– ಗೇಟ್ ಮುಚ್ಚಿಸಿ ಬಾಲಕನನ್ನು ಪೊಲೀಸರಿಗೆ ಒಪ್ಪಿಸಿದ ಪ್ರಿನ್ಸಿಪಾಲ್
ಲಕ್ನೋ: ಶಾಲೆಯಲ್ಲಿ ಕುಳಿತುಕೊಳ್ಳಲು ಕುರ್ಚಿ ನೀಡಿಲ್ಲವೆಂಬ ಕಾರಣಕ್ಕೆ 10ನೇ ತರಗತಿಯ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಯನ್ನೇ ಪಿಸ್ತೂಲಿನಿಂದ ಗುಂಡಿಟ್ಟು ಕೊಂದಿರುವ ಘಟನೆ ಬುಧವಾರ ಶಿಕಾರ್ಪುರದಲ್ಲಿ ನಡೆದಿದೆ.
ಹದಿಹರೆಯದ ವಯಸ್ಸಿನಲ್ಲಿ ಮಕ್ಕಳು ಶಾಲೆಯಲ್ಲಿ ಪೆನ್, ಪೆನ್ಸಿಲ್, ರಬ್ಬರ್, ಕುರ್ಚಿಗಾಗಿ ಕಿತ್ತಾಡುವುದು ಸಹಜ. ಆದರೆ ಕೊಲೆ ಮಾಡುವ ತನಕ ಯಾರು ಕೂಡ ಮುಂದುವರಿಯುವುದಿಲ್ಲ. ಆದ್ರೆ ಸನ್ನಿ ಎಂಬ 14 ವರ್ಷದ ಬಾಲಕ ಉತ್ತರ ಪ್ರದೇಶದ ಶಿಕಾರ್ಪುರನ ಸೂರಜ್ಭನ್ ಸರಸ್ವತಿ ಇಂಟರ್ ಕಾಲೇಜ್ನ ಕೊಠಡಿಯಲ್ಲಿ ಕುಳಿತುಕೊಳ್ಳಲು ಕುರ್ಚಿ ನೀಡಲಿಲ್ಲ ಎಂಬ ಕಾರಣಕ್ಕೆ ತನ್ನ ಸಹಪಾಠಿಯೊಂದಿಗೆ ಜಗಳ ಮಾಡಿದ್ದಾನೆ. ನಂತರ ಕೋಪಗೊಂಡು ಪಿಸ್ತೂಲಿನಿಂದ ಗುಂಡಿಟ್ಟು ಕೊಂದಿದ್ದಾನೆ. ಮಾರಣಾಂತಿಕವಾಗಿ ಶೂಟ್ ಮಾಡಿದ ನಂತರ ಸನ್ನಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆದ್ರೆ ಅಲ್ಲಿಯೇ ಇದ್ದ ಮುಖ್ಯೋಪಾಧ್ಯಾಯರು ಶಾಲೆಯ ಗೇಟನ್ನು ಮುಚ್ಚಿಸಿ ಆತನನ್ನು ತಡೆದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪಿಸ್ತೂಲ್ ಕುರಿತು ಪೊಲೀಸರು ಸನ್ನಿಯನ್ನು ಪ್ರಶ್ನಿಸಿದಾಗ ಈ ಪಿಸ್ತೂಲ್ ತನ್ನ ಅಂಕಲ್ಗೆ ಸೇರಿದ್ದು, ಅವರು ಆರ್ಮಿಯಿಂದ ಮನೆಗೆ ಹಿಂದಿರುಗಿದಾಗ ತೆಗೆದುಕೊಂಡಿರುವುದಾಗಿ ತಿಳಿಸಿದ್ದಾನೆ ಎಂದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಸಂತೋಷ್ ಕುಮಾರ್ ಸಿಂಗ್ ಹೇಳಿದರು.