– ಖಾತೆಗಾಗಿ ಸರ್ಕಾರ ಉಳಿಸಲು ಮುಂದಾಗಿದ್ರು
ಬೆಂಗಳೂರು: ಮೈತ್ರಿ ಸರ್ಕಾರದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಳಿ ಸಂಪದ್ಭರಿತವಾದ ಖಾತೆ ಅವರ ಬಳಿಯಲ್ಲಿತ್ತು. ಹಾಗಾಗಿ ಸಮ್ಮಿಶ್ರ ಸರ್ಕಾರದ ಉಳಿಸಲು ಮುಂದಾಗಿದ್ದರೆ ಹೊರತು ನನಗಾಗಿ ಅಲ್ಲ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಒಂದು ಕಾಲದ ಜೋಡೆತ್ತಿಗೆ ಗುದ್ದು ಕೊಟ್ಟಿದ್ದಾರೆ.
ಪಬ್ಲಿಕ್ ಟಿವಿಗೆ ನೀಡಿರುವ ವಿಶೇಷ ಸಂದರ್ಶನದಲ್ಲಿ ಸಮ್ಮಿಶ್ರ ಸರ್ಕಾರದಲ್ಲಿ ನಡೆದ ಹಲವು ವಿಷಯಗಳನ್ನ ಹಂಚಿಕೊಂಡಿದ್ದರು. ಕುಮಾರಸ್ವಾಮಿ ಸರ್ಕಾರ ಉಳಿಯಲಿ ಎಂದು ಡಿ.ಕೆ.ಶಿವಕುಮಾರ್ ಎಂದೂ ಪ್ರಯತ್ನಿಸಲಿಲ್ಲ. ಮೈತ್ರಿ ಸರ್ಕಾರದಲ್ಲಿ ಅವರ ಬಳಿ ಸಂಪತ್ತಿನಿಂದ ಕೂಡಿದ ಜಲಸಂಪನ್ಮೂಲ ಖಾತೆ ಅವರ ಬಳಿಯಲಿತ್ತು. ಆ ಕಾರಣಕ್ಕೆ ಅವರಿಗೆ ಸಮ್ಮಿಶ್ರ ಸರ್ಕಾರ ಉಳಿಯಬೇಕೆಂದು ಪ್ರಯತ್ನಿಸಿದ್ದರು ಎಂದು ಹೇಳಿದರು.
ಇಲಾಖೆ ಸಂಪದ್ಭರಿತವಾಗಿತ್ತಾ ಅನ್ನೋದು ಅಧಿಕಾರಿಗಳಿಗೆ ಗೊತ್ತು. ಈ ಇಲಾಖೆಯಿಂದ ರಾಜ್ಯದ ಅಭಿವೃದ್ಧಿ ಆಯ್ತಾ ಅಥವಾ ಯಾರು ಸಂಪದ್ಭರಿತವಾದ್ರೂ ಅನ್ನೋದನ್ನ ಜನರೇ ತೀರ್ಮಾನಿಸಲಿ. ಆ ವಿಷಯದ ಬಗ್ಗೆ ನಾನು ಚರ್ಚೆ ಮಾಡಲ್ಲ ಎಂದು ಕುಮಾರಸ್ವಾಮಿ ನಗೆ ಬೀರಿದರು.
ಸಿದ್ದರಾಮಯ್ಯನವರಿಗೆ ಸರ್ಕಾರ ಇರಬೇಕೆಂದು ಇಷ್ಟ ಇರಲಿಲ್ಲ. ಅವರಿಗೆ ಈ ಸರ್ಕಾರದಿಂದ ಯಾವುದೇ ಉಪಯೋಗ ಇರಲಿಲ್ಲ. ಹಾಗಾಗಿ ಸರ್ಕಾರ ಬೀಳಿಸುವ ಬಗ್ಗೆ ಪದೇ ಪದೇ ಮಾತನಾಡುತ್ತಿದ್ದರು. ಎಲ್ಲೆಲ್ಲಿ ಕುಳಿತು ಏನು ಮಾತಾಡಿದ್ರೂ ಅನ್ನೋದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಅದು ಇಡೀ ರಾಜ್ಯದ ಜನತೆಗೂ ಗೊತ್ತಿದೆ ಎಂದು ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಸರ್ಕಾರ ಪತನದಲ್ಲಿ ನನ್ನ ತಪ್ಪಿಲ್ಲ. ರಾಜಕೀಯ ನಿರ್ಧಾರ ಒಬ್ಬನ ನಿರ್ಧಾರ ಆಗಿರಲಿಲ್ಲ. ನನ್ನ ಸ್ವಯಂಕೃತ ಅಪರಾಧ ಅಲ್ಲ. ನನ್ನ ಕಡೆಯಿಂದ ಶೇ.200 ರಷ್ಟು ಯಾವುದೇ ತಪ್ಪು ಆಗಿಲ್ಲ. ಕ್ಲರ್ಕ್ ರೀತಿ ಕೆಲಸ ಮಾಡಿದೆ, ಮುಖ್ಯಮಂತ್ರಿಯಾಗಿ ಕಣ್ಣಲ್ಲಿ ನೀರು ಹಾಕಿದ್ದೇನೆ. ನಾನು ಅವಕಾಶವಾದಿ ರಾಜಕಾರಣಿ ಅಲ್ಲ, ಸಿದ್ದರಾಮಯ್ಯ ಅವಕಾಶವಾದಿ ರಾಜಕಾರಣಿ. ಸರ್ಕಾರ ಪತನವಾಗಲು ಸಿದ್ದರಾಮಯ್ಯ ಅವರೇ ಕಾರಣ ಎಂದು ಹೆಚ್ಡಿಕೆ ಆರೋಪಿಸಿದರು.