ಸಚಿನ್ ಪೈಲಟ್ ನೆಪ ಮಾತ್ರಕ್ಕೆ, ಭಿನ್ನಮತದ ಹಿಂದೆ ಬಿಜೆಪಿ ನಾಯಕರಿದ್ದಾರೆ: ಗೆಹ್ಲೋಟ್ ಆರೋಪ

Public TV
1 Min Read
ashok sachin

ಜೈಪುರ್: ರಾಜಸ್ಥಾನ ಸರ್ಕಾರದ ಭಿನ್ನಮತ ಚಟುವಟಿಕೆಯ ಹಿಂದೆ ಬಿಜೆಪಿ ಹೈಕಮಾಂಡ್ ನಾಯಕರ ಕೈವಾಡವಿದೆ. ಸಚಿನ್ ಪೈಲಟ್ ತೋರಿಕೆಗೆ ಮಾತ್ರ. ಅವರ ಕೈಯಲ್ಲಿ ಏನೂ ಇಲ್ಲ ಎಂದು ಸಿಎಂ ಅಶೋಕ್ ಗೆಹ್ಲೋಟ್ ಗಂಭೀರವಾಗಿ ಆರೋಪಿಸಿದ್ದಾರೆ.

ಖಾಸಗಿ ಹೋಟೇಲಿನಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆ ಬಳಿಕ ಅವರು ರಾಜ್ಯಪಾಲ ಕಲ್ರಾಜ್ ಮಿಶ್ರಾ ಅವರನ್ನು ಭೇಟಿ ಮಾಡಿ, ಡಿಸಿಎಂ ಮತ್ತು ಇಬ್ಬರು ಮಂತ್ರಿಗಳನ್ನು ಸಂಪುಟದಿಂದ ಕೈ ಬಿಟ್ಟು ಬದಲಿ ಶಾಸಕರನ್ನು ಸಚಿವರನ್ನಾಗಿ ಮಾಡುವ ಬಗ್ಗೆ ಚರ್ಚಿಸಿದರು. ಇದೇ ವೇಳೆ ಶಾಸಕರ ಪರೇಡ್ ನಡೆಸುವ ಬಗ್ಗೆಯೂ ತಿಳಿಸಿದ್ದಾರೆ ಎನ್ನಲಾಗಿದೆ.

ರಾಜ್ಯಪಾಲರ ಭೇಟಿ ಬಳಿಕ ಮಾತನಾಡಿದ ಗೆಹ್ಲೋಟ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಿಜೆಪಿ ಕುದುರೆ ವ್ಯಾಪಾರಕ್ಕೆ ಸಂಚು ರೂಪಿಸುತ್ತಿದೆ. ಕಾಂಗ್ರೆಸ್ ಸರ್ಕಾರ ರಚನೆಯಾದ ಬಳಿಕ ಸಾಕಷ್ಟು ಬಾರಿ ಈ ಪ್ರಯತ್ನಗಳು ನಡೆದಿದೆ ಎಂದು ಗೆಹ್ಲೋಟ್ ಆರೋಪಿಸಿದರು. ಇದನ್ನೂ ಓದಿ: ಪಕ್ಷದಿಂದ ಉಚ್ಛಾಟನೆ – ಸತ್ಯಕ್ಕೆ ಸೋಲಿಲ್ಲ ಎಂದ ಸಚಿನ್ ಪೈಲಟ್

ಕುದುರೆ ವ್ಯಾಪಾರದ ಭಾಗವಾಗಿ ಹಲವು ಶಾಸಕರೊಂದಿಗೆ ಸಚಿನ್ ಪೈಲಟ್ ದೆಹಲಿಗೆ ತೆರಳಿದ್ದರು. ಇಲ್ಲಿ ಸಚಿನ್ ಪೈಲಟ್ ತೋರಿಕೆಗೆ ಮಾತ್ರವಿದ್ದು, ಶಾಸಕರಿಗೆ ರೆಸಾರ್ಟ್ ವ್ಯವಸ್ಥೆಯನ್ನು ಬಿಜೆಪಿ ನಾಯಕರು ಮಾಡಿಕೊಟ್ಟಿದ್ದಾರೆ. ಮಧ್ಯಪ್ರದೇಶದಲ್ಲೂ ಇದೇ ಕೆಲಸವನ್ನು ಬಿಜೆಪಿ ನಾಯಕರು ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಶಾಸಕಾಂಗ ಪಕ್ಷದ ಸಭೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ನಡೆಸುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುವ ಬಗ್ಗೆ ಒಮ್ಮತದ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಈ ಹಿನ್ನೆಲೆಯಲ್ಲಿ ಇಬ್ಬರು ಸಚಿವರು ಸೇರಿ ಸಚಿನ್ ಪೈಲಟ್ ಅವರನ್ನು ಸ್ಥಾನದಿಂದ ಕೆಳಗಿಳಿಸಿ ಬೇರೆಯವರನ್ನು ನೇಮಿಸಿದೆ ಎಂದು ಗೆಹ್ಲೋಟ್ ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *