನನ್ನದೇನಾದರೂ ಕೊಡುಗೆ ನೀಡಬೇಕು ಎನಿಸಿತು. ಆಗ ನಾನು ಪರಿವರ್ತನಾ ಸಂಸ್ಥೆಯ ಜೊತೆ ನನ್ನನ್ನು ತೊಡಗಿಸಿಕೊಂಡೆ. ಪರಿವರ್ತನಾ ಸಂಸ್ಥೆ ವಿಧವೆಯವರ ಅಭಿವೃದ್ಧಿಗೆ, ಅವರ ಕಷ್ಟ ಕಾರ್ಪಣ್ಯಗಳಿಗೆ ಸ್ಪಂದಿಸುವ ಸಂಸ್ಥೆಯಾಗಿತ್ತು. ವಿಧವೆಯರಿಗೆ ಕೌನ್ಸಿಲಿಂಗ್ ಮಾಡೋದ್ರ ಜೊತೆಗೆ ಸರಳ ವಿವಾಹ ಮಾಡಿಸುವ ಕೆಲಸವನ್ನು ನಾವು ಮಾಡುತ್ತಿದ್ವಿ. ಈ ಕೆಲಸ ನನಗೆ ಬಹಳ ಆತ್ಮತೃಪ್ತಿ ನೀಡುತ್ತಿತ್ತು ಕೇವಲ ವಿಧವೆಯವರಿಗೆ ಮಾತ್ರ ಈ ಸಂಸ್ಥೆ ಸಹಕಾರ ಮಾಡುತ್ತಿದ್ದರಿಂದ ವಿಚ್ಛೇದನಕ್ಕೊಳಗಾದ ಮಹಿಳೆಯರಿಗೂ ಸಹಾಯ ಮಾಡುವ ಉದ್ದೇಶದಿಂದ ಪರಿವರ್ತನಾ ಸಂಸ್ಥೆ ಜೊತೆ ಪರಿಹಾರ್ ಎಂಬ ಇನ್ನೊಂದು ಸಂಸ್ಥೆ ಹುಟ್ಟುಹಾಕಿ ವಿಚ್ಛೇದನ ಪಡೆದ ಮಹಿಳೆಯರ ಸಹಾಯವಾಣಿ, ಸಾಂತ್ವಾನ ಕೇಂದ್ರ ಹೀಗೆ ಹಲವು ಯೋಜನೆಗಳನ್ನು ಆರಂಭಿಸಿದೆ.

jayaprakash NB 6

ಸಿನಿ ರಂಗದಲ್ಲಿ ನಿಮ್ಮ ಜರ್ನಿ ಹೇಗಿತ್ತು?
ಶ್ ಸಿನಿಮಾದಲ್ಲಿ ಉಪೇಂದ್ರ ಅವರು ನನಗೆ ನಿರ್ಮಾಪಕನ ಪಾತ್ರದಲ್ಲಿ ನಟಿಸಲು ಅವಕಾಶ ಮಾಡಿಕೊಟ್ರು. ಆ ಪಾತ್ರ ನನಗೆ ತುಂಬಾ ಖ್ಯಾತಿ ತಂದು ಕೊಡ್ತು. ಅದಾದ ಮೇಲೆ ಬಣ್ಣದ ಗೆಜ್ಜೆ, ಮಹೇಂದ್ರವರ್ಮ, ಆಪರೇಷನ್, ಮಧು ಮಗಳು, ಹಳ್ಳಿಯಾದರೇನು ಶಿವ ಹೀಗೆ ಅನೇಕ ಸಿನಿಮಾಗಳಲ್ಲಿ ನಾನು ನಟಿಸಿದೆ. ವೃತ್ತಿಯಲ್ಲಿ ಉದ್ಯೋಗಿಯಾಗಿದ್ದರಿಂದ ಸಮಯದ ಅಭಾವದಿಂದಾಗಿ ಚಿಕ್ಕಪುಟ್ಟ ಪಾತ್ರಗಳಲ್ಲೇ ನಟಿಸಿದ್ದು ಹೆಚ್ಚು. ಸಮಾಜ ಸೇವೆಯಲ್ಲಿ ಹೆಚ್ಚು ಒಲವಿದ್ದರಿಂದ ಇಲ್ಲಿಯೇ ಹೆಚ್ಚು ತೊಡಗಿಸಿಕೊಳ್ಳುತ್ತಾ ಹೋದಂತೆ ಸಿನಿಮಾ ಅವಕಾಶಗಳು ಕಡಿಮೆಯಾದ್ವು. ಬೇರೆ ಬೇರೆ ಸಂಸ್ಥೆಗಳ ಜೊತೆ ಸೋಶಿಯಲ್ ಸರ್ವಿಸ್ ಕೆಲಸಕ್ಕೆ ಸಹಕಾರಿಯಾಗಿ ಅಲ್ಲೇ ನೆಮ್ಮದಿ ಕಂಡುಕೊಂಡೆ.  

