ಇಡೀ ಕರುನಾಡು ಎರಡೂ ಕೈ ಎತ್ತಿ ಮುಗಿಯುತ್ತಿತ್ತು. ದೇಶಾದ್ಯಂತ ಅಭಿಮಾನಿಗಳು ಕಂಡ ಕಂಡ ದೇವರಿಗೆ ಹರಕೆ ಹೊತ್ತಿದ್ದರು. ನಮ್ಮ ಸ್ವರ ಸಾಮ್ರಾಟ, ನಮ್ಮೆಲ್ಲರನ್ನು ಕಂಠದಿಂದ ಕುಣಿಸಿದ ದೇವರ ಮಗ ನಮ್ಮನ್ನು ನೂರಾರು ವರ್ಷ ಸುಖ ಕೊಟ್ಟ ಪವಿತ್ರ ಜೀವ. ಆ ಶರೀರವನ್ನು ನಮಗೆ ಉಳಿಸಿಕೊಡು, ನಮ್ಮ ಜೊತೆ ನೂರಾರು ವರ್ಷ ಬದುಕುವಂತೆ ಮಾಡು…ಹೀಗೆ ಕನ್ನಡ ಮಣ್ಣಿನ ಪ್ರತಿ ಜೀವ ಬೇಡುತ್ತಿತ್ತು. ಆದರೆ ವಿಧಿ ಬರಹವನ್ನು ಯಾರಿದಂಲೂ ಬದಲಿಸಲು ಸಾಧ್ಯವಾಗಲಿಲ್ಲ.
ಎಸ್ಪಿಬಿ ನಮ್ಮನ್ನು ಅಗಲಿದರೂ ಅವರ ಹಾಡಿದ ಹಾಡುಗಳು ಈಗಲೂ ಜೀವಂತವಿದೆ. ಸಂಗೀತ ಕಾರ್ಯಕ್ರಮಗಳಲ್ಲಿ ಈಗಲೂ ಕೇಳಿಸುತ್ತದೆ. ಕೇವಲ ಸಿನಿಮಾ ಗೀತೆ ಮಾತ್ರ ಅಲ್ಲ, ಭಕ್ತಿಗೀತೆ, ಭಾವಗೀತೆ, ಶಾಸ್ತ್ರೀಯ ಗೀತೆ…ಯಾವುದನ್ನೇ ಕೇಳಿದರೂ ಅಲ್ಲಿ ಎಸ್ಪಿಬಿ ಹೆಸರು ಕಾಣಿಸುತ್ತದೆ ಮತ್ತು ಕೇಳಿಸುತ್ತದೆ.
ಎಸ್ಪಿಬಿ ಸಂಗೀತವನ್ನೇ ಬದುಕು ಮಾಡಿಕೊಂಡವರು. ಎಂಜಿನಿಯರ್ ಆಗಬೇಕಿದ್ದ ಅವರು ಅದೊಂದು ದಿನ ಸಂಗೀತವೇ ನನ್ನ ಉಸಿರು ಎನ್ನುತ್ತಾ ಗಾಯನ ಲೋಕಕ್ಕೆ ಕಾಲಿಟ್ಟರು. ಹಾಡುತ್ತಾ ಹಾಡುತ್ತಾ ಅದನ್ನೇ ಉಸಿರು ಮಾಡಿಕೊಂಡರು. ಇನ್ನೊಬ್ಬರಿಂದ ಅಕ್ಷರ ಅಕ್ಷರ ಕಲಿತರು. ಎಲ್ಲರಿಂದಲೂ ಒಂದೊಂದು ಪದಗಳನ್ನು ಅರಿತರು. ಸಾಲುಗಳನ್ನು ಉರು ಹೊಡೆದರು. ಭಾಷೆ ಯಾವುದಾದರೇನು? ಸಂಗೀತಕ್ಕೆ ಯಾವುದೆ ಭಾಷೆ ಇಲ್ಲ ಎನ್ನುತ್ತಾ ಎಲ್ಲಾ ಭಾಷೆಗಳಲ್ಲೂ ಹಾಡಿದರು. ಕನ್ನಡ, ತಮಿಳು, ತೆಲುಗು, ಹಿಂದಿ…ಹೀಗೆ ಎಲ್ಲಾ ಭಾಷೆ ಚಿತ್ರರಂಗದಲ್ಲೂ ಹೆಸರು ಮಾಡಿದರು.
ಈಗ ಅದೇ ಎಸ್ಪಿಬಿ ಆಸ್ಪತ್ರೆಯಲ್ಲಿ ಮಲಗಿದ್ದಾಗ ವೈದ್ಯರು ಅವರ ಜೀವವನ್ನು ಕಾಪಾಡಲು ಹಠ ಹಿಡಿದಿದ್ದರು. ಎಲ್ಲಾ ರೀತಿಯಿಂದಲೂ ಅವರ ಬದುಕನ್ನು ಕಾಪಾಡಲು ಪಣ ತೊಟ್ಟಿದ್ದರು. ಎಸ್ಪಿಬಿಗೆ ಸಂಗೀತ ಥೆರಪಿಯನ್ನು ವೈದ್ಯರು ನಡೆಸಿದ್ದರು.
