– ಮಾರ್ಚ್ 13ರಂದು ‘ಶಿವಮೊಗ್ಗ ಚಲೋ’
– ಅಧಿಕೃತವಾಗಿ ಕಾಂಗ್ರೆಸ್ ಸೇರಿದ ಅಶೋಕ್ ಮನಗೊಳಿ
ಬೆಂಗಳೂರು: ಸದನದಲ್ಲಿ ಗಾಯ ತೋರಿಸಲು ಶಾಸಕ ಸಂಗಮೇಶ್ ಶರ್ಟ್ ಬಿಚ್ಚಿದ್ದಾರೆ. ಅದಕ್ಕೆ ಅಸಭ್ಯ ವರ್ತನೆ ಎಂದು ಅಮಾನತು ಮಾಡಿದ್ದಾರೆ. ಸ್ಪೀಕರ್ ಕೂಡ ಪಕ್ಷಪಾತಿಯಾಗಿ ವರ್ತಿಸುತ್ತಿದ್ದಾರೆ. ಹೀಗಾಗಿ ಮಾರ್ಚ್ 13 ರಂದು ನಾವು ಪ್ರತಿಭಟನೆ ಮಾಡ್ತೇವೆ. ಶಿವಮೊಗ್ಗ ಚಲೋ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದರು.
ಇಂದು ಸಿಂದಗಿ ವಿಧಾನಸಭಾ ಕ್ಷೇತ್ರದ ಮಾಜಿ ಸಚಿವ ಮನಗೊಳಿ ಪುತ್ರ ಅಶೋಕ್ ಮನಗೊಳಿ ಅಧಿಕೃತವಾಗಿ ಕಾಂಗ್ರೆಸ್ಸಿಗೆ ಸೇರ್ಪಡೆಗೊಂಡರು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಡಿಕೆಶಿ, ಬಿಜೆಪಿ ಅಧಿಕಾರಕ್ಕೆ ಬಂದ ಮೇಲೆ ದೌರ್ಜನ್ಯ ನಡೆದಿದೆ. ನಮ್ಮ ಮುಖಂಡರ ಮೇಲೆ ಸುಳ್ಳು ಕೇಸ್ ಹಾಕ್ತಿದ್ದಾರೆ. ಆದರೆ ಬಿಜೆಪಿ ನಾಯಕರು ಶಾಂತಿಭಂಗ ಹೇಳಿಕೆ ಕೊಟ್ರೂ ಕೇಸ್ ಹಾಕಲ್ಲ ಎಂದು ಗರಂ ಆದರು. ಇದನ್ನು ಓದಿ: ಸದನದ ಬಾವಿಯಲ್ಲಿ ಶರ್ಟ್ ಬಿಚ್ಚಿ ಅಸಭ್ಯ ವರ್ತನೆ – ಸಂಗಮೇಶ್ 1 ವಾರ ಅಮಾನತು
ಕೊರೊನಾ ಸಂದರ್ಭದಲ್ಲಿ ಪದಾರ್ಥ ಲೂಟಿ ಮಾಡಿದ್ರು. ಅವರ ಮೇಲೆ ದೂರು ಕೊಟ್ರೂ ಕೇಸ್ ಹಾಕ್ತಿಲ್ಲ. ಈಗ ನಮ್ಮ ನೂರಾರು ಕಾರ್ಯಕರ್ತರ ಮೇಲೆ ಕೇಸ್ ಹಾಕಿದ್ದಾರೆ. ನಮ್ಮ ಶಾಸಕ ಸಂಗಮೇಶ್ ಅವರ ಮೇಲೆ ಕೇಸ್ ಹಾಕಿದ್ದಾರೆ. ಬಿಜೆಪಿಗೆ ಬರಲಿಲ್ಲವೆಂದು ಹಾಕಿದ್ದಾರೆ. ಹಿಂದೆಯೂ ಬಿಜೆಪಿಗೆ ಬರುವಂತೆ ಒತ್ತಡ ಹಾಕಿದ್ದರು. ಈಗಲೂ ಮತ್ತೆ ಸುಳ್ಳು ಕೇಸ್ ದಾಖಲಿಸಿದ್ದಾರೆ ಎಂದು ಬಿಜೆಪಿ ವಿರುದ್ಧ ಡಿಕೆಶಿ ಕಿಡಿಕಾರಿದರು. ಇದನ್ನೂ ಓದಿ: ನೀನು ಶರ್ಟ್ ಬಿಚ್ಚಿ ಪ್ರತಿಭಟಿಸಿದ್ರೆ ಪವರ್ಫುಲ್ ಆಗಿರುತ್ತೆ- ಸಂಗಮೇಶ್ಗೆ ಐಡಿಯಾ ಕೊಟ್ಟಿದ್ದೇ ಜಮೀರ್..!
ಮನಗೂಳಿಯವರು ಸಾಯುವ ಮುನ್ನ ನನ್ನ ಹಾಗೂ ಸಿಎಲ್ಪಿ ನಾಯಕರನ್ನು ಭೇಟಿ ಮಾಡಿದ್ದರು. ನನ್ನ ಪುತ್ರನನ್ನ ನಿಮ್ಮ ಕೈಗೆ ಬಿಡ್ತೇವೆ ಅಂದಿದ್ದರು. ಅದಾದ 15 ದಿನಕ್ಕೆ ಅವರು ಕೊನೆಯುಸಿರೆಳೆದ್ರು. ಇಂದು ಅಶೋಕ್ ಕಾಂಗ್ರೆಸ್ಸಿಗೆ ಸೇರ್ಪಡೆಯಾಗಿದ್ದಾರೆ. ಯಾವಾಗ ಬೇಕಾದರೂ ಉಪಚುನಾವಣೆ ಬರಬಹುದು. ಹೀಗಾಗಿ ಸ್ಥಳೀಯ ಮುಖಂಡರ ಜೊತೆ ಚರ್ಚಿಸಿದ್ದೆವು. ಇದೀಗ ಅವರನ್ನ ಪಕ್ಷಕ್ಕೆ ಸೇರಿಸಿಕೊಳ್ತಿದ್ದೇವೆ. ಯಾವುದೇ ಷರತ್ತು ಇಲ್ಲದೆ ಅಶೋಕ್ ಮನಗೊಳಿ ಕಾಂಗ್ರೆಸ್ ಸೇರ್ಪಡೆ ಆಗುತ್ತಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಈಶ್ವರ್ ಖಂಡ್ರೆ, ಎಂ.ಬಿ.ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.