ಬೆಂಗಳೂರು: ಸಿಎಂ ಯಡಿಯೂರಪ್ಪ ದೆಹಲಿ ಪ್ರವಾಸದ ಬಳಿಕ ರಾಜ್ಯ ರಾಜಕೀಯದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಸಂಕ್ರಾಂತಿ ಹಿಂದಿನ ದಿನವೇ ಏಳು ಜನರು ರಾಜಾಹುಲಿ ಸಂಪುಟಕ್ಕೆ ಸೇರ್ಪಡೆ ಆಗಲಿದ್ದಾರೆ ಎಂದು ತಿಳಿದು ಬಂದಿದೆ.
ದೆಹಲಿಯಿಂದ ಬಂದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಸಿಎಂ ಯಡಿಯೂರಪ್ಪ, ಇಂದಿನ ಭೇಟಿ ಸಂತಸ ತಂದಿದೆ. ಸಂಪುಟ ವಿಸ್ತರಣೆಗೆ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ಬರಬೇಕು ಎಂಬುವುದು ನಮ್ಮ ಆಸೆ. ಆರೇಳು ಜನರು ಸಂಪುಟ ಸೇರಲಿದ್ದು, ಒಂದೆರಡು ದಿನಗಳಲ್ಲಿ ದಿನಾಂಕ ಮತ್ತು ಸಂಪುಟ ಸೇರುವವರ ಹೆಸರು ತಿಳಿಸಲಾಗುತ್ತೆ ಎಂದರು.
ಸಂಪುಟ ವಿಸ್ತರಣೆಗೆ 3+4 ಸೂತ್ರ: ಮೂವರು ವಲಸಿಗರು ಮತ್ತು ನಾಲ್ವರು ಮೂಲ ನಾಯಕರಿಗೆ ಮಂತ್ರಿ ಸ್ಥಾನ ಸಿಗಲಿದೆ. ಇಂದು ಸಚಿವರ ಪಟ್ಟಿಗೆ ಹೈಕಮಾಂಡ್ ನಿಂದ ಒಪ್ಪಿಗೆ ಸಿಗುವ ಸಾಧ್ಯತೆಗಳಿವೆ. ವಲಸಿಗರ ಮೂರು ಸ್ಥಾನದಲ್ಲಿ ಶಾಸಕ ಮುನಿರತ್ನ, ಎಂಎಲ್ಸಿ ಗಳಾದ ಎಂಟಿಬಿ ನಾಗರಾಜ್ ಮತ್ತು ಆರ್.ಶಂಕರ್ ಗೆ ಸಚಿವ ಸ್ಥಾನ ಸಿಗೋದು ಬಹುತೇಕ ಖಚಿತವಾಗಿದೆ. ಇನ್ನುಳಿದ ನಾಲ್ಕು ಸ್ಥಾನಕ್ಕೆ ಮೂಲ ಬಿಜೆಪಿಗರ ನಡುವೆಯೇ ಸ್ಪರ್ಧೆ ಏರ್ಪಡಲಿದೆ.
ಮೂಲ ಬಿಜೆಪಿಗರಲ್ಲಿ ಶಾಸಕ ಉಮೇಶ್ ಕತ್ತಿ, ಅರವಿಂದ್ ಲಿಂಬಾವಳಿ, ಎಂಎಲ್ಸಿ ಯೋಗೇಶ್ವರ್, ಶಾಸಕ ಹಾಲಪ್ಪ ಆಚಾರ್ ಮತ್ತು ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೆಸರು ಸಚಿವರ ಪಟ್ಟಿ ರೇಸ್ ನಲ್ಲಿವೆ. ಪುನರ್ ರಚನೆ ಆಗಿದ್ದರೆ ಮತ್ತಷ್ಟು ಶಾಸಕರಿಗೆ ಸಚಿವ ಸ್ಥಾನ ಸಿಗುವ ಅವಕಾಶಗಳಿದ್ದವು. ಆದ್ರೆ ಹೈಕಮಾಂಡ್ ಸಂಪುಟ ವಿಸ್ತರಣೆಗೆ ಮಾತ್ರ ಹಸಿರು ನಿಶಾನೆ ನೀಡಿದೆ ಎಂದು ತಿಳಿದು ಬಂದಿದೆ.