– ನಾಳೆ ಬೆಳಗ್ಗೆಯವರೆಗೂ ಸಂದೇಶಕ್ಕೆ ಕಾಯ್ತೀನಿ
– ಬದಲಾವಣೆ ಯಾಕೆ ಅಂತ ಗೊತ್ತಿಲ್ಲ
ಬೆಂಗಳೂರು: ಪ್ರವಾಹ ಪರಿಸ್ಥಿತಿ ಅವಲೋಕಿಸಿ ಬೆಂಗಳೂರಿಗೆ ಹಿಂದಿರುಗಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರದಿಂದ ಯಾವುದೇ ಸಂದೇಶ ಬಂದಿಲ್ಲ ಮತ್ತು ರಾತ್ರಿಯೊಳಗೆ ಬರುವ ನಿರೀಕ್ಷೆಯಲ್ಲಿದ್ದೇನೆ. ಆದ್ರೆ ಕೊನೆ ಕ್ಷಣದವರೆಗೂ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಕಡೆ ಕ್ಷಣದವರೆಗೆ ನನ್ನ ಕೆಲಸ ನಾನು ಮಾಡ್ತೀನಿ, ಹೈಕಮಾಂಡ್ ಹೇಳಿದಂತೆ ಕೇಳುತ್ತೇನೆ. ರಾಜೀನಾಮೆ ಕೊಡು ಅಂದ್ರೆ ಕೊಟ್ಟು ಪಕ್ಷ ಸಂಘಟನೆಯಲ್ಲಿ ತೊಡಗಿಕೊಳ್ಳುತ್ತೇನೆ. ರಾತ್ರಿಯೊಳಗೆ ಸಂದೇಶ ಬರಬಹುದು, ಇಲ್ಲ ಬೆಳಗ್ಗೆ ಬರಬಹುದು. ನಾನು ಕೊನೆಯ ನಿಮಿಷದವರೆಗೂ ಕೆಲಸ ಮಾಡಬೇಕು ಅಂದುಕೊಂಡಿದ್ದೇನೆ. ಹೈಕಮಾಂಡ್ ಯಾವಾಗ ರಾಜೀನಾಮೆ ಕೊಡು ಅನ್ನುತ್ತೋ ಆಗ ರಾಜೀನಾಮೆ ಕೊಡ್ತೀನಿ. ಈ ಮಾತನ್ನು ಎರಡು ತಿಂಗಳ ಹಿಂದೆಯೇ ಹೇಳಿದ್ದೆ. ಸಂದೇಶ ಬರದಿದ್ರೆ ಮುಂದೇನು ಮಾಡಬೇಕು ಅಂತ ನಾಳೆ ತೀರ್ಮಾನ ತೆಗೆದುಕೊಳ್ಳುವದಾಗಿ ತಿಳಿಸಿದರು.
ನಾಳೆ ಬೆಳಗ್ಗೆ ಎರಡು ವರ್ಷದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತೇನೆ. ಎರಡು ವರ್ಷದ ಸಾಧನೆ ಬಗ್ಗೆ ಮಾತನಾಡುತ್ತೇನೆ. ಮುಂದಿನ ಕಾರ್ಯಕ್ರಮಗಳ ನಂತರ ನಿಮಗೆ ಗೊತ್ತಾಗಲಿದೆ ಎಂದು ಹೇಳುವ ಮೂಲಕ ರಾಜ್ಯಪಾಲರ ಭೇಟಿಯ ಬಗ್ಗೆ ಯಾವುದೇ ಸ್ಪಷ್ಟತೆ ನೀಡಲಿಲ್ಲ. ಜುಲೈ 25 ರ ದಿನಾಂಕ ಯಾರು ನಿಗದಿ ಮಾಡಿದ್ದು ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ನಾನು ಈಗ ಯಾವುದೇ ಆ ವಿಚಾರ ಮಾತಾಡಲ್ಲ ಎಂದು ಜಾರಿಕೊಂಡರು.
ಬೆಳಗಾವಿಯಲ್ಲಿ ಮಾತನಾಡಿದ್ದ ಸಿಎಂ ಯಡಿಯೂರಪ್ಪ, ಕೋವಿಡ್, ಪ್ರವಾಹ ಪರಿಸ್ಥಿತಿಯಲ್ಲಿ ಸಿಎಂ ಬದಲಾವಣೆ ಬೇಡ ಎಂಬ ರೀತಿಯಲ್ಲಿ ಪರೋಕ್ಷವಾಗಿ ಮುಖ್ಯಮಂತ್ರಿಗಳು ಕಾದು ನೋಡೋಣ ಅಂತಾ ಹೇಳಿದರು. ನಾಳೆ ಸಾಧ್ಯವಾದರೆ ಮಧ್ಯಾಹ್ನ ಬಳಿಕ ಕಾರವಾರಕ್ಕೆ ಭೇಟಿ ನೀಡುವೆ. ಕೇಂದ್ರ ಸರ್ಕಾರ ಏನೇ ನಿರ್ಧಾರ ಕೈಗೊಂಡರೂ ಅದಕ್ಕೆ ಬದ್ಧನಿದ್ದೇನೆ. ಚುನಾವಣೆಗೆ ಒಂದು ಮುಕ್ಕಾಲು ವರ್ಷ ಇದೆ. ಹಾಗಾಗಿ ಕರ್ನಾಟಕದಲ್ಲಿ ಮತ್ತೊಮ್ಮೆ ಬಿಜೆಪಿ ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇವೆ. ನೂರು ಸಿದ್ದರಾಮಯ್ಯ ಬಂದ್ರೂ ರಾಜ್ಯದಲ್ಲಿ ಬಿಜೆಪಿ ಅಧಿಕಾರ ಬರಲಿದೆ ಎಂದು ಭವಿಷ್ಯ ನುಡಿದರು.
