ನೆಲಮಂಗಲ: ಮಾರಣಾಂತಿಕ ಕೋವಿಡ್-19 ಜನರಿಗೆ ತೀವ್ರ ಸಂಕಷ್ಟ ನೀಡಿದಲ್ಲದೆ, ಇದೀಗ ಪ್ರಾಣಿಗಳಿಗೂ ಸಮಸ್ಯೆಯಾಗಿದೆ. ಲಾಕ್ಡೌನ್ ಎಫೆಕ್ಟ್ನಿಂದಾಗಿ ಶ್ರೀ ಕ್ಷೇತ್ರ ದಕ್ಷಿಣ ಕಾಶಿ ಶಿವಗಂಗೆ ಬೆಟ್ಟದಲ್ಲಿ ವಾನರ ಗುಂಪು ಆಹಾರವಿಲ್ಲದೆ ಸಂಕಷ್ಟಕ್ಕೆ ಸಿಲುಕಿವೆ. ಇದನ್ನು ಮನಗಂಡ ಸ್ಥಳೀಯರು ಕೋತಿಗಳಿಗೆ ಆಹಾರ ನೀಡಿ ನೆರವಾಗಿದ್ದಾರೆ.
ಬೆಂಗಳೂರು ಹೊರವಲಯ ನೆಲಮಂಗಲ ತಾಲೂಕಿನ ಶಿವಗಂಗೆಯಲ್ಲಿ ಬೆಟ್ಟದ ತುತ್ತತುದಿಯಲ್ಲಿ ನೆಲೆಸಿರುವ ಮಂಗಗಳಿಗೆ ಲಾಕ್ಡೌನಿಂದಾಗಿ ಆಹಾರದ ಸಮಸ್ಯೆ ಕಾಡಿದೆ. ಇದನ್ನು ಗಮನಿಸಿದ ಸ್ಥಳೀಯರು, ಮೂಕ ವೇದನೆ ಪಡುತ್ತಿದ್ದ ಪ್ರಾಣಿ ವರ್ಗಕ್ಕೆ ಆಹಾರ ನೀಡಿದ್ದಾರೆ. ಕೋವಿಡ್-19ನಿಂದಾಗಿ ಆಹಾರವಿಲ್ಲದೆ ಕೋತಿಗಳು ಸಂಕಷ್ಟಕ್ಕೆ ಒಳಗಾಗಿದ್ದವು. ಇದಕ್ಕೆ ತಾತ್ಕಾಲಿಕ ಪರಿಹಾರ ಎಂಬಂತೆ ಹಣ್ಣು ಹಂಪಲು ಮತ್ತು ತಿಂಡಿ ತಿನಿಸುಗಳನ್ನು ಹೊತ್ತೊಯ್ಯದು ಶಿವಗಂಗೆ ಬೆಟ್ಟದಲ್ಲಿರುವ ವಾನರ ಗುಂಪಿಗೆ ಸ್ಥಳೀಯರು ಆಹಾರ ನೀಡುತ್ತಿದ್ದಾರೆ. ಇದನ್ನೂ ಓದಿ: ದಕ್ಷಿಣ ಕಾಶಿ ಶಿವಗಂಗೆ ತೀರ್ಥ ಕಂಬದ ಬಳಿ ತೆಗೆದ ಚಂದನ್, ಕವಿತಾ ಫೋಟೋ ವೈರಲ್
ಕೋತಿಗಳಿಗೆ ಭಕ್ತರಿಂದ ಲಾಕ್ಡೌನ್ ಬಿಟ್ಟು ಬೇರೆ ಅವಧಿಯಲ್ಲಿ ಆಹಾರ ದೊರಕುತ್ತಿತ್ತು, ಆದರೆ ಲಾಕ್ಡೌನ್ ನಿಂದ ಶಿವಗಂಗೆಗೆ ಯಾರು ಭಕ್ತರು ಆಗಮಿಸುತ್ತಿಲ್ಲ. ಈ ಹಿನ್ನೆಲೆ ಶಿವಗಂಗೆ ಬೆಟ್ಟದಲ್ಲಿರುವ ಸಾವಿರಾರು ಕೋತಿಗಳಿಗೆ ಆಹಾರ ಇಲ್ಲದಂತಾಗಿದೆ. ಇದನ್ನು ಗಮನಿಸಿದ ಸ್ಥಳೀಯರು ಬೆಟ್ಟಕ್ಕೆ ಏರಿ ಹಲಸಿನ ಹಣ್ಣು, ಮಾವಿನ ಹಣ್ಣು, ಬಾಳೆ ಹಣ್ಣು, ಕಡಲೆಕಾಯಿ ಇನ್ನೀತರ ತಿಂಡಿ ತಿನಿಸುಗಳನ್ನು ಆಹಾರವನ್ನಾಗಿ ನೀಡುತ್ತಿದ್ದಾರೆ. ಈ ವ್ಯವಸ್ಥೆಗೆ ಶಿವಗಂಗೆ ಮತ್ತು ಅಕ್ಕಪಕ್ಕದ ಗ್ರಾಮಸ್ಥರು ನೆರವು ನೀಡುತ್ತಿದ್ದಾರೆ.