ಕೋಲಾರ: ಆಶ್ವೀಜ ಮಾಸದ ನಂತರ ಸಂಕ್ರಾಂತಿ ಒಳಗೆ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಅವಘಡ ಆಗಲಿದೆ ಎಂದು ಕೋಡಿ ಮಠದ ಶ್ರೀ ಶಿವಾನಂದ ಸ್ವಾಮೀಜಿ ಭವಿಷ್ಯ ನುಡಿದರು.
ಕೋಲಾರ ತಾಲೂಕಿನ ಲಕ್ಷ್ಮೀ ಸಾಗರ ಗ್ರಾಮದಲ್ಲಿ ನೆಲೆಸಿರುವ ಚಾಮುಂಡೇಶ್ವರಿ ದೇವಿ ಜನ್ಮ ದಿನೋತ್ಸವದಲ್ಲಿ ಭಾಗವಹಿಸಿ ಬಳಿಕ ಮಾತನಾಡಿದ ಅವರು, ಸಂಕ್ರಾಂತಿಯೊಳಗೆ ರಾಷ್ಟ್ರ ಮಟ್ಟದಲ್ಲಿ ದೊಡ್ಡ ಅವಘಡ ಸಂಭವಿಸಲಿದೆ ಎಂದು ಹೇಳಿದ್ದಾರೆ.
ಯಡಿಯೂರಪ್ಪ ರಾಜೀನಾಮೆ ವಿಚಾರದಲ್ಲಿ ಮಠಾಧೀಶರು ಬೀದಿಗೆ ಬಂದು ಹೋರಾಟ ಮಾಡಿದರು. ಆದರೆ ಕೇಂದ್ರದ ನಾಯಕರು ಮಠಾಧೀಶರಿಗೆ ಅಗೌರವ ತೋರಿದ್ದಾರೆ ಗುರುಗಳಿಗೆ ನೋವಾಗುವಂತೆ ನಡೆದುಕೊಂಡಿದ್ದು ಸರಿಯಲ್ಲ ಎಂದರು.
ರಾಜ ಮಹರಾಜರಿಂದ ಗುರುಗಳಿಗೆ ಬೆಲೆ ಇದೆ, ಕೆಂದ್ರದ ನಾಯಕರು ಬಂದು ಗುರುಗಳಿಗೆ ಆಶ್ವಾಸನೆ ಕೊಡಬಹುದಿತ್ತು. ಯಾವುದೇ ಸಲಹೆ ಪಡೆಯದೆ ಮಠಾಧೀಶರಿಗೆ ಅಗೌರವ ತೋರಿದ್ದಾರೆ. ಮಠಾಧೀಶರು ರಾಜಕಾರಣ ಮಾಡಿಲ್ಲ, ಬದಲಾಗಿ ಮುಖ್ಯಮಂತ್ರಿ ಬದಲಾಯಿಸುವ ಸಂದರ್ಭ ಇದಲ್ಲ ಎಂದಿದ್ದರು. ಆದರೆ ಹೈಕಮಾಂಡ್ ಗುರುಗಳನ್ನು ಸರಿಯಾಗಿ ನಡೆಸಿಕೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಹಿಂದೆ ರಾಜರ ಕಾಲದಲ್ಲಿ ಸ್ವಾಮೀಜಿಗಳು ಸಿಂಹಾಸನದ ಪಕ್ಕ ಕೂರುತ್ತಿದ್ದರು. ರಾಮಚಂದ್ರ, ಪಾಂಡವರು, ಅತಿರಥ ಮಹಾರಾಜರು ಗುರುಗಳ ಸಲಹೆ ಪಡೆಯುತ್ತಿದ್ದರು. ಇನ್ನೂ ಸಾಕಷ್ಟು ಹೇಳುವ ವಿಚಾರ ಇದೆ. ಇದು ಸಂದರ್ಭ ಅಲ್ಲ, ಮೇಕೆ ಚರ್ಮದಿಂದ ಮಾಡಿದ ತಬಲ ಕೂಡ ಪಂಜರವನ್ನ ಕರಗಿಸುತ್ತೆ, ಆದರೆ ಮಠಾದೀಶರ ಅಹವಾಲನ್ನು ಆಲಿಸಲೇ ಇಲ್ಲ ಇದು ಬೇಸರ ತಂದಿದೆ. ಹಿಂದೂ ರಾಷ್ಟ್ರ ಎಂದರೆ ಖಾವಿ, ಅದಕ್ಕೆ ಬೆಲೆ ಇಲ್ಲದಹಾಗೆ ಮಾಡಿದರು ಎಂದರು.
ಹೋರಾಟ ಮಾಡಿದ ಮಠಾಧೀಶರಿಗೆ ಅಗೌರವ ತೋರಿದಿರಿ, ನೀವು ಕೊಟ್ಟ ದುಡ್ಡೇ ಖಾಯಂ ಆಯ್ತಾ, ಈ ಸಂಸ್ಕೃತಿ ಬೆಳೆಯಬಾರದು ಮತ್ತಷ್ಟು ಮಾತನಾಡುವುದಿದೆ. ಕೇಂದ್ರದ ನಾಯಕರು, ಅಮಿತ್ ಶಾ ನಮ್ಮ ಬಳಿ ಬಂದಿದ್ದರು. ಈಗ ಬಂದರೆ ಈ ಎಲ್ಲಾ ವಿಚಾರವನ್ನು ಕೇಳುತ್ತೇವೆ, ಖಾವಿಗಳಿಗೆ ಈ ದೇಶದಲ್ಲಿ ಏನು ಬೆಲೆ ಇದೆ ಎಂದು ಪ್ರಶ್ನೆ ಮಾಡಿದರು.