ಹುಬ್ಬಳ್ಳಿ: ಯಾವುದೇ ಸರ್ಕಾರದಲ್ಲಿ ಸಂಪುಟ ರಚನೆ ಆದಾಗ ಅಸಮಾಧಾನ ಸಹಜ. ನಮ್ಮ ಪಕ್ಷ ಸಾಕಷ್ಟು ಬೆಳೆದಿದೆ, ಸಂಪುಟದಲ್ಲೂ ಕೆಲವರು ಹಿರಿಯರು ಇದ್ದಾರೆ. ಅಸಮಾಧಾನ ಸಹಜ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.
ಅಕಾಲಿಕವಾಗಿ ಮೃತಪಟ್ಟ ಹಾವೇರಿ ಜಿಲ್ಲೆಯ ಶಿಗ್ಗಾಂವ ಸವಣೂರ ಕ್ಷೇತ್ರದ ಮಾಜಿ ಶಾಸಕ ರಾಜಶೇಖರ ಸಿಂಧೂರ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳುವ ಮುನ್ನ ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಸರ್ಕಾರದಲ್ಲಿ ಸಂಪುಟ ರಚನೆ ಆದಾಗ ಸಮಧಾನ ಸಹಜವಾಗಿರುತ್ತದೆ. ನಾನು ಎಲ್ಲರನ್ನೂ ಕರೆದು ಮಾತನಾಡುತ್ತೇನೆ. ಆನಂದ್ ಸಿಂಗ್ ನನ್ನ ಹಳೆಯ ಸ್ನೇಹಿತ. ಅವರನ್ನು ಭೇಟಿ ಮಾಡಿ ಮಾತನಾಡುತ್ತೇನೆ. ಅವರು ಯಾವ ಖಾತೆ ಕೇಳಿದ್ದರು ಎನ್ನುವುದು ಬಹಿರಂಗ ಪಡಿಸೋಕೆ ಆಗಲ್ಲವೆಂದು ಹೇಳಿದ್ದಾರೆ.
ದೇವೇಗೌಡರನ್ನು ಭೇಟಿ ಮಾಡಿದ್ದು ರಾಜಕೀಯ ಕಾರಣಗಳಿಗೆ ಅಲ್ಲ. ಅವರ ಭೇಟಿ ವೇಳೆ ಯಾವುದೇ ರಾಜಕೀಯ ಚರ್ಚೆಯಾಗಿಲ್ಲ. ನನ್ನ ಯಂಗ್ ಶಾಸಕ ಪ್ರೀತಂಗೌಡ ಏನೋ ಉತ್ಸಾಹದಲ್ಲಿ ಮಾತನಾಡಿದ್ದಾರೆ. ನಾನು ಅವರ ಜೊತೆ ಮಾತನಾಡುವೆ ಎಂದಿದ್ದಾರೆ.
ಬೊಮ್ಮಾಯಿ ಸರ್ಕಾರ ಜನತಾ ಪರಿವಾರದ ಸರ್ಕಾರ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ. ಕಳೆದ 15 ವರ್ಷದಿಂದ ನಾನು ಬಿಜೆಪಿಯಲ್ಲಿದ್ದೆನೆ. ನಾನು ಬಿಜೆಪಿಯ ಅಪ್ಪಟ ಕಾರ್ಯಕರ್ತನೂ ಬಿಜೆಪಿಯ ಮುಖ್ಯಮಂತ್ರಿಯೂ ಹೌದು. ಹೆಚ್ಡಿಕೆ ಆ ರೀತಿ ಅಸಂಬದ್ಧ ಹೇಳಿಕೆ ನೀಡಬಾರದು. ನಾನು ಯಾಕೆ ಜನತಾ ಪರಿವಾರ ತೊರೆದೆ ಅನ್ನೋದು ಅವರಿಗೆ ತಿಳಿದಿದೆ ಎಂದು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜಶೇಖರ ಸಿಂಧೂರ ಸಾವಿನಿಂದ ಬಹಳ ದುಖಃವಾಗಿದೆ. ನಾನು ಓರ್ವ ಆತ್ಮೀಯ ಗೆಳೆಯನನ್ನು ಕಳೆದುಕೊಂಡಿದ್ದೇನೆ. ವೈಯಕ್ತಿವಾಗಿಯೂ ನನಗೆ ಬಹಳ ನಷ್ಟವಾಗಿದೆ. ಶಿಗ್ಗಾಂವಿ-ಸವಣೂರು ಕ್ಷೇತ್ರದ ಅಭಿವೃದ್ದಿ ಅವರು ಬಗ್ಗೆ ಕನಸು ಕಂಡಿದ್ದರು. ಅವರ ಅಂತ್ಯಕ್ರಿಯೆಗೆ ಹೋಗುತ್ತಿದ್ದೆನೆ. ಅವರ ಸಾವಿನಿಂದ ನನಗೆ ದುಃಖವಾಗಿದೆ ಎಂದು ಬೊಮ್ಮಾಯಿ ಸಿಂಧೂರ ಸಾವಿಗೆ ಸಂತಾಪ ವ್ಯಕ್ತಪಡಿಸಿದ್ದಾರೆ.