ಇದೇ ವೇಳೆ ಮಾಜಿ ಸಚಿವ ಸಿ.ಟಿ.ರವಿ ಹೇಳಿಕೆಗೆ ಪ್ರತಿಕ್ರಿಯಿಸಿದ ಸಿಎಂ ಬಿಎಸ್ವೈ, ನಮ್ಮ ರಾಜ್ಯದಲ್ಲಿ ಬೇರೆ ಯಾರಿಗೂ ಸಿಗದ ಸ್ಥಾನಮಾನ ನನಗೆ ಸಿಕ್ಕಿದೆ. ಅದಕ್ಕಾಗಿ ಪ್ರಧಾನಿ ಮೋದಿ, ಅಮಿತ್ ಶಾ, ಜೆ.ಪಿ.ನಡ್ಡಾಗೆ ವಂದನೆ ಸಲ್ಲಿಸುವೆ. ಪಕ್ಷದಲ್ಲಿ ನಾವೆಲ್ಲರೂ ಕಾರ್ಯಕರ್ತರಾಗಿದ್ದು, ಹೈಕಮಾಂಡ್ ತೆಗೆದುಕೊಳ್ಳುವ ನಿರ್ಧಾರಕ್ಕೆ ಬದ್ಧರಾಗಿರುತ್ತೇವೆ ಎಂದು ಹೇಳಿದರು. ಇನ್ನೂ ಸಿಎಂ ಬದಲಾವಣೆ ಕುರಿತ ಪ್ರಶ್ನೆಗೆ, ಕಾದು ನೋಡೋಣ ಎಂದು ಮೂರು ಬಾರಿ ಹೇಳಿ ಹೊರಟರು. ಇದನ್ನೂ ಓದಿ: ರಾಜ್ಯ ರಾಜಕೀಯದಲ್ಲಿ ದಿಢೀರ್ ಬೆಳವಣಿಗೆ- ದೆಹಲಿಗೆ ಹಾರಿದ ಸಚಿವ ನಿರಾಣಿ
ಬದಲಾವಣೆ ಸ್ಪಷ್ಟಪಡಿಸದ ನಡ್ಡಾ?: ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಚೆನ್ನಾಗಿ ಕೆಲಸ ಮಾಡುತ್ತಿದ್ದಾರೆ. ಯಾವುದೇ ರಾಜಕೀಯ ಬದಲಾವಣೆ ಇಲ್ಲ. ಬಿಎಸ್ವೈ ಅವರ ನಾಯಕತ್ವದಲ್ಲಿ ಸರ್ಕಾರ ಜನಪರ ಕಾರ್ಯಗಳನ್ನು ಮಾಡುತ್ತಿದೆ. ಎಲ್ಲವನ್ನೂ ನಾವು ನೋಡುತ್ತಿದ್ದೇವೆ. ರಾಜಕೀಯ ಬೆಳವಣಿಗೆ ಹಾಗೂ ನಾಯತ್ವ ಬದಲಾವಣೆ ಕುರಿತು ಯಾವುದೇ ಚರ್ಚೆ ನಡೆಯುತ್ತಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಮೂರು ಬಾರಿ ಒಂದೇ ಹೇಳಿಕೆ – ಹೈಕಮಾಂಡ್ಗೆ ಶಾಕ್ ಕೊಟ್ಟ ರಾಜಾಹುಲಿ?
ಗೋವಾದಲ್ಲಿ ಮಾತನಾಡಿದ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಯಡಿಯೂರಪ್ಪನವರು ಜನಪ್ರಿಯ ನಾಯಕರು, ಬಿಎಸ್ವೈ ಅವರ ಜನಪ್ರಿಯತೆಯನ್ನು ಎಲ್ಲರೂ ಒಪ್ಪಿಕೊಳ್ಳಲೇಬೇಕು. ಅವರೊಬ್ಬ ಉತ್ತಮ ನಾಯಕ, ಅದರಂತೆ ಪಕ್ಷ ಅವರಿಗೆ ಸಾಕಷ್ಟು ಅವಕಾಶಗಳನ್ನ ನೀಡಿದೆ. ಇದಕ್ಕಾಗಿಯೇ ನಾಲ್ಕು ಬಾರಿ ಮುಖ್ಯಮಂತ್ರಿ ಆಗಿ ಕರ್ನಾಟಕ ಜನತೆ ಸೇವೆ ಮಾಡಲು ಅವಕಾಶ ಸಿಕ್ಕಿದೆ. ವಿಪಕ್ಷ ನಾಯಕರಾಗಿ, ಉಪ ಮುಖ್ಯಮಂತ್ರಿಯಾಗಿ, ನಾಲ್ಕು ಬಾರಿ ಬಿಜೆಪಿ ರಾಜ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಲು ಪಕ್ಷ ಅವಕಾಶ ನೀಡಲಾಗಿದೆ ಎಂದರು. ಇದನ್ನೂ ಓದಿ: ಯಡಿಯೂರಪ್ಪ ಬದಲಾವಣೆ ಬಗ್ಗೆ ನಾನು ಮಾತನಾಡಲ್ಲ: ಹೆಚ್.ಡಿ.ದೇವೇಗೌಡ