ರಾಯಚೂರು: ಜಿಲ್ಲೆಯ ಮಸ್ಕಿ ತಾಲೂಕಿನ ಗ್ರಾಮೀಣ ಭಾಗಕ್ಕೆ ಸಮರ್ಪಕ ಬಸ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿ ವಿದ್ಯಾರ್ಥಿಗಳು ಮಸ್ಕಿ ಬಸ್ ಡಿಪೋ ಮುಂದೆ ಪ್ರತಿಭಟನೆ ಮಾಡಿದ್ದಾರೆ. ಡಿಪೋ ವ್ಯವಸ್ಥಾಪಕರೊಂದಿಗೆ ವಾಗ್ವಾದ ನಡೆಸಿ ಬಸ್ ಬಿಡದಿದ್ದರೆ ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಶಾಲಾ ಕಾಲೇಜುಗಳು ಆರಂಭವಾಗಿರುವುದರಿಂದ ವಿದ್ಯಾರ್ಥಿಗಳು ಬಸ್ ವ್ಯವಸ್ಥೆಯಿಲ್ಲದೆ ಪರದಾಡುತ್ತಿದ್ದಾರೆ. ಪಾಮನಕಲ್ಲೂರು, ಹರ್ವಾಪುರ, ತುಪ್ಪದೂರು, ಬೆಂಚಮರಡಿ, ಇಲಾಲಪುರ, ಬುದ್ದಿನ್ನಿ ಎಸ್, ಹೂವಿನಭಾವಿ, ಮತ್ತು ಮುದಬಾಳ ಗ್ರಾಮಗಳ ನೂರಾರು ನೂರಾರು ವಿದ್ಯಾರ್ಥಿಗಳು ನಿತ್ಯ ಮಸ್ಕಿಗೆ ಬರುತ್ತಿದ್ದು, ಸರಿಯಾದ ಸಮಯಕ್ಕೆ ಬಸ್ ಇಲ್ಲದೆ ಕಷ್ಟಪಡುತ್ತಿದ್ದಾರೆ.
ಮಸ್ಕಿಗೆ ಬರಲು ಬಸ್ ಸಿಕ್ಕರೆ ವಾಪಸ್ ಹೋಗಲು ಸರಿಯಾದ ಸಮಯಕ್ಕೆ ಬಸ್ ಗಳು ಸಿಗುತ್ತಿಲ್ಲ. ಹೀಗಾಗಿ ವಿದ್ಯಾರ್ಥಿಗಳು ತಡರಾತ್ರಿ ಗ್ರಾಮಗಳಿಗೆ ಮರಳಬೇಕಾದ ಪರಸ್ಥಿತಿಯಿದೆ. ರಾತ್ರಿವರೆಗೂ ಬಸ್ ನಿಲ್ದಾಣದಲ್ಲೇ ವಿದ್ಯಾರ್ಥಿಗಳು ಕಾಲಕಳೆಯಬೇಕಾಗಿದೆ. ಆದ್ರೂ ಬಸ್ ಗಳು ಬಾರದೆ ಖಾಸಗಿ ವಾಹನಗಳಲ್ಲಿ ಗ್ರಾಮಕ್ಕೆ ಮರಳಬೇಕಿದೆ. ಹೀಗಾಗಿ ಸರಿಯಾದ ಸಮಯಕ್ಕೆ ಬಸ್ ಗಳ ಓಡಾಟ ಆರಂಭಿಸಬೇಕು ಅಂತ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನೂ ಬುದ್ದಿನ್ನಿ ಎಸ್ ಗ್ರಾಮದಲ್ಲಿ ಪ್ರೌಢಶಾಲಾ ಕಟ್ಟಡ ಪೂರ್ಣಗೊಂಡಿದ್ದರೂ, ಪ್ರೌಢಶಾಲಾ ಕಲಿಕೆಗೆ ಅನುಮತಿ ನೀಡಿಲ್ಲ. ಬುದ್ದಿನ್ನಿ ಎಸ್ ಗ್ರಾಮದಲ್ಲಿ ಪ್ರೌಢಶಾಲೆ ಆರಂಭವಾದರೆ ವಿದ್ಯಾರ್ಥಿಗಳ ಪರದಾಟ ಸ್ವಲ್ಪ ಮಟ್ಟಿಗೆ ತಪ್ಪುತ್ತದೆ ಅಧಿಕಾರಿಗಳು ಗಮನಹರಿಸಬೇಕು ಅಂತ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.