-ಮುಂದಿವೆ ಕೊರೊನಾ ಸಂಕಷ್ಟದ ದಿನಗಳು
ಮುಂಬೈ: ಕೊರೊನಾ ಆತಂಕದ ಹಿನ್ನೆಲೆಯಲ್ಲಿ ಪುತ್ರಿ, ನಟಿ ಶ್ರದ್ಧಾಳಿಗೆ ಚಿತ್ರೀಕರಣಕ್ಕೆ ಕಳಿಸಲ್ಲ ಎಂದು ಹಿರಿಯ ನಟ ಶಕ್ತಿ ಕಪೂರ್ ಹೇಳಿದ್ದಾರೆ.
ಕೊರೊನಾದಿಂದಾಗಿ ಸಿನಿಮಾ ಚಿತ್ರೀಕರಣ ಸ್ಥಗಿತಗೊಂಡಿವೆ. ನಿರ್ಮಾಪಕರು ಸರ್ಕಾರದ ಅನುಮತಿಗಾಗಿ ಕಾಯುತ್ತಿದ್ದು, ಕಲಾವಿದರು ಶೂಟಿಂಗ್ನಲ್ಲಿ ತೊಡಗಿಕೊಳ್ಳಲು ಸಿದ್ಧರಾಗುತ್ತಿದ್ದಾರೆ. ಲಾಕ್ಡೌನ್ ಹಿನ್ನೆಲೆ ಬಾಲಿವುಡ್ ಹಿರಿಯ ನಟ ಶಕ್ತಿ ಕಪೂರ್ ಕುಟುಂಬಸ್ಥರೊಂದಿಗೆ ಮನೆಯಲ್ಲೇ ಉಳಿದುಕೊಂಡಿದ್ದಾರೆ. ಆದ್ರೆ ಶಕ್ತಿ ಕಪೂರ್ ಇನ್ನು ಚಿತ್ರೀಕರಣಕ್ಕಾಗಿ ತಾವು ಮಾನಸಿಕವಾಗಿ ಸಿದ್ಧವಾಗಿಲ್ಲ ಅನ್ನೋ ಸಂದೇಶವನ್ನು ರವಾನಿಸಿದ್ದಾರೆ.
ನಾನು ಮನೆಯಿಂದ ಹೊರಗೆ ಹೋಗಿ ಕೆಲಸ ಮಾಡಲು ಇಚ್ಛಿಸುವದಿಲ್ಲ. ಹಾಗೆ ಪುತ್ರಿ ಶ್ರದ್ಧಾಳಿಗೂ ಚಿತ್ರೀಕರಣಕ್ಕೆ ತೆರಳಲು ನಾನು ಅನುಮತಿ ನೀಡಲ್ಲ. ಕೊರೊನಾ ಅಪಾಯ ಕಡಿಮೆ ಆಗಿದೆ ಅಂತ ಹೇಳಲು ಅಸಾಧ್ಯ. ನನ್ನ ಪ್ರಕಾರ ಮುಂದಿನ ದಿನಗಳಲ್ಲಿ ಇದಕ್ಕಿಂತ ಕಷ್ಟದ ದಿನಗಳ ಬರಲಿವೆ. ಹಾಗಾಗಿ ಮಕ್ಕಳನ್ನು ಮನೆಯಿಂದ ಕಳಿಸಲು ನನಗೆ ಇಷ್ಟವಿಲ್ಲ ಅಂತ ಶಕ್ತಿ ಕಪೂರ್ ಹೇಳಿದ್ದಾರೆ.
ಜೀವನ ನಡೆಸಲು ಕೆಲಸ ಅವಶ್ಯಕ ಎಂಬುವುದು ನನಗೆ ತಿಳಿದಿದೆ. ಜೀವನ ಇದ್ರೆ ತಾನೇ ಕೆಲಸ ಎಂಬ ವಿಷಯವೂ ನನ್ನ ಮನದಲ್ಲಿದೆ. ಒಂದು ವೇಳೆ ಶೂಟಿಂಗ್ ಆರಂಭವಾದ್ರೆ ಅನಕೂಲಗಳಿಗಿಂತ ಹೆಚ್ಚು ಅನಾನೂಕಲಗಳು ಆಗಲಿವೆ. ಕ್ಯೂನಲ್ಲಿ ನಿಂತು ಆಸ್ಪತ್ರೆಯ ಬಿಲ್ ಪಾವತಿಸುವದಕ್ಕಿಂತ ಇನ್ನಷ್ಟು ದಿನ ತಾಳ್ಮೆಯಿಂದ ಇರಬೇಕು ಎಂದು ನಮ್ಮ ಉದ್ಯಮದವರಿಗೆ ಹೇಳುತ್ತೇನೆ ಅಂದಿದ್ದಾರೆ.