– ಎಡನೀರು ಮಠದಲ್ಲಿ ಅಸ್ತಂಗತ
ಮಂಗಳೂರು: ಕೇರಳದ ಕಾಸರಗೋಡು ಜಿಲ್ಲೆಯ ಜಗದ್ಗುರು ಶಂಕರಾಚಾರ್ಯ ಸಂಸ್ಥಾನದ ಎಡನೀರು ಮಠಾಧೀಶರಾದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ(79) ಕೃಷ್ಣೈಕ್ಯರಾಗಿದ್ದಾರೆ.
ಇಂದು ರಾತ್ರಿ 12.45ರ ಸುಮಾರಿಗೆ ಎಡನೀರು ಮಠದಲ್ಲಿ ಸ್ವಾಮೀಜಿ ಕೃಷ್ಣೈಕ್ಯರಾಗಿದ್ದು,ಸೆ.2ರಂದು ಶ್ರೀಗಳು ಚಾತುರ್ಮಾಸ್ಯವನ್ನು ಪೂರೈಸಿದ್ದರು. ಕಳೆದ ಕೆಲವು ದಿನಗಳಿಂದ ಸ್ವಾಮೀಜಿ ಅನಾರೋಗ್ಯಕ್ಕೊಳಗಾಗಿದ್ದರು. ಶನಿವಾರ ರಾತ್ರಿ ಪೂಜೆ ಮುಗಿಸಿ ಊಟ ಮಾಡಿದ್ದ ಶ್ರೀಗಳು, ಮಧ್ಯರಾತ್ರಿಯ ವೇಳೆ ಅಸ್ತಂಗತರಾಗಿದ್ದಾರೆ.
ನವಂಬರ್ 14, 1960ರಿಂದ ಎಡನೀರು ಮಠಾಧಿಶರಾಗಿದ್ದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ, ಸಂಗೀತ, ಯಕ್ಷಗಾನ, ಶಿಕ್ಷಣ, ಪ್ರವಾಸೋದ್ಯಮ ಸಹಿತ ಧಾರ್ಮಿಕ ಕ್ಷೇತ್ರಗಳಲ್ಲಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಎಡನೀರು ಮಠದ ಕೊಡುಗೆ ಮಹತ್ವದ್ದಾಗಿತ್ತು. ಅಲ್ಲದೆ ಕಾಸರಗೋಡಿನಲ್ಲಿ ಕನ್ನಡ ಸಂಸ್ಕೃತಿಯ ಕೇಂದ್ರವಾಗಿ ಎಡನೀರು ಗುರುತಿಸಲ್ಪಟ್ಟಿತ್ತು. ಕೇರಳದ ಕನ್ನಡ ಅಲ್ಪಸಂಖ್ಯಾತ ಪ್ರದೇಶವಾದ ಕಾಸರಗೋಡು ಜಿಲ್ಲೆಯ ಎಡನೀರು ಇಡೀ ದೇಶದ ಗಮನ ಸೆಳೆದ ಸಂಸ್ಥಾನವಾಗಿದೆ.
ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿಯೂ ಸಕ್ರಿಯರಾಗಿದ್ದ ಶ್ರೀಗಳು ಗಡಿನಾಡಿನ ಸಂಸ್ಥಾನದಲ್ಲಿ ಯಕ್ಷಗಾನ, ಸಂಗೀತದ ಕೇಂದ್ರವನ್ನಾಗಿಸಿದ್ದರು. ಯಕ್ಷಗಾನ ಕಲೆಯ ಮೇಲೆ ಅತೀವ ಪ್ರೇಮ ಹೊಂದಿದ್ದ ಸ್ವಾಮೀಜಿ, ಮೇಳವನ್ನು ಮುನ್ನಡೆಸುತ್ತಾ ಸ್ವತಃ ಭಾಗವತಿಕೆಯನ್ನೂ ನಡೆಸುತ್ತಿದ್ದರು. ಪ್ರತೀ ವರ್ಷ ಯಕ್ಷಗಾನ ಸಪ್ತಾಹ, ತಾಳಮದ್ದಳೆ ಕೂಟಗಳನ್ನು ನಡೆಸುತ್ತಿದ್ದರು. ಶ್ರೀಗಳು ಹರಿಕಥೆಯನ್ನು ಸಹ ಮಾಡುತ್ತಿದ್ದರು.