– ಸಾವು-ಬದುಕಿನ ಮಧ್ಯೆ ತಾಯಿ ಹೋರಾಟ
ನೆಲಮಂಗಲ: ಕೊರೊನಾ ಸಂದರ್ಭದಲ್ಲಿ ನಾನ್ ಕೋವಿಡ್ ಗರ್ಭಿಣಿಗೆ ಸೂಕ್ತ ಪ್ರಥಮ ಚಿಕಿತ್ಸೆ ಸಿಗದ ಪರಿಣಾಮ ಇನ್ನೂ ಹುಟ್ಟದ 06 ತಿಂಗಳ ಕಂದಮ್ಮ ತಾಯಿಯ ಗರ್ಭದಲ್ಲಿ ಸಾವನ್ನಪ್ಪಿರುವ ಘಟನೆ ನೆಲಮಂಗಲದಲ್ಲಿ ನಡೆದಿದೆ.
ಒರಿಸ್ಸಾ ಮೂಲದ ಸೂರ್ಯಕಲಾ 6 ತಿಂಗಳ ಗರ್ಣಿಣಿ. ಹೊಟ್ಟೆ ನೋವು, ಫಿಡ್ಸ್, ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಅವರು ಗುರುವಾರ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಡಾಬಸ್ ಪೇಟೆ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆಂದು ಬಂದಿದ್ದಾರೆ. ಈ ವೇಳೆ ಸಿಬ್ಬಂದಿ ಸೂರ್ಯಕಲಾ ಅವರಿಗೆ ಕನಿಷ್ಟ ಪ್ರಥಮ ಚಿಕಿತ್ಸೆ ಕೂಡ ನೀಡದೆ ಅಮಾನವೀಯವಾಗಿ ವರ್ತಿಸಿದ್ದಾರೆ.
ಚಿಕಿತ್ಸೆ ನೀಡುವಂತೆ ಕೇಳಿಕೊಂಡರು ಸಿಬ್ಬಂದಿ ತುಮಕೂರು ಸರ್ಕಾರಿ ಆಸ್ಪತ್ರೆಗೆ ರವಾನಿಸಿದ್ದಾರೆ. ಅಲ್ಲೂ ಚಿಕಿತ್ಸೆ ದೊರೆಯದೆ ಸೂರ್ಯ ಕಲಾ ಅವರಿಗೆ ರಕ್ತದೊತ್ತಡ ಹೆಚ್ಚಾಗಿದೆ. ಪಾರ್ಶ್ವವಾಯು ರೋಗವಿದ್ದ ಮಹಿಳೆಗೆ ಸೂಕ್ತ ಪ್ರಥಮ ಚಿಕಿತ್ಸೆ ದೊರೆಯದೆ 06 ತಿಂಗಳ ಗಂಡು ಮಗು ಹೊಟ್ಟೆಯಲ್ಲಿಯೇ ಮೃತಪಟ್ಟಿದೆ.
ಸದ್ಯ ಗರ್ಭಿಣಿ ಐಸಿಯುನಲ್ಲಿದ್ದು ಸಾವು-ಬದುಕಿನ ಮಧ್ಯೆ ಹೋರಾಡುವ ಪರಿಸ್ಥಿತಿ ಬಂದಿದೆ. ಇದ್ದಕ್ಕೆಲ್ಲಾ ಮೂಲ ಕಾರಣ ಡಾಬಸ್ ಪೇಟೆಯ ಆಸ್ಪತ್ರೆಯ ಅಂಬುಲೆನ್ಸ್ ಚಾಲಕ ಸಕಾಲದಲ್ಲಿ ಕಾರ್ಯನಿರ್ವಹಿಸದೇ ಇರುವುದು ಎಂದು ರಾಯರಪಾಳ್ಯ ಪ್ರತಾಪ್ ಆರೋಪಿಸಿದ್ದಾರೆ. ಹೀಗಾಗಿ ಇಂದು ಆಸ್ಪತ್ರೆಯ ಮುಂದೆ ಸ್ಥಳೀಯ ಪ್ರತಿಭಟನೆ ನಡೆಸಿ ತಮ್ಮ ಆಕ್ರೋಶವನ್ನ ವ್ಯಕ್ತಪಡಿಸಿದರು.