jayaprakash NB 1

ಪರಿವರ್ತನಾ ಸಂಸ್ಥೆ ಬ್ಯಾನರ್ ಅಡಿ ಹೂಮಳೆ ಸಿನಿಮಾ ಮಾಡಿದ ಉದ್ದೇಶವೇನು?
ಪರಿವರ್ತನಾ ಸಂಸ್ಥೆ ಜೊತೆ ಕೆಲಸ ಮಾಡುತ್ತಾ ವಿಧವೆಯವರಿಗೆ ಸಂಬಂಧಿಸಿದ ಸಂದೇಶ ನೀಡುವ ಒಂದು ಸಿನಿಮಾ ಮಾಡುವ ಮನಸ್ಸಾಯಿತು. ಆಗ ಪರಿವರ್ತನಾ ಬ್ಯಾನರ್ ಅಡಿ ಹೂಮಳೆ ಸಿನಿಮಾ ಮಾಡಲು ನಿರ್ಧರಿಸಿದ್ವಿ. ಈ ಸಿನಿಮಾ ಎಲ್ಲಾ ಕಡೆ ಉತ್ತಮ ಪ್ರತಿಕ್ರಿಯೆ ಪಡೆದು ಬಹಳ ಜನರ ಮೇಲೆ ಉತ್ತಮ ಪ್ರಭಾವ ಬೀರಿತು. ರಾಜ್ಯ, ರಾಷ್ಟ್ರೀಯ ಪ್ರಶಸ್ತಿಗಳು ಈ ಚಿತ್ರಕ್ಕೆ ಲಭಿಸಿತು. ಇದನ್ನೂ ಓದಿ: ಅಣ್ಣಾವ್ರ ಕೈ ಸ್ಪರ್ಶಿಸಿದ್ದೇ ನನ್ನ ಭಾಗ್ಯ: ನಟ ಗಣೇಶ್ ರಾವ್ ಕೇಸರ್ಕರ್

