ರಾಯಚೂರು: ಜಿಲ್ಲೆಯ ಯರಮರಸ್ ಶಾಖೋತ್ಪನ್ನ ವಿದ್ಯುತ್ ಕೇಂದ್ರ (ವೈಟಿಪಿಎಸ್)ದ ಕಲ್ಲಿದ್ದಲು ಸಾಗಣೆ ವಿಭಾಗದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದೆ.
ಕಲ್ಲಿದ್ದಲು ಯಾರ್ಡ್ ನಲ್ಲಿ ಬೇಸಿಗೆಯ ಬಿಸಿಲಿನಿಂದ ಆಗಾಗ ಬೆಂಕಿ ಕಾಣಿಸಿಕೊಳ್ಳುವುದು ಸಾಮಾನ್ಯ, ಆದರೆ ಬೆಂಕಿ ನಂದಿಸಿ ಕಲ್ಲಿದ್ದಲನ್ನು ಘಟಕಕ್ಕೆ ರವಾನೆ ಮಾಡಬೇಕು. ಆದರೆ ಬೆಂಕಿ ನಂದಿಸದೆ ಕಲ್ಲಿದ್ದಲು ಬೆಲ್ಟ್ ಮೇಲೆ ಹೋಗಲು ಬಿಟ್ಟಿದ್ದರಿಂದ ಬೆಂಕಿ ಹೊತ್ತಿಕೊಂಡಿದ್ದು, ಬೆಲ್ಟ್ ಸುಟ್ಟುಹೋಗಿದೆ.
ಇದರಿಂದಾಗಿ ಲಕ್ಷಾಂತರ ರೂಪಾಯಿ ಮೌಲ್ಯದ ಕಲ್ಲಿದ್ದಲು ಸಾಗಣೆ ಬೆಲ್ಟ್ ಹಾಗೂ ಯಂತ್ರೋಪಕರಣಗಳು ಹಾಳಾಗಿದೆ. ಪರ್ಯಾಯವಾಗಿ ಚಲಿಸುವ ಮತ್ತೊಂದು ಕಲ್ಲಿದ್ದಲು ಸಾಗಣೆ ಮಾರ್ಗದಿಂದ ಕೇಂದ್ರಕ್ಕೆ ಕಲ್ಲಿದ್ದಲು ರವಾನೆ ಮಾಡಲಾಗುತ್ತಿದೆ. ಸುಟ್ಟಿರುವ ಬೆಲ್ಟ್ ದುರಸ್ತಿ ಕಾರ್ಯನಡೆದಿದ್ದು. ವೈಟಿಪಿಎಸ್ ಸಿಬ್ಬಂದಿ ಕಾರ್ಯಾರಂಭಿಸಿದ್ದಾರೆ. ಕಲ್ಲಿದ್ದಲು ಸಾಗಣೆ ವೇಳೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ ಹಿನ್ನೆಲೆ ಅವಘಡ ಸಂಭವಿಸಿದೆ. ಅದೃಷ್ಟವಶಾತ್ ಬೆಂಕಿ ಅವಘಡದಲ್ಲಿ ಯಾವುದೇ ಪ್ರಾಣಾಪಾಯವಾಗಿಲ್ಲ.