ಮೈಸೂರು: ಸಂಪುಟ ವಿಸ್ತರಣೆ ವಿಚಾರ ನನ್ನ ಕೈಯಲ್ಲಿ ಇದ್ದರೆ ಅದು ಬೇರೆ ಮಾತು. ಈ ವಿಚಾರದಲ್ಲಿ ನಾನೊಬ್ಬ ಬಡಪಾಯಿ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ ಸೋಮಶೇಖರ್ ಹೇಳಿದ್ದಾರೆ.
ನಗರದಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಂಪುಟ ವಿಸ್ತರಣೆ ಬಗ್ಗೆ ನಾನೇನು ಹೇಳಲಿ. ಅದರ ಅಧಿಕಾರ ಇರುವವರನ್ನ ಕೇಳಿ ಎಂದಿದ್ದಾರೆ.
ಇದೇ ವೇಳೆ ಆರ್ ಆರ್ ಕ್ಷೇತ್ರದಿಂದ ಮುನಿರತ್ನಗೆ ಟಿಕೆಟ್ ವಿಚಾರಕ್ಕೆ ಪ್ರತಿಕ್ರಿಯಿಸಿ, ಮುನಿರತ್ನಗೆ ಟಿಕೆಟ್ ಕೊಡಿ ಎಂದು ಮನವಿ ಮಾಡಿದ್ದೇವೆ. ಅಂತಿಮ ತೀರ್ಮಾನ ಪಕ್ಷದ ಕೋರ್ ಕಮಿಟಿಯಲ್ಲಿ ಆಗುತ್ತದೆ. ನಿಯಮದ ಪ್ರಕಾರದ ಎರಡು ಹೆಸರನ್ನ ರಾಜ್ಯ ಕೋರ್ ಕಮಿಟಿಯಿಂದ ಕಳುಹಿಸಲಾಗಿದೆ. ಮುನಿರತ್ನಗೆ ಟಿಕೆಟ್ ಸಿಗುವ ವಿಶ್ವಾಸ ಇದೆ. ನಾವು ಟಿಕೆಟ್ ಕೊಡಿ ಎಂದು ಮನವಿ ಮಾತ್ರ ಮಾಡಬಹುದು. ನಿರ್ಧಾರ ಪಕ್ಷದ ಹೈಕಮಾಂಡ್ಗೆ ಬಿಟ್ಟಿದ್ದು ಎಂದು ತಿಳಿಸಿದರು.
ಮೈಸೂರು ಜಿಲ್ಲಾಧಿಕಾರಿ ದಿಢೀರ್ ವರ್ಗಾವಣೆ ವಿಚಾರದ ಬಗ್ಗೆ ಮಾತನಾಡಿ, ಅದು ಸರ್ಕಾರದ ಆಡಳಿತಾತ್ಮಕ ನಿರ್ಧಾರ. ಇದರಲ್ಲಿ ದಿಢೀರ್ ಎಂಬುದು ಬರುವುದಿಲ್ಲ. ಈ ವಿಚಾರದಲ್ಲಿ ಆಂಧ್ರದವರು, ಕನ್ನಡಿಗರು ಅಂತ ಮಾತಾನಾಡುವುದು ಸರಿಯಲ್ಲ. ಈಗ ಜಿಲ್ಲಾಧಿಕಾರಿ ಆಗಿರೋ ರೋಹಿಣಿ ಸಿಂಧೂರಿ ದಕ್ಷರು, ಪ್ರಾಮಾಣಿಕರು. ಅವರ ಬಗ್ಗೆ ಈ ರೀತಿ ಮಾತನಾಡುವುದು ಸರಿಯಲ್ಲ ಎಂದು ಗರಂ ಆದರು.