ಬೆಂಗಳೂರು: ಬಿ.ಎಸ್ ಯಡಿಯೂರಪ್ಪ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆಯೇ ಅರವಿಂದ್ ಬೆಲ್ಲದ್ ಹೆಸರು ಕೆಳಿ ಬಂದಿತ್ತು. ಆದರೆ ಇದೀಗ ಅವರಿಗೆ ಸಚಿವ ಸ್ಥಾನವೂ ಸಿಕ್ಕಿಲ್ಲ. ಈ ಹಿನ್ನೆಲೆಯಲ್ಲಿ ಬೇಸರಗೊಂಡಿರುವ ಬೆಲ್ಲದ್ ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ.
ಹೌದು. ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಹಾಕಿಕೊಳ್ಳುವ ಮೂಲಕ, ನಿಮ್ಮಲ್ಲರಂತೆ ನನಗೂ ಸಚಿವ ಸ್ಥಾನ ಸಿಗದೇ ಇರುವುದು ಬೇಸರ ತಂದಿದೆ. ಆದರೆ ಪಕ್ಷದ ಚೌಕಟ್ಟಿನಲ್ಲಿ ಇದೆಲ್ಲವನ್ನೂ ಸಹಿಸಿಕೊಳ್ಳುವುದಾಗಿ ತಿಳಿಸಿದ್ದಾರೆ.
ನನ್ನ ಕ್ಷೇತ್ರದ ಜನತೆಗೆ ನಾನು ಸದಾ ಅಭಾರಿ ????????#hublidharwad pic.twitter.com/48ypp62spS
— Arvind Bellad (@BelladArvind) August 5, 2021
ಕ್ಷೇತ್ರ ಕ್ಷೇತ್ರದ ಜನತೆಯ ಸೇವೆಯೇ ನನ್ನ ಆದ್ಯತೆ. ಸಚಿವ ಸ್ಥಾನ ಸಿಗದಿರುವುದು ನನಗೆ ಅಡೆತಡೆ ಆಗುವುದಿಲ್ಲ. ಭ್ರಷ್ಟಾಚಾರಿಗಳ ವಿರುದ್ಧ ಹಿಂದಿನಂತೆಯೇ ಧ್ವನಿ ಎತ್ತುತ್ತೇನೆ. ನನ್ನ ಮೇಲೆ, ನನ್ನ ಕುಟುಂಬದ ಮೇಲೆ ಭ್ರಷ್ಟಾಚಾರ ಸಣ್ಣ ಕಪ್ಪುಚುಕ್ಕೆಯೂ ಇಲ್ಲ. ಆದರೆ ನಾನು ನಂಬಿದ ತತ್ವ ಸಿದ್ಧಾಂತ, ಸ್ವಚ್ಛ ಮತ್ತು ಭ್ರಷ್ಟಾಚಾರ ರಹಿತ ರಾಜಕೀಯ ಅನುಷ್ಠಾನಕ್ಕೆ ಬದ್ಧನಿರ್ತೇನೆ. ಜೀವನದಲ್ಲಿ ಸೋಲು ಗೆಲುವು ಶಾಶ್ವತ ಅಲ್ಲ. ದೇವರು ಎಲ್ಲವನ್ನೂ ಸಮಯಕ್ಕೆ ತಕ್ಕಂತೆ ಒದಗಿಸುತ್ತಾನೆ ಎಂದು ಬೆಲ್ಲದ್ ಬೇಸರ ಹೊರಹಾಕಿದ್ದಾರೆ.
ನಿನ್ನೆ ಬಸವರಾಜ್ ಬೊಮ್ಮಾಯಿ ಅವರ ನೂತನ ಸಚಿವ ಸಂಪುಟ ರಚನೆಯಾಗಿದೆ. ಸಚಿವರ ಪಟ್ಟಿ ರಿಲೀಸ್ ಆಗುತ್ತಿದ್ದಂತೆಯೇ ಬೆಲ್ಲದ್ ಬೆಂಬಲಿಗರು ಆಕ್ರೋಶ ವ್ಯಕ್ತಪಡಿಸಿದ್ದರು. ಧಾರವಾಡ ನಗರದ ಜುಬ್ಲಿ ವೃತ್ತದಲ್ಲಿ ಏಕಾಏಕಿ ರಸ್ತೆ ತಡೆಮಾಡಿದ ಕಾರ್ಯಕರ್ತರು, ಬೆಲ್ಲದ್ ಪರ ಘೋಷಣೆ ಕೂಗಿದ್ದರು. ಮತ್ತೊಂದು ಕಡೆ ಹುಬ್ಬಳ್ಳಿ ಧಾರವಾಡ ಮಧ್ಯದಲ್ಲಿರುವ ನವನಗರದಲ್ಲಿ ಬೆಲ್ಲದ ಬೆಂಬಲಿಗರು ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಬಿಎಸ್ ಯಡಿಯೂರಪ್ಪ ಭಾವಚಿತ್ರದ ಮೇಲೆ ಧಿಕ್ಕಾರ ಎಂದು ಬರೆದು ಆಕ್ರೋಶ ವ್ಯಕ್ತ ಪಡಿಸಿದ್ದರು.
ಹುಬ್ಬಳ್ಳಿ ಚನ್ನಮ್ಮ ವೃತ್ತದಲ್ಲಿ ಜಮಾಯಿಸಿದ ಬೆಲ್ಲದ್ ಬೆಂಬಲಿಗರು, ಅವರ ಭಾವಚಿತ್ರ ಹಿಡಿದು ಸಚಿವ ಸ್ಥಾನಕ್ಕೆ ಆಗ್ರಹಿಸಿದ್ದರು. ಅಲ್ಲದೇ ಸಿಎಂ ರೆಸ್ನಲ್ಲಿದ್ದ ಬೆಲ್ಲದ್ಗೆ ಸಚಿವ ಸ್ಥಾನ ತಪ್ಪಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದರು. ಯಡಿಯೂರಪ್ಪ ಸರ್ಕಾರದಲ್ಲಿ ಸಚಿವರಾಗಿದ್ದ ಸುರೇಶ್ ಕುಮಾರ್, ಜಗದೀಶ್ ಶೆಟ್ಟರ್, ಅರವಿಂದ ಲಿಂಬಾವಳಿ, ಲಕ್ಷ್ಮಣ ಸವದಿ, ಸಿ.ಪಿ ಯೋಗೇಶ್ವರ್, ಆರ್ ಶಂಕರ್ ಹಾಗೂ ಶ್ರೀಮಂತ ಪಾಟೀಲ್ ಇವರುಗಳ ಹೆಸರನ್ನು ಈ ಬಾರಿ ಕೈ ಬಿಡಲಾಗಿದೆ.