– ಏರ್ ಗನ್ ನೋಡಿ ಭಯಬಿದ್ದ ಕಳ್ಳರು
ಶಿವಮೊಗ್ಗ: ಮಲೆನಾಡಿನಲ್ಲಿ ಇತ್ತಿಚೇಗೆ ಕೊಲೆ, ಸುಲಿಗೆ ಹೆಚ್ಚಾಗುತ್ತಿದೆ. ಜಿಲ್ಲೆಯಲ್ಲಿ ಒಂದು ತಿಂಗಳ ಅವಧಿಯಲ್ಲಿ ಎರಡು ಜೋಡಿ ಕೊಲೆಗಳು ನಡೆದಿವೆ.
ಈ ಘಟನೆ ಮಾಸುವ ಮುನ್ನವೇ ನಿನ್ನೆ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಮೇಗರವಳ್ಳಿ ಗ್ರಾಮದಲ್ಲಿ ರಾಬರಿಗೆ ಬಂದ ತಂಡ ಮನೆಯ ಮಾಲೀಕ ಏರ್ ಗನ್ ಕೈಗೆತ್ತಿಕೊಳ್ಳುತ್ತಿದ್ದಂತೆ ಗನ್ ಎಂದು ಭಾವಿಸಿ ಹಾಗೂ ತಕ್ಷಣ ಗ್ರಾಮಸ್ಥರನ್ನು ಮನೆ ಬಳಿ ಬಂದ್ದಿದ್ದನ್ನು ಕಂಡು ಪರಾರಿಯಾಗಿದ್ದಾರೆ.
ನಿನ್ನೆ ರಾತ್ರಿ ಮೇಗರವಳ್ಳಿಯ ಪುರುಷೋತ್ತಮ್ ಹೆಗಡೆ, ಗಣೇಶ್ ಹೆಗಡೆ ಹಾಗೂ ರೇವಂತ್ ಹೆಗಡೆ ಅವರ ಮನೆ ಬಾಗಿಲು ಬಡಿದು ಮಚ್ಚು, ಲಾಂಗ್ ತೋರಿಸಿ ದರೋರೆಗೆ ಯತ್ನ ಮಾಡಿದ್ದಾರೆ. ಈ ವೇಳೆ ಮನೆಯವರ ಕೂಗಾಟ ಕೇಳಿ ಗ್ರಾಮಸ್ಥರು ಹೆಗಡೆ ಮನೆಯವರ ಬಳಿ ಬರುವಷ್ಟರಲ್ಲಿ ಇನೋವಾ ಕಾರಿನಲ್ಲಿ ಬಂದಿದ್ದ ದರೋಡೆಕೋರರು ಪರಾರಿಯಾಗಿದ್ದಾರೆ. ಇದರಿಂದ ಗ್ರಾಮದಲ್ಲಿ ಆಂತಕದ ವಾತಾವರಣ ಸೃಷ್ಟಿಯಾಗಿದೆ.
ಸ್ಥಳಕ್ಕೆ ಆಗುಂಬೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ರಾಬರಿ ಯತ್ನ ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಮೇಗರವಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಹೆಗಡೆ ಕುಟುಂಬಸ್ಥರಿಗೆ ಧೈರ್ಯ ತುಂಬಿದ್ದಾರೆ.