– ಆರೋಪಿ ಯೂಸುಫ್ ವಿರುದ್ಧ ಪ್ರಕರಣ ದಾಖಲು
ಕೊಚ್ಚಿ: ವ್ಯಕ್ತಿಯೊಬ್ಬ ಶ್ವಾನದ ಕುತ್ತಿಗೆಗೆ ಹಗ್ಗ ಸುತ್ತಿ ನಂತರ ಅದನ್ನು ಟ್ಯಾಕ್ಸಿಗೆ ಕಟ್ಟಿ ರಸ್ತೆಯಲ್ಲಿ ಧರಧರನೇ ಎಳೆದೊಯ್ದ ಅಮಾನವೀಯ ಘಟನೆಯೊಂದು ನೆಡುಂಬಾಶೇರಿ ಅತ್ತಾಣಿ ಸಮೀಪದ ಚಾಲಾಕ ಎಂಬಲ್ಲಿ ನಡೆದಿದೆ.
ಕೃತ್ಯ ಎಸಗಿದವನನ್ನು ಯೂಸುಫ್ ಎಂದು ಗುರುತಿಲಾಗಿದೆ. ಈತ ಕಾರು ಚಾಲಕ ಹಾಗೂ ನಾಯಿಯ ಮಾಲಕ ಕೂಡ ಹೌದು. ಸದ್ಯ ಈತನನ್ನು ಚೆಂಗಮನಾಡು ಪೊಲೀಸರು ಬಂಧಿಸಿದ್ದಾರೆ.
ನಾಯಿಯ ಮೇಲೆ ರಾಕ್ಷಸೀಯ ಕ್ರೂರ ಪ್ರವೃತ್ತಿ ನಡೆಸಿದ ಯೂಸುಫ್ ದೃಶ್ಯವನ್ನು ಅಖಿಲ್ ಎಂಬವರು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಆಸ್ಪತ್ರೆಯಿಂದ ಹಿಂದಿರುಗುವಾಗ ಈ ಘಟನೆ ಗಮನಕ್ಕೆ ಬಂದಿತು. ಕಾರಿನ ಹಿಂಭಾಗಕ್ಕೆ ಶ್ವಾನವನ್ನು ಕಟ್ಟಿ ಹಾಕಿ ಎಳೆದೊಯ್ಯುವುದನ್ನು ನೋಡಿ ತೀವ್ರ ಕಳವಳಗೊಂಡಿದ್ದೆ ಎಂದು ಅಖಿಲ್ ತಿಳಿಸಿದ್ದಾರೆ.
ನಾನು ಶ್ವಾನವನ್ನು ಪ್ರೀತಿಯಿಂದ ಸಾಕಿದ್ದೆ. ಆದರೆ ಇದಕ್ಕೆ ಮನೆಯವರು ವಿರೋಧ ವ್ಯಕ್ತಪಡಿಸಿದರು. ಹೀಗಾಗಿ ಶ್ವಾನವನ್ನು ಬೇರೆಡೆ ಸಾಗಿಸಲೆಂದು ಕಾರೊಳಗಡೆ ಹತ್ತಿಸಲು ಪ್ರಯತ್ನಿಸಿದೆ. ಆದರೆ ಶ್ವಾನ ಕಾರು ಹತ್ತಲಿಲ್ಲ. ಕೊನೆಗೆ ಅದರ ಕುತ್ತಿಗೆಗೆ ಹಗ್ಗದಿಂದ ಕಟ್ಟಿ ಹೀಗೆ ಮಾಡಿದೆ ಎಂದು ಯೂಸುಫ್ ತಪ್ಪೊಪ್ಪಿಕೊಂಡಿದ್ದಾನೆ.
ಆರೋಪಿ ಯೂಸುಫ್ ವಿರುದ್ಧ ಐಪಿಸಿಯ ಸೆಕ್ಷನ್ 428, 429 ಮತ್ತು ನೆಡುಂಬಸ್ಸೆರಿ ಪುತ್ತನ್ವೆಲಿಕರ ಚಲಕ ಕಾರ್ನರ್ ಹೌಸ್ ನ ಈತನ ಮೇಲೆ ಪ್ರಾಣಿಗಳಿಗೆ ಕ್ರೌರ್ಯ ತಡೆಗಟ್ಟುವಿಕೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಅಲ್ಲದೆ ವಾಹನ ಚಲಾವಣಾ ಪರವಾನಿಗೆಯನ್ನು ರದ್ದುಪಡಿಸಲಾಗಿದೆ.