ಮಡಿಕೇರಿ: ರಾಜ್ಯದಲ್ಲಿ ಕೊರೊನಾ ಸುನಾಮಿ ತಾಂಡವಾಡುತ್ತಿದೆ. ಕೊಡಗು ಜಿಲ್ಲೆಯಲ್ಲಿ ಸಹ ಕಳೆದ ಒಂದು ವಾರದಿಂದ ಶತಕದ ಆಸುಪಾಸಿನಲ್ಲಿ ಕೋವಿಡ್ ಪ್ರಕರಣಗಳು ಪತ್ತೆಯಾಗುತ್ತಿವೆ. ಹೀಗಿದ್ದರೂ ಸಂತೆ ವ್ಯಾಪಾರಿಗಳು ಹಾಗೂ ಸಾರ್ವಜನಿಕರು ಕೊರೊನಾಗೆ ಡೋಂಟ್ ಕೇರ್ ಎನ್ನುತ್ತಿದ್ದು, ವ್ಯಾಪಾರಿಗಳು ಮಾಸ್ಕ್ ಧರಿಸದೆ ಹಣ್ಣು, ತರಕಾರಿಗಳನ್ನು ಮಾರಾಟ ಮಾಡುತ್ತಿದ್ದಾರೆ.
ವ್ಯಾಪಾರಿಗಳು ಜಿಲ್ಲೆಯ ವಿವಿಧ ಸಂತೆಗಳಲ್ಲಿ ಹಣ್ಣು ತರಕಾರಿಗಳ ಜೊತೆಗೆ ಕೊರೊನಾ ಸೇಲ್ ಮಾಡುತ್ತಿದ್ದಾರಾ ಎಂಬ ಅನುಮಾನ ಮೂಡಿದೆ. ಜಿಲ್ಲೆಯಲ್ಲಿ ನಡೆಯುವ ಮಡಿಕೇರಿ, ಕುಶಾಲನಗರ ಮತ್ತು ಸುಂಟಿಕೊಪ್ಪದ ಪ್ರಮುಖ ಮೂರು ಸಂತೆಗಳಲ್ಲಿ ಈ ವ್ಯಾಪಾರಿಗಳು ಇರುತ್ತಾರೆ. ಆದರೆ ಮಾಸ್ಕ್ ಸೇರಿದಂತೆ ಕೊರೊನಾ ನಿಯಮಗಳನ್ನು ಪಾಲಿಸುತ್ತಿಲ್ಲ. ಹೀಗಾಗಿ ಸಂತೆಗಳಿಗೆ ಬರುವ ನೂರಾರು ಗ್ರಾಹಕರಿಗೆ ಹಣ್ಣು, ತರಕಾರಿ ಮತ್ತು ದಿನಸಿ ವಸ್ತುಗಳ ಜೊತೆಗೆ ವ್ಯಾಪಾರಿಗಳು ಕೊರೊನಾ ವೈರಸ್ ನ್ನೂ ಸೇಲ್ ಮಾಡುತ್ತಿದ್ದಾರಾ ಎಂಬ ಅನುಮಾನ ಮೂಡಿದೆ.
ವ್ಯಾಪಾರಿಗಳು ಮಾಸ್ಕ್ ಧರಿಸದೇ ವ್ಯಾಪಾರ ಮಾಡುತ್ತಿರುವುದು ನಮಗೂ ಆತಂಕವಿದೆ ಎಂದು ಗ್ರಾಹಕರು ಕಳವಳ ವ್ಯಕ್ತಪಡಿಸಿದ್ದಾರೆ. ಆದರೆ ಕೋವಿಡ್ ನಿಯಮಗಳನ್ನು ಪಾಲಿಸುವಂತೆ ಕ್ರಮ ಕೈಗೊಳ್ಳಬೇಕಾದ ಪಟ್ಟಣ ಪಂಚಾಯಿತಿ ಅಧಿಕಾರಿಗಳು ಮತ್ತು ಪೊಲೀಸರು ಸಂತೆಗಳತ್ತ ತಿರುಗಿ ನೋಡುತ್ತಿಲ್ಲ.