ರಾಯಚೂರು : ನಗರದ ಬೇರೂನ್ ಕಿಲ್ಲಾದಲ್ಲಿ ತೀವ್ರ ಉಸಿರಾಟ ತೊಂದರೆಯಿಂದ ಬಳಲುತ್ತಿದ್ದ 48 ವರ್ಷದ ಕೊರೊನಾ ಸೋಂಕಿತ ಸಾವನ್ನಪ್ಪಿದ್ದಾನೆ. ಸರಿಯಾದ ಸಮಯಕ್ಕೆ ಅಂಬ್ಯುಲೆನ್ಸ್ ಬಾರದಿರುವುದೇ ವ್ಯಕ್ತಿ ಸಾವಿಗೆ ಕಾರಣ ಅಂತ ಇಲ್ಲಿನ ನಿವಾಸಿಗಳು ಆರೋಪಿಸಿದ್ದಾರೆ. ಇಡೀ ಜಿಲ್ಲೆಯಲ್ಲಿ ಒಂದೇ ಅಂಬ್ಯುಲೆನ್ಸ್ ಇದೆಯಾ ಅಂತ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮೊದಲಿಗೆ ತಡವಾಗಿ ಬಂದ ಅಂಬ್ಯುಲೆನ್ಸ್ ನಲ್ಲಿ ಕೇವಲ ಒಬ್ಬ ಸಿಬ್ಬಂದಿ ಮಾತ್ರ ಬಂದಿದ್ದರು. ರೋಗಿ ಮೊದಲ ಮಹಡಿಯಲ್ಲಿದ್ದರಿಂದ ಕೆಳಗೆ ಕರೆತರಲು ಆಗಲಿಲ್ಲ. ಅಂಬ್ಯುಲೆನ್ಸ್ ವಾಪಸ್ ಹೋಯಿತು. ಅಧಿಕಾರಿಗಳ ಗಮನಕ್ಕೆ ತಂದಿದ್ದರಿಂದ ಪುನಃ ಬಂದು ಅಂಬ್ಯುಲೆನ್ಸ್ ನಲ್ಲಿ ರೋಗಿಯನ್ನ ಕರೆದ್ಯೊಯಲಾಗಿದೆ. ಆದ್ರೆ ರೋಗಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ. ಇದಕ್ಕೆ ಆರೋಗ್ಯ ಇಲಾಖೆಯೆ ಹೊಣೆ ಅಂತ ಆರೋಪಿಸಿದ್ದಾರೆ.
ಶನಿವಾರ ಸಂಜೆ ರೋಗಿಯನ್ನ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ದಾಖಲಾದ ದಿನವೇ ತೀವ್ರ ಉಸಿರಾಟ ಸಮಸ್ಯೆಯಿಂದ 48 ವರ್ಷದ ರೋಗಿ ಸಾವನ್ನಪ್ಪಿದ್ದಾನೆ. ಬಳಿಕ ಕೋವಿಡ್ ಪರೀಕ್ಷೆಯಲ್ಲಿ ಕೊರೊನಾ ಪಾಸಿಟಿವ್ ಧೃಡವಾಗಿದೆ. ಇನ್ನೂ ಭಾನುವಾರ ಕಾರಣಕ್ಕೆ ಮೃತನ ಮನೆ ಹಾಗೂ ಸುತ್ತಲ ಪ್ರದೇಶಕ್ಕೆ ರಾಸಾಯನಿಕ ಸಿಂಪಡಿಸದ ಹಿನ್ನೆಲೆ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದು ಇಂದು ಬೆಳಗ್ಗೆ ರಾಸಾಯನಿಕ ಸಿಂಪಡಣೆಗೆ ನಗರಸಭೆ ಮುಂದಾಗಿದೆ.
ಇನ್ನೂ ಆರೋಗ್ಯ ಸಿಬ್ಬಂದಿ ರೋಗಿಯ ಮನೆಯಲ್ಲೆ ಪಿಪಿಇ ಕಿಟ್ ಬೀಸಾಡಿ ಹೋಗಿರುವುದು ಇಂದು ಬೆಳಗ್ಗೆ ಬೆಳಕಿಗೆ ಬಂದಿದೆ. ಇಂದು ಸ್ಯಾನಿಟೈಸ್ ಮಾಡಲು ಬಂದ ನಗರಸಭೆ ಪೌರಕಾರ್ಮಿಕ ಹೊರತಂದಿದ್ದಾನೆ. ಇನ್ನೂ ರಾಸಾಯನಿಕ ಸಿಂಪಡಣೆ ಮಾಡುವ ಸಿಬ್ಬಂದಿಗೆ ಮಾಸ್ಕ ಬಿಟ್ಟು ಬೇರೆ ರಕ್ಷಣಾ ಸಾಮಗ್ರಿಯಿಲ್ಲ. ನಗರದಲ್ಲಿ ಕೊರೊನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವಾಗ ಆರೋಗ್ಯ ಇಲಾಖೆ ಹಾಗು ನಗರಸಭೆ ನಿರ್ಲಕ್ಷ್ಯ ವಹಿಸುತ್ತಿದೆ ಅಂತ ಸ್ಥಳೀಯರು ಆರೋಪಿಸಿದ್ದಾರೆ.