– ತಾಯಿ ಚಿರತೆಗಾಗಿ ಅರಣ್ಯಾಧಿಕಾರಿಗಳ ಶೋಧ
ನೆಲಮಂಗಲ: ದಕ್ಷಿಣಕಾಶಿ ಶಿವಗಂಗೆ ಬೆಟ್ಟದ ತಪ್ಪಲಿನಲ್ಲಿ ಚಿರತೆ ಮರಿ ಬೋನಿಗೆ ಬಿದ್ದಿದ್ದು ನೆಲಮಂಗಲ ತಾಲೂಕಿನ ನಾರಾಯಣಪುರ ಗ್ರಾಮಸ್ಥರು ಆತಂಕಗೊಂಡಿದ್ದಾರೆ.
ಸುಮಾರು 2 ವರ್ಷದ ಹೆಣ್ಣು ಚಿರತೆ ಮರಿ ಬೋನಿಗೆ ಬಿದ್ದಿದೆ. ಸ್ಥಳಕ್ಕೆ ನೆಲಮಂಗಲ ಅರಣ್ಯ ಅಧಿಕಾರಿಗಳ ದೌಡಾಯಿಸಿದ್ದು, ಚಿರತೆ ಮರಿಯನ್ನು ಬನ್ನೇರುಘಟ್ಟ ಅರಣ್ಯಕ್ಕೆ ಸಾಗಿಸುವ ಕೆಲಸಕ್ಕೆ ಮುಂದಾಗಿದ್ದಾರೆ.
ಬೆಳ್ಳಂಬೆಳಗ್ಗೆ ಚಿರತೆ ಮರಿಯನ್ನು ಕಂಡ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಾವೆಲ್ಲ ಸೇರಿ ಚಿರತೆ ಮರಿ ಬಿದ್ದಿರುವ ಬೋನನ್ನು ತಂದಿದ್ದೇವೆ. ಎರಡು ಮೂರು ಚಿರತೆ ಬೀಡು ಬಿಟ್ಟಿರುವ ಪಕ್ಕದ ಗೆರುಗುಟ್ಟುಕ್ಕೆ ತೆರಳಲು ನಮಗೆ ಭಯವಾಗುತ್ತದೆ ಎಂದು ಹೇಳಿ ಗ್ರಾಮಸ್ಥರು ಅರಣ್ಯ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡಿದ್ದಾರೆ.
15 ಮೇಕೆ, 10 ಕೋಳಿ, 3 ಹಸು, ಸಾಕಷ್ಟು ನಾಯಿ ತಿಂದು ಭಕ್ಷಿಸಿರುವ ಚಿರತೆಗಳು ಗ್ರಾಮದಲ್ಲಿದೆ. ಅದಷ್ಟೂ ಬೇಗ ಎಲ್ಲಾ ಚಿರತೆಗಳನ್ನು ಹಿಡಿಯಿರಿ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಹಲವಾರು ತಿಂಗಳಿನಿಂದ ಚಿರತೆಗಳು ಬೀಡುಬಿಟ್ಟಿದ್ದು, ಸುಮಾರು 2 ತಿಂಗಳಿನಿಂದ ಬೋನು ಇರಿಸಿದ್ದಾರೆ.
ಚಿರತೆಗಳನ್ನು ಮತ್ತೆ ಹತ್ತಿರದ ಕಾಡಿನಲ್ಲಿ ಬಿಡಬೇಡಿ, ಬನ್ನೇರುಘಟ್ಟ ಕಾಡಿಗೆ ಬಿಟ್ಟಿದ್ದೇವೆ ಎಂಬ ಪತ್ರವನ್ನು ಪಂಚಾಯತಿಗೆ ನೀಡಿಲ್ಲ. ಹೀಗಾಗಿ ಅರಣ್ಯ ಅಧಿಕಾರಿಗಳು ನಮಗೆ ಸಂಪೂರ್ಣ ಮಾಹಿತಿ ನೀಡಬೇಕು ಎಂದು ಗ್ರಾಮ ಪಂಚಾಯತ್ ಸದಸ್ಯೆ ಸುಜಾತ ಅಗ್ರಹಿಸಿದರು.