ಬೆಂಗಳೂರು: ನಟಿ ರಾಗಿಣಿ ದ್ವಿವೇದಿ ಸೇರಿದಂತೆ ಐವರ ಜಾಮೀನು ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿದೆ.
ಡ್ರಗ್ಸ್ ಪ್ರಕರಣದಲ್ಲಿ ಬಂಧಿತರಾಗಿರುವ ಐವರ ಜಾಮೀನು ಅರ್ಜಿಯ ವಿಚಾರಣೆಗ ನ್ಯಾಯಾಲಯದ ಮುಂದೆ ಬಂದಿತ್ತು. ಈ ವೇಳೆ ಸಿಸಿಬಿ ಪರ ವಕೀಲರು, ಪ್ರಕರಣದ ಕೆಲವರು ಜೈಲು ಮತ್ತು ಪೊಲೀಸ್ ಕಸ್ಟಡಿಯಲ್ಲಿದ್ದಾರೆ. ಎಲ್ಲ ಆರೋಪಿಗಳ ಅರ್ಜಿಯೂ ಒಂದಕ್ಕೊಂದು ಲಿಂಕ್ ಇದೆ. ಒಟ್ಟಿಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೇಳಿದರು.
ಅರ್ಜಿದಾರರ ಪರ ವಕೀಲರು ಆಕ್ಷೇಪಣೆ ಸಲ್ಲಿಸಲು ಇವತ್ತು ಸೂಚಿಸಲಾಗಿತ್ತು. ವಿನಾಕಾರಣ ಕಾಲಹರಣ ಮಾಡಲಾಗುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು. ಕೊನೆಗೆ ನ್ಯಾಯಾಲಯ ಅರ್ಜಿಯನ್ನು ಸೋಮವಾರಕ್ಕೆ ಮುಂದೂಡಿದೆ. ಹಾಗಾಗಿ ಇನ್ನರೆಡು ದಿನ ಆರೋಪಿಗಳಿಗೆ ಜೈಲೂಟ ಖಚಿತವಾಗಿದೆ.
ಇಂದು ಖ್ಯಾತ ನಿರೂಪಕರಾದ ಅಕುಲ್ ಬಾಲಾಜಿ, ಸಂತೋಷ್ ಮತ್ತು ಮಾಜಿ ಶಾಸಕರ ಪುತ್ರ ಯುವರಾಜ್ ಸಿಸಿಬಿ ವಿಚಾರಣೆಗೆ ಹಾಜರಾಗಿದ್ದಾರೆ. ನಿನ್ನೆ ಸಿಸಿಬಿ ಮೂವರಿಗೂ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿತ್ತು. ಇಂದು ಮೂವರು ವಿಚಾರಣೆಗೆ ಹಾಜರಾಗಿ ತನಿಖೆಗೆ ಸಹಕರಿಸುತ್ತೇವೆ ಎಂದು ಹೇಳಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆ ಸ್ಟಾರ್ ನಟನ ಪುತ್ರನಿಗೆ ನೋಟಿಸ್ ನೀಡಲು ಸಿಸಿಬಿ ಮುಂದಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ. ಬೆಂಗಳೂರಿನ ಶಾಸಕರೊಬ್ಬರ ಮಗನ ಹೆಸರು ಸಹ ಕೇಳಿಬರುತ್ತಿದೆ.