ಧಾರವಾಡ: ಸ್ಯಾಂಡಲ್ವುಡ್ ನಟ ಸಂಚಾರಿ ವಿಜಯ್ ನಿಧನ ಹಿನ್ನೆಲೆಯಲ್ಲಿ, ವಿಜಯ್ ನೆನಪಿಗೋಸ್ಕರ ಯುವಕ ಮಂಗಳಮುಖಿಯರಿಗೆ ದಿನಸಿ ಕಿಟ್ ಹಂಚುವ ಮೂಲಕವಾಗಿ ಧಾರವಾಡದಲ್ಲಿ ವಿಶೇಷ ನಮನ ಸಲ್ಲಿಸಲಾಗಿದೆ.
ನಗರದ ತೇಜಸ್ವಿನಗರದ ಸಾಹಿಲ್ ಢಾಂಗೆ ಎಂಬ ಯುವಕ, ಮಂಗಳಮುಖಿಯರಿಗೆ ದಿನಸಿ ಕಿಟ್ ವಿತರಿಸಿ ವಿಜಯ್ ಅವರಿಗೆ ಶ್ರದ್ಧಾಂಜಲಿ ಅರ್ಪಿಸಿದ್ದಾನೆ. ಯುವಕನ ಈ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಮಂಗಳಮುಖಿಯರಿಗಾಗಿಯೇ ಒಂದು ಚಲನಚಿತ್ರ ಮಾಡಿದ್ದ ಸಂಚಾರಿ ವಿಜಯ್ ನೆನಪಿಗೋಸ್ಕರ ಈ ದಿನಸಿ ಕಿಟ್ ಹಂಚಿಕೆ ಮಾಡುತ್ತಿದ್ದೇನೆ. ನಾನು ಅವನಲ್ಲ ಅವಳು ಚಿತ್ರದಿಂದ ಮಂಗಳಮುಖಿಯರ ಮೇಲೆ ಗೌರವ ಬಂತು ಎಂದು ಹೇಳಿದ್ದಾನೆ. ಇದನ್ನೂ ಓದಿ: ರಾಷ್ಟ್ರಪ್ರಶಸ್ತಿ ನೆನಪಿದೆ ಆದರೆ ವ್ಯಕ್ತಿ ಇಲ್ಲ: ವಿನೋದ್ ರಾಜ್ ಸಂತಾಪ
ಮಂಗಳಮುಖಿಯರೂ ಸಂಚಾರಿ ವಿಜಯ್ ಅವರನ್ನು ನೆನಪಿಸಿಕೊಂಡಿದ್ದಾರೆ. ವಿಜಯ್ ಅವರ ನಟನೆಯಿಂದ ನಮಗೆ ಗೌರವ ಸಿಗಲು ಶುರುವಾಯಿತ್ತು. ಸಿನಿಮಾ ಕಥೆ ಮಾಡಬೇಕಾದ್ರೆ ನಮ್ಮ ಜೀವನ ಶೈಲಿ ಹೇಗಿರುತ್ತದೆ ಎಂದು ಹೇಳಿದ್ದೇವು. ಅದಾದ ಬಳಿಕ ಅವರು ಮತ್ತು ನಮ್ಮ ಮಧ್ಯೆ ಒಳ್ಳೆ ಒಡನಾಟ ಇತ್ತು, ಅವರು ನಮ್ಮನ್ನೆಲ್ಲ ಬಿಟ್ಟು ಹೋಗಿರೋದು ದುಃಖದ ಸಂಗತಿಯಾಗಿದೆ. ನಮ್ಮ ಜೀವನ ಜಗತ್ತಿಗೆ ತೋರಿಸಿಕೊಟ್ಟವರು ಸಂಚಾರಿ ವಿಜಯ್ ಆಗಿದ್ದರು. ನಮ್ಮ ಹತ್ತಿರ ಪ್ರಾಕ್ಟಿಕಲ್ ಆಗಿ ಕೇಳಿ ಸಿನಿಮಾದಲ್ಲಿ ಆ ಪಾತ್ರ ನಿರ್ವಹಿಸಿದ್ದರು. ಆ ಬಳಿಕ ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾದಾಗ ನಮಗೆಲ್ಲ ಖುಷಿಯಾಗಿತ್ತು. ನಮ್ಮ ಬಗ್ಗೆ ಜನರಿಗೆ ತಿಳಿಸಲು ತುಂಬಾ ವೇಳೆ ಬೇಕಿತ್ತು, ಆದರೆ ಅವರು ಸಿನಿಮಾ ಮೂಲಕ ಜನರಿಗೆ ತಿಳಿಸಿಕೊಟ್ಟರು. ಅದರಿಂದಲೇ ಜನಸಾಮಾನ್ಯರಲ್ಲಿ ನಮ್ಮ ಮೇಲೆ ಗೌರವ ಹೆಚ್ಚಾಗಿದೆ. ಆದರೆ ಈಗ ಅವರೇ ಇಲ್ಲ ಅನ್ನೋದು ನಮಗೆಲ್ಲ ನೋವಿನ ವಿಚಾರ ಎಂದು ಮಂಗಳಮುಖಿ ವೈಶಾಲಿ ನೋವು ತೊಡಿಕೊಂಡರು.