ಯಾದಗಿರಿ: ನಗರದ ಹೊಟೇಲ್ ಮತ್ತು ಬೇಕರಿಗಳಲ್ಲಿ ಸ್ವಚ್ಛತೆ ಕಾಪಾಡದೇ ನಿರ್ಲಕ್ಷ್ಯ ತೊರಿದ ಅಂಗಡಿ ಮಾಲಿಕರಿಗೆ ಯಾದಗಿರಿ ನಗರಸಭೆ ಪೌರಾಯುಕ್ತ ಭೀಮಣ್ಣ ನಾಯಕ ಚಾಟಿ ಬೀಸಿದ್ದಾರೆ.
ನಗರದ ಸುಭಾಷ್ ವೃತ್ತ, ಶಾಸ್ತ್ರಿ ವೃತ್ತ, ನೂತನ ಬಸ್ ನಿಲ್ದಾಣಗಳ ಹೋಟೆಲ್, ಬೇಕರಿ, ಬಿಡಾ ಅಂಗಡಿಗಳಿಗೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಧಿಕಾರಿಗಳು ಭೇಟಿ ನೀಡಿದ ವೇಳೆ ಹೋಟೆಲ್ನಲ್ಲಿ ಸ್ವಚ್ಛತೆ ಮರಿಚಿಕೆಯಾಗಿತ್ತು. ಇದನ್ನು ಕಂಡು ಗರಂ ಆದ ಪೌರಾಯುಕ್ತ ಭೀಮಣ್ಣ ನಾಯಕ, ಹೋಟೆಲ್ ಅಡುಗೆ ಕೋಣೆ ಪರಿಶೀಲನೆ ಮಾಡಿ ಸ್ವಚ್ಛತೆ ಕಾಪಾಡಬೇಕು ಇಲ್ಲದಿದ್ದರೆ ಅಂಗಡಿ ಪರವಾನಗಿ ರದ್ದು ಮಾಡಲಾಗುತ್ತದೆ ಎಂದು ಅಂಗಡಿ ಮಾಲಿಕರಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಹಲವು ಅಂಗಡಿ ಮುಂಗಟ್ಟುಗಳಲ್ಲಿ ಅನಧಿಕೃತವಾಗಿ ಬಳಕೆ ಮಾಡುತ್ತಿದ್ದ ಪ್ಲಾಸ್ಟಿಕ್ ಜಪ್ತಿ ಮಾಡಿದ್ದಾರೆ. ಇದರೊಂದಿಗೆ ನಿಯಮ ಮಿರಿ ಕೆಲ ಕಡೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುತ್ತಿದ್ದನ್ನು ಗಮನಿಸಿ ತಂಬಾಕು ಉತ್ಪನ್ನಗಳನ್ನು ವಶಪಡಿಸಿಕೊಂಡಿದ್ದಾರೆ. ಪರಿಸರ ಅಭಿಯಂತರ ಸಂಗಮೇಶ್ ಪಣಶೇಟ್ಟಿ, ಆರೋಗ್ಯ ನಿರೀಕ್ಷಕರಾದ ಶರಣಮ್ಮ ಇನ್ನಿತರರು ದಾಳಿಯಲ್ಲಿ ಪಾಲ್ಗೊಂಡಿದ್ದರು.