ಬೀದರ್: ಸಾರಿಗೆ ನೌಕರರ ಒಂದು ಬೇಡಿಕೆ ಮಾತ್ರ ಬಾಕಿ ಇದೆ. ಅದು ಸಂಬಳ ಪರಿಷ್ಕರಣೆ. ಇದನ್ನ ಈಡೇರಿಸಿದರೆ ವರ್ಷಕ್ಕೆ 1 ಸಾವಿರ ಕೋಟಿ ಹೊರೆಯಾಗಲಿದೆ ಎಂದು ಉಪಮುಖ್ಯಮಂತ್ರಿ, ಸಾರಿಗೆ ಸಚಿವ ಲಕ್ಷ್ಮಣ್ ಸವದಿ ಹೇಳಿದ್ದಾರೆ.
ಬೀದರ್ನ ಬಸವಕಲ್ಯಾಣದಲ್ಲಿ ಮಾತನಾಡಿದ ಅವರು, ಕೊರೊನಾ ಸೋಂಕು ಬಂದ ಮೇಲೆ ನಮ್ಮ ಸಾರಿಗೆ ಇಲಾಖೆಗೆ 3 ಸಾವಿರದ ಇನ್ನೂರು ಕೋಟಿ ನಷ್ಟವಾಗಿದೆ. ಈಗ ಬರುವ ಆದಾಯದಲ್ಲಿ ಸಂಬಳಕ್ಕೆ ಮತ್ತು ಇಂಧನಕ್ಕೂ ಕೊರತೆಯಾಗುತ್ತಿದೆ. ಈ ಹಣದ ಕೊರತೆ ನೀಗಿಸಲು ಸರ್ಕಾರದಿಂದ 1962 ಕೋಟಿ ಹಣ ಪಡೆದು ನೌಕರರಿಗೆ ಸಂಬಳ ಕೊಡಲಾಗಿದೆ ಎಂದರು.
ಬೇರೆ ಬೇರೆ ರಾಜ್ಯದಲ್ಲಿ ಇಲಾಖೆಯ ನೌಕರರಿಗೆ ಕೊರೊನಾ ನೆಪವೊಡ್ಡಿ ಶೇ.20 ರಿಂದ 30 ರಷ್ಟು ಸಂಬಳ ಕಟ್ ಮಾಡಿದ್ದಾರೆ. ಆದರೆ ನಾವು ಮಾಡಿಲ್ಲ. ಸಾರಿಗೆ ನೌಕರರು 9 ಬೇಡಿಕೆ ಇಟ್ಟಿದ್ದರು. ಅದರಲ್ಲೀಗ 8 ಬೇಡಿಕೆ ಈಡೇರಿಸಿದ್ದೇವೆ. ಒಂದು ಬೇಡಿಕೆ ಮಾತ್ರ ಬಾಕಿ ಇದೆ ಎಂದು ತಿಳಿಸಿದರು.
ಬಸ್ ಮುಷ್ಕರ ಮಾಡೋದ್ರಿಂದ ಎಲ್ಲರಿಗೂ ತೊಂದರೆಯಾಗುತ್ತೆ. ಹಾಗಾಗಿ ಹಠಮಾರಿತನದಿಂದ ಹೊರಗೆ ಬರಬೇಕು. ಸೌಹಾರ್ದತೆಯಿಂದ ಬಗೆಹರಿಸಿಕೊಳ್ಳೋಣ. ಪ್ರತಿಭಟನೆಯನ್ನು ನಿಲ್ಲಿಸಬೇಕು. ಮೇ 4 ರ ನಂತರದ ಸಂಬಳದ ಬಗ್ಗೆ ಚೆರ್ಚೆ ಮಾಡಿ ಸಂಬಳ ಹೆಚ್ಚು ಮಾಡೋಣ. ನನಗೆ ವಿಶ್ವಾಸವಿದೆ ನಾಳೆ ಸಾರಿಗೆ ಮುಷ್ಕರಕ್ಕೆ ಇಳಿಯಲ್ಲ, ಒಂದು ವೇಳೆ ಪರ್ಯಾಯ ವ್ಯವಸ್ಥೆ ಮಾಡಿದ್ರೆ ಸಾರ್ವಜನಿಕರು ಸಹಕಾರ ಮಾಡಬೇಕು ಎಂದು ಹೇಳಿದರು.