ನೆಲಮಂಗಲ(ಬೆಂಗಳೂರು): ಮದುವೆ ಅಂದ್ರೆ ಸಡಗರ ಸಂಭ್ರಮ ಮನೆ ಮಾಡಿರುತ್ತದೆ. ಇಂದಿನ ಮದುವೆಗಳಲ್ಲಿ ಆಡಂಭರ, ಶೋಕಿಯೇ ಪ್ರಧಾನವಾಗಿರುತ್ತದೆ. ಲಕ್ಷ ಲಕ್ಷ ಹಣ ಸುರಿದು ಮದುವೆಯಾಗೋದು ಅಂತಸ್ತಿಕೆಯ ಖಯಾಲಿಯಾಗಿದೆ. ಆದರೆ ಇಲ್ಲೊಬ್ಬ ಪೊಲೀಸ್ ತಮ್ಮ ಮದುವೆ ಲಗ್ನ ಪತ್ರಿಕೆಯಲ್ಲಿ ಸಾಮಾಜಿಕ ಕಳಕಳಿ ಮೂಡಿಸಿದ್ದಾರೆ.
ಹೌದು. ಸಂಚಾರಿ ಪೊಲೀಸ್ ವಿಭಾಗದ ಕಾನ್ಸ್ಟೇಬಲ್ ಮಂಜುನಾಥ್ ಅವರ ವಿವಾಹ ಆಮಂತ್ರಣ ಪತ್ರಿಕೆ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಕರೆಯೋಲೆಯಾಗಿದೆ. ಬೆಂಗಳೂರು ಹೊರವಲಯ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಮಂಜುನಾಥ್ ಅವರ ಲಗ್ನ ಪತ್ರಿಕೆ ವಿಶೇಷ ಮತ್ತು ವಿನೂತನಲಾಗಿದೆ. ಇದರ ಜೊತೆಗೆ ಹಿರಿಯ ಪೊಲೀಸ್ ಅಧಿಕಾರಿಗಳು ಪ್ರಶಂಸೆಗೆ ಕಾರಣವಾಗಿದೆ.
ತಮ್ಮ ವಿವಾಹ ಆಮಂತ್ರಣ ಪತ್ರಿಕೆಯಲ್ಲಿ ಸಂಚಾರಿ ನಿಯಮಗಳ ಜಾಗೃತಿ ಮೂಡಿಸುವ ಹಾಗೂ ತುರ್ತು ಸಂದರ್ಭಗಳಲ್ಲಿ ಸಾರ್ವಜನಿಕರಿಗೆ ಉಪಯೋಗವಾಗುವಂತಹ ಆಮಂತ್ರಣ ಮುದ್ರಿಸಿ ಮದುವೆಗೆ ಆಹ್ವಾನಿಸುತ್ತಿದ್ದಾರೆ. ಡಿಸೆಂಬರ್ 16 ಹಾಗೂ 17 ರಂದು ದಾವಣಗೆರೆಯ ಖಾಸಗಿ ಕಲ್ಯಾಣ ಮಂಟಪದಲ್ಲಿ ವಿವಾಹ ಮಹೋತ್ಸವ ನಡೆಯಲಿದೆ.
ಜಿ.ಎನ್ ಮಂಜುನಾಥ್ ಮೂಲತಃ ದಾವಣಗೆರೆ ಜಿಲ್ಲೆಯ ಲೋಕಿಕೆರೆ ಗ್ರಾಮದವರು. ನಾಗರಾಜ್ ಮತ್ತು ದುಗ್ಗಮ್ಮ ದಂಪತಿ ಪುತ್ರರಾದ ಇವರು ಪದವಿಧರರು. ಐದು ವರ್ಷಗಳಿಂದ ಹಿಂದೆ ನೆಲಮಂಗಲ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸಂಚಾರಿ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರಿಂದ ಜನರಲ್ಲಿ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಭಾವ ಇತ್ತು. ಸಂಚಾರಿ ನಿಯಮಗಳ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಜನರಿಗೆ ಜಾಗೃತಿ ಮೂಡಿಸುತ್ತಿದ್ದರು.
ತಾವು ಕಾರ್ಯ ನಿರ್ವಹಿಸುತ್ತಿದ್ದ ರಾಷ್ಟ್ರೀಯ ಹೆದ್ದಾರಿ 4 ರಲ್ಲಿ ಅಪಘಾತಗಳಿಂದ ಜನ ತಮ್ಮ ಅಮೂಲ್ಯ ಪ್ರಾಣ ಕಳೆದು ಕೊಳ್ಳುತ್ತಿದ್ದರು. ಸಂಚಾರಿ ನಿಯಮಗಳ ಪಾಲನೆ ಮಾಡದೆ ಅಪಘಾತಗಳಿಗೆ ತುತ್ತಾಗಿ ಜನರು ಪ್ರಾಣ ಕಳೆದುಕೊಳ್ಳುತ್ತಿದ್ದರು ಇದು ಮಂಜುನಾಥ್ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು. ಮಂಜುನಾಥ್ ಕಂಪ್ಯೂಟರ್ ಬಳಕೆಯ ಬಗ್ಗೆ ಪ್ರಾವೀಣ್ಯತೆ ಪಡೆದಿದ್ದು ಫೋಟೋಶಾಪ್, ಕೋರಲ್ ಡ್ರಾ ಗಳ ಮೂಲಕ ಇಲಾಖೆಗೆ ಬೇಕಾದ ಸಂಚಾರಿ ನಿಯಮಗಳ ಬೋರ್ಡ್ ಡಿಸೈನ್ ಮಾಡುತ್ತಿದ್ದರು.
ಇದೇ ಸಮಯದಲ್ಲಿ ಇವರ ವಿವಾಹ ಸಹ ನಿಶ್ಚಯವಾಗುತ್ತೆ. ಸಾಮಾಜಿಕ ಕಳಕಳಿ ಇದ್ದ ಮಂಜುನಾಥ್, ತಮ್ಮ ವಿವಾಹವನ್ನು ಅರ್ಥಪೂರ್ಣವಾಗಿಸಲು ಲಗ್ನ ಪತ್ರಿಕೆಯನ್ನೇ ಸಂಚಾರಿ ನಿಯಮಗಳ ಜಾಗೃತಿ ಮೂಡಿಸುವ ಕರೆಯೋಲೆಯಾಗಿ ಮಾಡಿದರು. ಲಗ್ನ ಪತ್ರಿಕೆಯ ಡಿಸೈನ್ ಸಹ ಮಂಜುನಾಥ್ ಅವರೇ ಮಾಡಿದ್ದು, ಮದುವೆ ಕರೆಯೋಲೆಯಲ್ಲಿ ತುರ್ತು ಸಹಾಯವಾಣಿ 112, ರಸ್ತೆ ಸುರಕ್ಷಾ ನಿಯಮಗಳು ಮತ್ತು ಹೆಲ್ಮೆಟ್ ಸೀಟ್ ಬೆಲ್ಟ್ ಬಗ್ಗೆ ಜಾಗೃತಿ ಮೂಡಿಸಿದ್ದಾರೆ.