ಹುಬ್ಬಳ್ಳಿ: ರಂಗಭೂಮಿ ಕಲಾವಿದ, ಪ್ರತಿಭಾವಂತ ನಟ ಸಂಚಾರಿ ವಿಜಯ್ ಅಕಾಲಿಕ ನಿಧನಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ಸರಳ ಸಜ್ಜನಿಕೆ ವ್ಯಕ್ತಿತ್ವದ ವಿಜಯ್, ಕನ್ನಡ ಚಿತ್ರರಂಗದ ಭರವಸೆಯ ನಟರಾಗಿದ್ದರು. ರಂಗಭೂಮಿ ಹಿನ್ನಲೆಯುಳ್ಳವರಾಗಿದ್ದರು, ಸಂಚಾರಿ ರಂಗ ತಂಡ ಕಟ್ಟಿಕೊಂಡು ಉತ್ತಮ ನಾಟಕಗಳನ್ನು ಪ್ರದರ್ಶಿಸಿದ್ದರು. ಧಾರವಾಹಿ ಹಾಗೂ ಸಿನಿಮಾ ಅಭಿನಯದ ಮೂಲಕ ಸಹೃದಯರ ಮನ ಗೆದ್ದಿದ್ದರು. ಇದನ್ನೂ ಓದಿ: ಹೋಟೆಲ್ನಲ್ಲಿ ಕೆಲಸ ಮಾಡಿ ತಮ್ಮನ ಓದಿಗೆ ಸಹಾಯ ಮಾಡಿದ್ದ ವಿಜಯ್
ಸಮಾಜದ ನಿರ್ಲಕ್ಷಿತ, ಲೈಂಗಿಕ ಅಲ್ಪಸಂಖ್ಯಾತರ ತಳಮಳಗಳನ್ನು ಸಿನಿಮಾ ಮೂಲಕ ಜನರಿಗೆ ಪರಿಚಯಿಸಿದ ‘ನಾನು ಅವನಲ್ಲ ಅವಳು’ ಚಿತ್ರದ ಮನೋಜ್ಞ ಅಭಿನಯಕ್ಕೆ ಉತ್ತಮ ನಟ ಎಂಬ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಏಕತಾನತೆಯ ಪಾತ್ರಗಳ ಬದಲಾಗಿ ಕಠಿಣ ಹಾಗೂ ಸವಾಲು ಎನಿಸುವ ವಿಭಿನ್ನ ಪಾತ್ರಗಳನ್ನು ಆಯ್ಕೆ ಮಾಡಿ ನಟಿಸುತ್ತಿದ್ದ ವಿಜಯ್, ಪಾತ್ರಗಳಿಗೆ ನ್ಯಾಯ ಒದಗಿಸುತ್ತಿದ್ದರು. ಅವರು ನಟಿಸಿದ ಪಾತ್ರಗಳು ಜನರ ಮನದಲ್ಲಿ ಅಚ್ಚಳಿಯದೆ ಉಳಿದಿವೆ ಎಂದು ನೆನೆದಿದ್ದಾರೆ.
ಪ್ರತಿಭಾವಂತ ನಟನ ಅಗಲಿಕೆಯಿಂದ ರಂಗಭೂಮಿ ಹಾಗೂ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ. ವಿಜಯ್ ಆತ್ಮಕ್ಕೆ ಶಾಂತಿ ಲಭಿಸಲಿ, ಅವರ ಕುಟುಂಬ ಬಂಧುಬಳಗ, ಸ್ನೇಹಿತರು ಹಾಗೂ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿಯನ್ನು ದೇವರು ನೀಡಲಿ ಎಂದು ಸಚಿವ ಜಗದೀಶ್ ಶೆಟ್ಟರ್ ಸಂತಾಪ ವ್ಯಕ್ತಪಡಿಸಿದ್ದಾರೆ.
ಯವಕರು ದ್ವಿಚಕ್ರ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು, ಜೀವ ಅಮೂಲ್ಯವಾದುದು. ಅಪಘಾತ, ಸುಂದರ ಜೀವನವನ್ನು ಕಸಿಯುತ್ತದೆ. ನಿರ್ಲಕ್ಷ್ಯ ಸಲ್ಲದು, ಎಂದು ಅವರು ಇದೇ ವೇಳೆ ಎಚ್ಚರಿಸಿದ್ದಾರೆ.