– ದೇಹಲಿಯಿಂದ ಮರಳಿದ ಬಳಿಕ ಮೊದಲ ಪ್ರತಿಕ್ರಿಯೆ
ಬೆಂಗಳೂರು: ಶೀಘ್ರದಲ್ಲೇ ಎಲ್ಲರಿಗೂ ಸಿಹಿ ಸುದ್ದಿ ಬರಲಿದೆ. ಸಿಹಿ ಸುದ್ದಿ ಬರುವ ಆಶಾ ಭಾವನೆ ನನಗಿದೆ ಎಂದು ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ.
ದೆಹಲಿಯಲ್ಲಿ ಬಿಜೆಪಿ ವರಿಷ್ಠರ ಭೇಟಿ ಬಳಿಕ ಬೆಂಗಳೂರಿಗೆ ಆಗಮಿಸಿರುವ ಅವರು, ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ವರಿಷ್ಠರನ್ನು ಭೇಟಿ ಮಾಡಿದ್ದು ನಿಜ. ವರಿಷ್ಠರೆದುರು ಯಾವುದೇ ಷರತ್ತು ಹಾಕಿಲ್ಲ, ಗಡುವು ಕೊಟ್ಟಿಲ್ಲ. ಸರ್ಕಾರ ರಚನೆಗೆ ನೆರವಾದವರಿಗೆ ಅನ್ಯಾಯ ಮಾಡಬೇಡಿ ಎಂದು ಮನವಿ ಮಾಡಿಕೊಂಡಿದ್ದೇನೆ. ವರಿಷ್ಠರ ಮುಂದೆ ವಿಧಾನ ಪರಿಷತ್ ಸದಸ್ಯ ಸಿ.ಪಿ.ಯೋಗೇಶ್ವರ್ ಪರ ಸಚಿವ ರಮೇಶ್ ಜಾರಕಿಹೊಳಿ ಬ್ಯಾಟಿಂಗ್ ಮಾಡಿರುವುದಾಗಿ ಸಹ ಒಪ್ಪಿಕೊಂಡಿದ್ದಾರೆ.
ಸಿ.ಪಿ.ಯೋಗೇಶ್ವರ್ ಸರ್ಕಾರ ರಚನೆಗೆ ಸಹಕಾರ ಕೊಟ್ಟಿದ್ದಾರೆ. ಯೋಗೇಶ್ವರ್ ಗೆ ಸಚಿವ ಸ್ಥಾನ ಕೊಡುವಂತೆ ಮಾತಾಡಿದ್ದೇನೆ. ಯೋಗೇಶ್ವರ್ ಪರ ಮಾತಾಡೋದು ನನ್ನ ಧರ್ಮ. ಸರ್ಕಾರ ರಚನೆಗೆ ನೆರವಾದವರಿಗೆ ಸಚಿವ ಸ್ಥಾನ ಕೊಡುವಂತೆ ಮಾತಾಡಿದ್ದೇನೆ. ಸರ್ಕಾರ ರಚನೆಗೆ ತ್ಯಾಗ ಮಾಡಿದವರಿಗೆ ಸಚಿವ ಸ್ಥಾನ ಕೊಡುವಂತೆ ದೆಹಲಿ ವರಿಷ್ಠರಿಗೆ ಮನವಿ ಮಾಡಿದ್ದೇನೆ. ಸಂಪುಟ ವಿಸ್ತರಣೆ ಯಾವಾಗ ಮಾಡುತ್ತಾರೋ ಗೊತ್ತಿಲ್ಲ. ಸಿಎಂ ಸಹ ದೆಹಲಿಗೆ ಹೋಗಿ ಮಾತುಕತೆ ನಡೆಸಿ ಬಂದಿದ್ದಾರೆ. ತ್ಯಾಗ ಮಾಡಿದ ಎಲ್ಲರಿಗೂ ಸಚಿವ ಸ್ಥಾನ ಸಿಗುವ ಆಶಾ ಭಾವನೆ ಇದೆ ಎಂದು ತಿಳಿಸಿದರು.
ಯೋಗೇಶ್ವರ್ ಗೆ ಸಚಿವ ಸ್ಥಾನ ಬೇಡ ಎಂದು ಕೆಲವರು ಅಭಿಪ್ರಾಯ ಹಂಚಿಕೊಂಡಿದ್ದಾರೆ. ರೇಣುಕಾಚಾರ್ಯ, ರಾಜುಗೌಡ ಬೇಡ ಎಂದು ತಮ್ಮ ಅಭಿಪ್ರಾಯ ತಿಳಿಸಿದ್ದಾರೆ. ಆದರೆ ಯೋಗೇಶ್ವರ್ ಪರ ಮಾತನಾಡೋದು ನನ್ನ ಕರ್ತವ್ಯ. ಯೋಗೇಶ್ವರ್ ಗೆ ಸಚಿವ ಸ್ಥಾನ ನೀಡಿ ಎಂದು ಮಾತನಾಡಿದ್ದೇನೆ. ಮಾಡೋದು, ಬಿಡೋದು ವರಿಷ್ಠರಿಗೆ ಬಿಟ್ಟಿದ್ದು ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರಿಗೆ ಸಚಿವ ಸ್ಥಾನ ನೀಡುವ ಕುರಿತು ಮಾತನಾಡಿದ ರಮೇಶ್ ಜಾರಕಿಹೊಳಿ, ರಾಜಕೀಯದಲ್ಲಿ ಆಶಾ ಭಾವನೆ ಇರಬೇಕು. ವಿಶ್ವನಾಥ್ ಅವರಿಗೂ ಸಚಿವ ಸ್ಥಾನ ಸಿಗುವ ಆಶಾ ಭಾವನೆ ಇದೆ. ಸರ್ಕಾರ ರಚನೆಗೆ ನೆರವಾದವರೆಲ್ಲರಿಗೂ ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ. ಅದೇ ರೀತಿ ವಿಶ್ವನಾಥ್ ಅವರಿಗೂ ಸಚಿವ ಸ್ಥಾನ ಸಿಗುವ ವಿಶ್ವಾಸ ಇದೆ. ಮುಖ್ಯಮಂತ್ರಿಗಳು ಹಾಗೂ ವರಿಷ್ಠರ ಮೇಲೆ ನಂಬಿಕೆ ಇದೆ ಎಂದರು.
ದೆಹಲಿಯಿಂದ ವಾಪಾಸಾದ ಬಳಿಕ ರಮೇಶ್ ಜಾರಕಿಹೊಳಿ ಸಿಎಂ ಯಡಿಯೂರಪ್ಪ ಅವರ ಬಳಿ ಫೋನ್ ಮೂಲಕ ಮಾತುಕತೆ ನಡೆಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ದೆಹಲಿಯಲ್ಲಿ ಕೇಂದ್ರದ ವಿವಿಧ ಸಚಿವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದ ಬಗ್ಗೆ ವಿವರಿಸಿದ್ದಾರೆ ಎನ್ನಲಾಗಿದೆ.