jayaprakash NB 10

ಮೊದಲ ಬಾರಿ ನಿರ್ದೇಶನಕನಾಗಿ ಬಡ್ತಿ ಪಡೆದಿದ್ದೀರಿ ಸಿನಿಮಾ ಕುರಿತು ಹೇಳಿ.
ನಾಗತಿಹಳ್ಳಿ ಚಂದ್ರಶೇಖರ್ ಅವರ ಟೆಂಟ್ ಹೌಸ್ ತರಬೇತಿ ಕೇಂದ್ರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾಗ ಸಿನಿಮಾ ನಿರ್ದೇಶನ ಮಾಡುವ ಅವಕಾಶ ನನಗೆ ದೊರೆಯಿತು. ನಡಹಳ್ಳಿ ಶ್ರೀಪಾದ್ ಬರೆದ ಕಥೆಯನ್ನು ಇಟ್ಟುಕೊಂಡು ಅದನ್ನ ಚೆಂದಗಾಣಿಸಿ ಚಿತ್ರಕಥೆ ಬರೆದು ನಿರ್ದೇಶನ ಮಾಡಲು ಮುಂದಾದೆ. ಚಿತ್ರಕ್ಕೆ ಅಂತ್ಯವಲ್ಲ ಆರಂಭ ಎಂದು ಹೆಸರಿಟ್ಟಿದ್ದು ಶೃತಿ ಹರಿಹರನ್, ಸಂಚಾರಿ ವಿಜಯ್ ಮುಖ್ಯಪಾತ್ರದಲ್ಲಿ ನಟಿಸಿದ್ದಾರೆ. ಇದು ನಾನು ನಿರ್ದೇಶನ ಮಾಡಿದ ಮೊಟ್ಟ ಮೊದಲ ಸಿನಿಮಾ. ಚಿತ್ರದ ಎಲ್ಲಾ ಕೆಲಸಗಳು ಮುಗಿದಿದ್ದು ಬಿಡುಗಡೆಯಾಗಬೇಕಿದೆ. ಚಿತ್ರದಲ್ಲಿ ನಾನು ಕೂಡ ಒಂದು ಪಾತ್ರದಲ್ಲಿ ನಟಿಸಿದ್ದೇನೆ. ಒಂದೊಳ್ಳೆ ಸಬ್ಜೆಕ್ಟ್ ಹಾಗೂ ಸಂದೇಶ ಇರೋ ಕಥೆ ಚಿತ್ರದಲ್ಲಿದೆ. ಇದನ್ನೂ ಓದಿ: ಶಿಕ್ಷಕನಾಗಬೇಕೆಂದು ಹೆದರಿ ನಟನಾದೆ: ಕಿರುತೆರೆ ನಟ ಜಹಂಗೀರ್

jayaprakash NB 11

ನಿಮ್ಮ ಮುಂದಿನ ಯೋಜನೆಗಳೇನು?
ಇನ್ನು ಹೆಚ್ಚು ಹೆಚ್ಚು ಸಮಾಜ ಸೇವೆಯನ್ನು ಮಾಡಬೇಕು ಪರಿವರ್ತನಾ ಹಾಗೂ ಪರಿಹಾರ್ ಫೌಂಡೇಶನ್ ವತಿಯಿಂದ ಉತ್ತಮ ಕೆಲಸಗಳನ್ನು ಮಾಡಬೇಕು. ಇದರ ಜೊತೆಗೆ ಪೌರಾಣಿಕ ಸಿನಿಮಾಗಳನ್ನು ನಿರ್ದೇಶನ ಮಾಡಬೇಕೆಂಬ ಆಸೆ ಇದೆ. ಗತಕಾಲದ ವೈಭವವನ್ನು ಮರುಕಳಿಸುವಂತ ಸಿನಿಮಾಗಳನ್ನು ಅದ್ಭುತ ಕಲಾವಿದರನ್ನು ಹಾಕಿಕೊಂಡು ಪರಿಣಾಮಕಾರಿಯಾಗಿ ಸಿನಿಮಾ ಮಾಡಬೇಕು ಅದರಲ್ಲೂ ಕನಕದಾಸ ಕುರಿತ ಸಿನಿಮಾಗಳನ್ನು ಮಾಡಬೇಕು ಅವರ ತತ್ವಗಳನ್ನು ಎಲ್ಲೆಡೆ ಪಸರಿಸಬೇಕು ಎಂಬ ದೊಡ್ಡ ಕನಸಿದೆ. ಇದನ್ನೂ ಓದಿ: ನನ್ನ ಹೆಸರಲ್ಲೇ ಹೀರೋ, ವಿಲನ್ ಇಬ್ಬರೂ ಇದ್ದಾರೆ: ಖ್ಯಾತ ಖಳನಟ ಮುನಿರಾಜು

jayaprakash NB 5

Share This Article
Leave a Comment

Leave a Reply

Your email address will not be published. Required fields are marked *