– ಇದು ಬಿಜೆಪಿಯ ಕೃತ್ಯ
ಬೆಂಗಳೂರು: ಶೃಂಗೇರಿಯಲ್ಲಿ ನಡೆದ ಘಟನೆಯನ್ನು ಇಟ್ಟುಕೊಂಡು ನಮ್ಮ ಸಂಘಟನೆಯ ಬಗ್ಗೆ ಅಪಪ್ರಚಾರ ಮಾಡಲಾಗಿದೆ ಎಂದು ಎಸ್ಡಿಪಿಐ ರಾಜ್ಯಾಧ್ಯಕ್ಷ ಇಲ್ಯಾಸ್ ಮುಹಮ್ಮದ್ ತುಂಬೆ ಹೇಳಿದ್ದಾರೆ.
ಚಿಕ್ಕಮಗಳೂರಿನಲ್ಲಿ ಶಂಕರಾಚಾರ್ಯರ ಪುತ್ಥಳಿ ಮೇಲೆ ಮುಸ್ಲಿಂ ಸಂಘಟನೆಯ ಬಾವಟ ವಿಚಾರವಾಗಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು, ಮಾಜಿ ಶಾಸಕ ಜೀವರಾಜ್ ನಡು ರಸ್ತೆಯಲ್ಲಿ ನಿಂತು ಪೊಲೀಸರಿಗೆ ಆವಾಜ್ ಹಾಕುತ್ತಾರೆ. ಜೊತೆಗೆ ಇಬ್ಬರು ಮುಸ್ಲಿಂ ಯುವಕರನ್ನು ಬಂಧಿಸಿದ್ದಾರೆ. ಹೆಚ್ಚಿನ ತನಿಖೆಗಾಗಿ ಸಿಸಿಟಿವಿ ಚೆಕ್ ಮಾಡಿದಾಗ ನಿಜಾಂಶ ಗೊತ್ತಾಗಿದೆ ಎಂದರು.
ಮೀಲಿಂದ್ ಎಂಬ ಯುವಕ ಮಸೀದಿಗೆ ಹೋಗಿ ಅಲ್ಲಿಂದ ಬಾವುಟವನ್ನು ಕದ್ದುಕೊಂಡು ಹೋಗಿದ್ದಾನೆ. ಆತ ಹಿಂದೂ ಸಂಘಟನೆಯ ಯುವಕ, ಆತನಿಗೂ ಮಾಜಿ ಶಾಸಕ ಜೀವರಾಜ್ಗೂ ಸಂಬಂಧವಿದೆ. ಮುಸ್ಲಿಂ ಸಮುದಾಯದ ಬಗ್ಗೆ ಕೆಟ್ಟ ಪ್ರಚಾರ ಮಾಡೋದಕ್ಕಾಗಿ ಈ ರೀತಿ ಮಾಡಿದ್ದಾರೆ. ಇದು ಬಿಜೆಪಿಯ ಕುತಂತ್ರ. ನಮ್ಮ ಎಸ್ಡಿಪಿಐ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ. ಹಿಂದೂ ಮುಸ್ಲಿಂ ಸಮುದಾಯದ ನಡುವೆ ಗಲಭೆ ಸೃಷ್ಟಿ ಮಾಡುವ ಕೆಲಸ ಸಂಘಪರಿವಾರದವರು ಮಾಡುತ್ತಾಲೇ ಬರುತ್ತಿದ್ದಾರೆ ಎಂದು ದೂರಿದರು.
ಬಾವುಟ ಕದ್ದುಕೊಂಡು ಹೋದ ಯುವಕ ಮೀಲಿಂದ್ ಒಬ್ಬ ಕುಡುಕ ಅಂತಾ ಹೇಳುತ್ತಾರೆ. ಈ ಷಡ್ಯಂತ್ರ ಉತ್ತಮ ಬೆಳವಣಿಗೆ ಅಲ್ಲ. ಕೂಡಲೇ ಮಾಜಿ ಶಾಸಕ ಜೀವರಾಜ್ ಅವರನ್ನು ಆರೆಸ್ಟ್ ಮಾಡಬೇಕು ಎಂದು ಇಲಿಯಾಸ್ ಮಹಮ್ಮದ್ ಒತ್ತಾಯ ಮಾಡಿದರು.