ಮೈಸೂರು: ರಾಜ್ಯ ಸರ್ಕಾರದಲ್ಲಿ ಸಚಿವ ಸಂಪುಟ ವಿಸ್ತರಣೆ ನಡೆದರೂ ಸಚಿವ ಸ್ಥಾನ ಕೈ ತಪ್ಪಿದ ಹಿನ್ನೆಲೆ, ಆರ್.ಆರ್ ನಗರ ಶಾಸಕ ಮುನಿರತ್ನ ಹಾಗೂ ಹೆಚ್.ನಾಗೇಶ್ ಅವರಿಗೆ ಮುಂದಿನ ಕೆಲ ದಿನಗಳಲ್ಲಿ ಉತ್ತಮ ಸ್ಥಾನ ಮಾನ ಸಿಗಲಿದೆ ಎಂದು ಸಚಿವ ನಾರಾಯಣಗೌಡ ತಿಳಿಸಿದ್ದಾರೆ.
ಮಂಡ್ಯದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ನಾರಾಯಣಗೌಡ, ಮುನಿರತ್ನ ಹಾಗೂ ನಾಗೇಶ್ಗೆ ಸಚಿವ ಸ್ಥಾನ ಕೈ ತಪ್ಪಿದೆ. ಆದರೆ ಮುಂದಿನ ದಿನಗಳಲ್ಲಿ ಸೂಕ್ತ ಸ್ಥಾನ ಮಾನ ಸಿಗಲಿದೆ. ಮುಂದೆ ಅವರಿಗೆ ಒಳ್ಳೆಯದು ಆಗುತ್ತದೆ ಎಂದರು.
ಯಡಿಯೂರಪ್ಪ ಮೇಲೆ ಯತ್ನಾಳ್ ಆಕ್ರೋಶ ಪ್ರಶ್ನೆಗೆ ಉತ್ತರಿಸಿದ ನಾರಾಯಣಗೌಡ, ಪಕ್ಷದಲ್ಲಿ ಒಬ್ಬರು ಏನೋ ಮಾತನಾಡುತ್ತಾರೆ. ಎಲ್ಲಾ ಪಕ್ಷದಲ್ಲೂ ಟೀಕೆ ಮಾಡುವವರು ಇರುತ್ತಾರೆ. ಇವತ್ತು ಕೂಗಾಡುತ್ತಾರೆ ನಂತರ ಒಳಗೆ ಬಂದು ಸೇರಿಕೊಳ್ಳುತ್ತಾರೆ. ಎಲ್ಲರೂ ಸರ್ಕಾರದಲ್ಲಿ ಸಮಾಧಾನವಾಗಿ ಹೋಗಬೇಕಾಗುತ್ತದೆ. ನಾವು ಸಹ ಅವರಿಗೆ ಸಮಾಧಾನ ಹೇಳುವ ಕೆಲಸ ಮಾಡುತ್ತೇವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಪಕ್ಷದಲ್ಲಿ ಹಾಗೂ ಸರ್ಕಾರದಲ್ಲಿ ಒಳ್ಳೆಯ ಕೆಲಸ ಮಾಡಬೇಕು ಎಂದು ಬಂದಿರುವವರು ನಾವು. ಈ ಕೆಲಸವನ್ನು ಸರಿಯಾಗಿ ಮಾಡುತ್ತಿದ್ದೇನೆ. ಇದನ್ನು ಹೊರತು ಪಡಿಸಿ ಯಾವುದೇ ಸಿಡಿ ವಿಚಾರದ ಬಗ್ಗೆ ನನಗೆ ಏನು ಗೊತ್ತಿಲ್ಲ. ವಿಶ್ವನಾಥ್ ನಮ್ಮ ಗುರುಗಳು ನಾವು ಒಂದೇ ಪಕ್ಷದಲ್ಲಿ ದುಡಿದವರು. ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ಸಿಕ್ಕಿಲ್ಲ, ಮುಂದಿನ ದಿನಗಳಲ್ಲಿ ಅವರಿಗೆ ಸಚಿವ ಸ್ಥಾನ ಸಿಗಬೇಕು ಎಂದು ಮನವಿ ಮಾಡುತ್ತೇನೆ. ಪಕ್ಷದಲ್ಲಿ ಯಾವುದೇ ಬಂಡಾಯವಿಲ್ಲ. ಮುನಿರತ್ನ ಹಾಗೂ ವಿಶ್ವನಾಥ್ಗೆ ಸಚಿವ ಸ್ಥಾನ ಸಿಗಬೇಕು ಎಂದು ನಮ್ಮ ಒತ್ತಡ ಇದೆ. ಎಲ್ಲರೊಂದಿಗೆ ಸಮಾಧಾನವಾಗಿ ಮಾತನಾಡಿ ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.