ಧಾರವಾಡ: ಶಾಲೆಯಲ್ಲಿ ಅನೇಕ ಮಕ್ಕಳ ಜಾತಿಗಳನ್ನು ಅದಲು ಬದಲು ಮಾಡಲಾಗಿದ್ದು, ಒಂದೇ ಮನೆಯ ಸ್ವಂತ ಅಣ್ಣ, ತಮ್ಮಂದಿರ ಜಾತಿಯನ್ನು ಬದಲಾಯಿಸಲಾಗಿದೆ.
ಧಾರವಾಡ ತಾಲೂಕಿನ ನಿಗದಿ ಸರ್ಕಾರಿ ಶಾಲೆಯಲ್ಲಿ ಅನೇಕ ಮಕ್ಕಳ ಮೂಲ ಜಾತಿಗಳೇ ಅದಲು ಬದಲಾಗಿದ್ದು, ಒಂದೇ ಮನೆಯ ಸ್ವಂತ ಅಣ್ಣ, ತಮ್ಮಂದಿರ ಜಾತಿ ಬದಲಾಗಿದೆ. ಅಣ್ಣನಿಗೆ ಒಂದು ಜಾತಿ, ತಮ್ಮನಿಗೆ ಇನ್ನೊಂದು, ತಂಗಿಗೆ ಮಗದೊಂದು ಜಾತಿ ಎಂದು ಶಿಕ್ಷಕರು ನಮೂದಿಸಿದ್ದಾರೆ. ಸದ್ಯ ಅದೆಲ್ಲವೂ ಈಗ ಎಸ್ಎಸ್ಎಲ್ಸಿ ಪರೀಕ್ಷೆಯ ಫಾರ್ಮ್ ತುಂಬುವ ವೇಳೆ ಬಯಲಿಗೆ ಬಂದಿದೆ. ಇದರಿಂದಾಗಿ ಐದಾರು ಮಕ್ಕಳಿಗೆ ಆತಂಕ ಎದುರಾಗಿದೆ.
ಶಾಲೆಯ ಶಿವಾನಂದ ಶೇಖಪ್ಪ ಮುಮ್ಮಿಗಟ್ಟಿಯ ಮೂಲ ಜಾತಿ ಕ್ಷತ್ರಿಯ. ಅವರ ಮನೆಯವರೆಲ್ಲರ ದಾಖಲೆಯಲ್ಲಿಯೂ ಅದೇ ಇದೆ. ಆದರೆ ಶಾಲೆಯ ರಿಜಿಸ್ಟರ್ನಲ್ಲಿ ಈತನ ಹೆಸರಿನ ಜೊತೆಗೆ ಹಿಂದೂ ಲಿಂಗಾಯತ ಎಂದು ನಮೂದಿಸಿದ್ದಾರೆ. ಶಾಲೆಯಲ್ಲಿ ಎಸ್ಎಸ್ಎಲ್ಸಿ ವ್ಯಾಸಂಗ ಮಾಡುತ್ತಿರುವ ಮಕ್ಕಳ ಒಎಂಆರ್ ಶೀಟ್ನ್ನು ಭರ್ತಿ ಮಾಡುವಾಗಲೇ ಈ ವಿಷಯ ಬೆಳಕಿಗೆ ಬಂದಿದೆ.
ಕೇವಲ ಇದೊಂದು ಪ್ರಕರಣವಲ್ಲ, ಲಿಂಗಾಯತ ಸಮುದಾಯದ ಮತ್ತೊಬ್ಬ ಹುಡುಗನ ಜಾತಿಯನ್ನು ಕುರುಬ ಎಂದು ನಮೂದಿಸಿದ್ದಾರೆ. ಸದ್ಯ ಇರುವ ಪ್ರಧಾನ ಶಿಕ್ಷಕರಿಗೆ ಪಾಲಕರಿಂದ ದೂರು ಬಂದಾಗ, ಪರಿಶೀಲಿಸಿ, ಬದಲಿಸುವ ಮಾರ್ಗಗಳನ್ನು ತಿಳಿಸಿಕೊಡುತ್ತಿದ್ದಾರೆ. ಎರಡು, ಮೂರು ಮಕ್ಕಳಿರುವ ಕುಟುಂಬದಲ್ಲಿ ಹಿರಿಯ ಮಕ್ಕಳ ಜಾತಿ ಒಂದಿದ್ದರೆ ಕಿರಿಯ ಮಕ್ಕಳ ಜಾತಿ ಇನ್ನೊಂದಾಗಿದೆ. ಜಾತಿ ಬದಲಾಗಿರುವುದನ್ನು ಗಮನಿಸಿ ಸರಿಪಡಿಸಿಕೊಡುವಂತೆ ಪಾಲಕರು ಶಿಕ್ಷಣ ಇಲಾಖೆಯ ಮೊರೆ ಹೋಗಿದ್ದು, ಈ ಸಂಬಂಧ ದೂರು ಬರುತ್ತಿದ್ದಂತೆ ಸಮಸ್ಯೆ ಬಗೆಹರಿಸಲು ಗ್ರಾಮೀಣ ಬಿಇಒ ಉಮೇಶ ಬಮ್ಮಕ್ಕನವರ ತಮ್ಮ ಅಧೀನದ ಮೂವರು ಅಧಿಕಾರಿಗಳ ನೇತೃತ್ವದಲ್ಲಿ ತಂಡ ರಚಿಸಿದ್ದು, ತಪ್ಪಿತಸ್ಥ ಶಿಕ್ಷಕರ ವಿರುದ್ಧ ಕ್ರಮ ಕೈಗೊಳ್ಳೋದಾಗಿ ಭರವಸೆ ನೀಡಿದ್ದಾರೆ.