ನವದೆಹಲಿ: ಶಾರ್ಜಾ ಕ್ರೀಡಾಂಗಣದಲ್ಲಿ ನಡೆದ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ ಸಂಜು ಸ್ಯಾಮ್ಸನ್ಗೆ ಕಾಂಗ್ರೆಸ್ ಸಂಸದ ಶಶಿ ತರೂರ್ ಮೆಚ್ಚುಗೆ ಸೂಚಿಸಿದ್ದಾರೆ. ಅಲ್ಲದೇ ಸಂಜು ಸ್ಯಾಮ್ಸನ್ ಭವಿಷ್ಯದ ಧೋನಿ ಎಂದು ಹೇಳಿದ್ದಾರೆ. ಆದರೆ ತರೂರ್ ಅವರ ಈ ಹೇಳಿಕೆಗೆ ಬಿಜೆಪಿ ಸಂಸದ, ಟೀಂ ಇಂಡಿಯಾ ಮಾಜಿ ಆಟಗಾರ ಗೌತಮ್ ಗಂಭೀರ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪಂಜಾಬ್ ವಿರುದ್ಧದ ನಿನ್ನೆಯ ಪಂದ್ಯದಲ್ಲಿ 224 ರನ್ಗಳ ಬೃಹತ್ ಮೊತ್ತದ ಗುರಿಯನ್ನು ಚೇಸ್ ಮಾಡಿ ರಾಜಸ್ಥಾನ ರಾಯಲ್ಸ್ ತಂಡ 3 ಎಸೆತ ಬಾಕಿ ಇರುವಂತೆಯೇ ಗೆಲುವು ಪಡೆಯಿತು. ಪಂದ್ಯದಲ್ಲಿ ಉತ್ತಮವಾಗಿ ಬ್ಯಾಟ್ ಬೀಸಿದ್ದ ಸಂಜು ಸ್ಯಾಮ್ಸನ್ ಗೆಲುವಿಗೆ ಕೊಡುಗೆ ನೀಡಿದ್ದರು. ಐಪಿಎಲ್ 2020ರ ಟೂರ್ನಿಯಲ್ಲಿ ಆಡಿರುವ 2 ಪಂದ್ಯಗಳಲ್ಲಿ ಅರ್ಧ ಶತಕ ಗಳಿಸಿರುವ ಸಂಜು ಒಟ್ಟು 159 ರನ್ಗಳನ್ನು ಗಳಿಸಿದ್ದಾರೆ. ಸಂಜು ಬ್ಯಾಟಿಂಗ್ ಶೈಲಿಗೆ ಹಲವು ವಿಶ್ಲೇಷಕರು ಮೆಚ್ಚುಗೆ ಸೂಚಿಸಿದ್ದಾರೆ.
ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಕೂಡ ಸಂಜು ಸ್ಯಾಮ್ಸನ್ಗೆ ಅಭಿನಂದನೆ ಸಲ್ಲಿಸಿ ಟ್ವೀಟ್ ಮಾಡಿದ್ದು, ಭಾರತ ಕ್ರಿಕೆಟ್ನಲ್ಲಿ ಮುಂದಿನ ಧೋನಿ, ಸಂಜು ಸ್ಯಾಮ್ಸನ್ ಆಗುತ್ತಾರೆ ಎಂದು ಆತ 14 ವರ್ಷದವನಾಗಿದ್ದಾಗಲೇ ಹೇಳಿದ್ದೆ. ಆ ದಿನ ಈಗ ಬಂದಿದ್ದು, ಐಪಿಎಲ್ನ 2 ಇನ್ನಿಂಗ್ಸ್ ಗಳ ಬಳಿಕ ಎಲ್ಲರಿಗೂ ಅಂತಾರಾಷ್ಟ್ರೀಯ ಮಟ್ಟದ ಆಟಗಾರನ ಆಗಮನವಾಗಿದೆ ಎಂದು ತಿಳಿದಿದೆ ಎಂದು ಟ್ವೀಟ್ ಮಾಡಿದ್ದರು.
ಶಶಿ ತರೂರ್ ಅವರ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಗೌತಮ್ ಗಂಭೀರ್, ಬೇರೋಬ್ಬರಂತೆ ಆಗುವ ಅಗತ್ಯ ಸಂಜು ಸ್ಯಾಮ್ಸನ್ಗೆ ಇಲ್ಲ. ಆತ ಎಂದಿಗೂ ಭಾರತ ಕ್ರಿಕೆಟ್ನಲ್ಲಿ ಸಂಜು ಸ್ಯಾಮ್ಸನ್ ಆಗಿಯೇ ಇರಬೇಕು ಎಂದು ಹೇಳಿದ್ದಾರೆ.
ಇತ್ತ ತರೂರ್ ಅವರ ಟ್ವೀಟ್ಗೆ ಪ್ರತಿಕ್ರಿಯೆ ನೀಡಿರುವ ಕ್ರಿಕೆಟಿಗ ಶ್ರೀಶಾಂತ್, ಸಂಜು ಸ್ಯಾಮ್ಸನ್ ಧೋನಿ ವಾರಸುದಾರ ಅಲ್ಲ. ಆತ ಎಂದಿಗೂ ಸಂಜು ಸ್ಯಾಮ್ಸನ್ ಆಗಿಯೇ ಇರುತ್ತಾನೆ. 2015 ರಿಂದಲೂ ಸಂಜು ಟೀಂ ಇಂಡಿಯಾ ಪರ ಎಲ್ಲಾ ಮಾದರಿಯ ಕ್ರಿಕೆಟ್ನಲ್ಲೂ ಆಡಬೇಕಿತ್ತು. ಆದರೆ ಸರಿಯಾದ ಅವಕಾಶ ಆತನಿಗೆ ಲಭಿಸಿಲ್ಲ. ವಿಶ್ವಕಪ್ ಗೆಲುವಿಗೂ ಆತ ಸಹಕಾರಿ ಆಗುತ್ತಿದ್ದ. ಭವಿಷ್ಯದಲ್ಲೂ ಸಂಜು ಉತ್ತಮ ಆಟ ಪ್ರದರ್ಶಿಸುತ್ತಾರೆ. ಆತನನ್ನು ಯಾರಿಗೂ ಹೋಲಿಕೆ ಮಾಡಬೇಡಿ ಎಂದು ಹೇಳಿದ್ದಾರೆ.
ಐಪಿಎಲ್ ಹಾಗೂ ದೇಶೀಯ ಕ್ರಿಕೆಟ್ನಲ್ಲಿ ಸತತವಾಗಿ ಸಂಜು ಸ್ಯಾಮ್ಸನ್ ಉತ್ತಮ ಪ್ರದರ್ಶನ ನೀಡುತ್ತಿದ್ದರೂ ಆತನಿಗೆ ಟೀಂ ಇಂಡಿಯಾ ಪರ ಆಡುವ ಹೆಚ್ಚಿನ ಅವಕಾಶಗಳು ಲಭಿಸಿಲ್ಲ. 2015 ರಲ್ಲಿ ಜಿಂಬಾಬ್ವೆ ವಿರುದ್ಧ ಟಿ20 ಸರಣಿಯಲ್ಲಿ ಭಾರತದ ಪರ ಪಾದಾರ್ಪಣೆ ಮಾಡಿದ್ದ ಸಂಜು ಸ್ಯಾಮ್ಸನ್ ಇದುವರೆಗೂ ಕೇವಲ 4 ಅಂತಾರಾಷ್ಟ್ರೀಯ ಪಂದ್ಯಗಳನಷ್ಟೇ ಆಡಿದ್ದಾರೆ.