ಸಂಗೀತ ಥೆರಪಿ…ಇದೂ ಒಂದು ರೀತಿಯ ಚಿಕಿತ್ಸೆ. ಸಂಗೀತವನ್ನೇ ಉಸಿರು ಮಾಡಿಕೊಂಡಿರುವ ಬಾಲು ಅವರಿಗೆ ಅದೇ ಥೆರಪಿ ನೀಡಿ ಗುಣಮುಖರಾಗಿಸಲು ಯತ್ನಿಸಿದ್ದರು ಆಸ್ಪತ್ರೆ ವೈದ್ಯರು. ಅಂದರೆ ಐಸಿಯುನಲ್ಲಿ ಎಸ್ಪಿ ಅವರೇ ಹಾಡಿರುವ ಗೀತೆಗಳನ್ನು ಹಾಕಿದ್ದರು. ಭಕ್ತಿಗೀತೆ, ಭಾವಗೀತೆ, ಸಿನಿಮಾ ಗೀತೆ…ಎಲ್ಲವನ್ನೂ ಅಲ್ಲಿಯೇ ಕೇಳಿಸಿದ್ದರು. ಅದೇ ಅವರನ್ನು ಕಾಪಾಡಲಿ ಎನ್ನುವುದು ಉದ್ದೇಶ. ಸಂಗೀತವೇ ಅವರ ಹೃದಯ ಬಡಿತಕ್ಕೆ ದಾರಿ ದೀಪವಾಗಲಿ ಎನ್ನುವ ಬಯಕೆ. ಎಸ್ಪಿಬಿ ಕೂಡ ಆ ಹಾಡುಗಳನ್ನು ಕೇಳುತ್ತಾ ನಗು ಮುಖ ತಂದುಕೊಂಡಿದ್ದರು. ಆದರೆ ಮತ್ತೆ ಸ್ಥಿತಿ ಗಂಭೀರವಾಗುತ್ತಾ ಹೋಯಿತು.
ಎಸ್ಪಿಬಿ ಎಲ್ಲ ಭಾಷೆಗಳಲ್ಲೂ ಎಲ್ಲಾ ಕ್ಷೇತ್ರಗಳಲ್ಲೂ ಹಾಡಿದ್ದಾರೆ. ಅಂದರೆ ಕನ್ನಡ, ತಮಿಳು, ತೆಲುಗು, ಹಿಂದಿ ಭಾಷೆ ಸಿನಿಮಾಗಳಿಗೆ ಹಾಡಿದ್ದಾರೆ ನಿಜ. ಅದನ್ನು ಮೀರಿ ಕೆಲವು ಭಾಷೆಗಳಲ್ಲಿ ಭಕ್ತಿಗೀತೆ, ಭಾವಗೀತೆಗಳನ್ನು ಹಾಡಿದ್ದಾರೆ. ಅದರಲ್ಲೂ ಕನ್ನಡ ಭಾಷೆಗಳಲ್ಲಿ ಅನೇಕ ಭಕ್ತಿಗೀತೆಗಳನ್ನು ಹಾಡಿದ್ದಾರೆ. ಜನಪದ ಗೀತೆಗಳಿಗೂ ಧ್ವನಿ ನೀಡಿದ್ದಾರೆ. ಸಾಯಿಬಾಬಾ, ಗಣೇಶ ದೇವರ ಮೇಲೂ ಅನೇಕ ಗೀತೆಗಳನ್ನು ಹಾಡಿದ್ದಾರೆ. ಅದೇ ಗೀತೆಗಳು ಈಗ ಆಸ್ಪತ್ರೆಯ ಐಸಿಯು ವಾರ್ಡಿನಲ್ಲಿ ಮೊಳಗುತ್ತಿತ್ತು. ಅದರಿಂದ ಅವರ ಆರೋಗ್ಯ ಕೂಡ ಗುಣಮುಖದತ್ತ ತಿರುಗಿತ್ತು.
ಅದೊಂದು ಕಾಲದಲ್ಲಿ ದೇವರನ್ನೇ ನೆನಪು ಮಾಡಿಕೊಳ್ಳುತ್ತಾ, ದೇವರನ್ನೇ ಸ್ಮರಿಸುತ್ತಾ, ದೇವರೇ ಎಲ್ಲರನ್ನೂ ಕಾಪಾಡಲಿ ಎನ್ನುತ್ತಾ ಎಸ್ಪಿಬಿ ಸಾಯಿಬಾಬಾ ಅವರನ್ನು ಕುರಿತು ಹಾಡಿದ್ದರು. ಉಸಿರು ಬಿಗಿ ಹಿಡಿದು, ನಾಭಿಯಿಂದ ಸಾಯಿಬಾಬಾ ಅವರನ್ನು ನೆನೆಯುತ್ತಿದ್ದ ಜೀವ ಈಗ ಹೈರಾಣಾಗಿತ್ತು
ಕೇವಲ ಸಾಯಿಬಾಬಾ ಮಾತ್ರ ಅಲ್ಲ, ಶಬರಿಮಲೆ ಅಯ್ಯಪ್ಪ, ಚಾಮುಂಡಿ ತಾಯಿ, ತಿರುಪತಿ ವೆಂಕಟೇಶ್ವರ. ಹೀಗೆ ಎಲ್ಲಾ ದೇವಾನು ದೇವತೆಗಳನ್ನು ಸ್ಮರಣೆಯನ್ನು ಭಕ್ತಿಯಿಂದ, ಶ್ರದ್ದೆಯಿಂದ ಮಾಡಿದ್ದರು. ಅದನ್ನೇ ಬದುಕು ಮಾಡಿಕೊಂಡಿದ್ದರು. ಈ ದೇವರ ಅನುಗ್ರಹವೇ ನನ್ನನ್ನು ಉಳಿಸಲಿ, ಬೆಳೆಸಲಿ, ಕಾಪಾಡಲಿ ಎನ್ನುತ್ತಿದ್ದರು.