ನವದೆಹಲಿ: ಸರ್ದಾರ್ ಬಜಾರ್ನಲ್ಲಿ ವಸತಿ ಕಟ್ಟಡವೊಂದು ಏಕಾಏಕಿ ಕುಸಿದು ಬಿದ್ದು, ಹಲವಾರು ಜನ ಅವಶೇಷದಡಿಯಲ್ಲಿ ಸಿಲುಕಿಕೊಂಡಿರುವುದು ವರದಿಯಾಗಿದೆ.
ಸದರ್ ಬಜಾರ್ ಚಾರ್ಖಿವಾಲಿ ಗಲಿ ಖುರೇಷಿ ನಗರದ ಬಳಿ ವಸತಿ ಕಟ್ಟಡ ಇಂದು ಕುಸಿತಕ್ಕೊಳಗಾಗಿದೆ. ಈಗಾಗಲೇ ಕಟ್ಟಡದ ಅವಶೇಷಗಳಿಂದ ಐದು ಜನರನ್ನು ರಕ್ಷಣೆ ಮಾಡಲಾಗಿದ್ದು, ಮೂವರ ಸ್ಥಿತಿ ಗಂಭೀರವಾಗಿದೆ. ಇನ್ನೂ ಹಲವು ಜನ ಕಟ್ಟಡದ ಅವಶೇಷದಡಿಯಲ್ಲಿರುವ ಶಂಕೆ ವ್ಯಕ್ತವಾಗಿದೆ.
ಘಟನಾ ಸ್ಥಳದಲ್ಲಿ 6 ಅಗ್ನಿಶಾಮಕದಳ ತಂಡ ಕಾರ್ಯಚರಣೆಯಲ್ಲಿ ತೊಡಗಿದೆ. ರಕ್ಷಣಾ ಕಾರ್ಯಚರಣೆಯಲ್ಲಿ ತುರ್ತುಚಿಕಿತ್ಸೆಗಾಗಿ ತಂಡವನ್ನ ನಿಯೋಜಿಸಲಾಗಿದೆ. ಈ ಬಗ್ಗೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಟ್ವೀಟ್ ಮಾಡಿದ್ದು, ಈ ಘಟನೆಯಿಂದ ತೀವ್ರ ನೋವಾಗಿದೆ. ಕಟ್ಟಡ ದುರಂತದಲ್ಲಿ ಸಿಲುಕಿಕೊಂಡಿರುವವರ ರಕ್ಷಣಾ ಕಾರ್ಯ ನಡೆಯುತ್ತಿದೆ, ನಾನು ಘಟನೆಯ ಬಗ್ಗೆ ಕ್ಷಣ ಕ್ಷಣದ ಮಾಹಿತಿ ಕಲೆಹಾಕುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ.