ಬೆಂಗಳೂರು: ನಗರದಲ್ಲಿ ಕೇವಲ 40 ಸಾವಿರ ವ್ಯಾಕ್ಸಿನ್ ಡೋಸೇಜ್ ಮಾತ್ರ ಲಭ್ಯವಿದ್ದು, ಇಂದು ಮುಗಿಯಲಿದೆ. ನಾಳೆಗೆ ರಾಜ್ಯ ಸರ್ಕಾರದಿಂದ ಪೂರೈಕೆಯಾದರೆ ವ್ಯಾಕ್ಸಿನೇಷನ್ ಮುಂದುವರಿಸಲಾಗುವುದು. ಅಪಾರ್ಟ್ ಮೆಂಟ್ ಸಂಘ ಸಂಸ್ಥೆಗಳು, ನಾಗರಿಕರ ಕ್ಷೇಮಾಭಿವೃದ್ಧಿ ಸಂಘಗಳು, ಕೆಲಸದ ಜಾಗಗಳಲ್ಲಿ ನಡೆಸುತ್ತಿದ್ದ ವ್ಯಾಕ್ಸಿನ್ ವಿತರಣೆ ಕಾರ್ಯಕ್ರಮಗಳು ಲಸಿಕೆ ಪೂರೈಕೆಯಿಲ್ಲದೆ ಈಗಾಗಲೇ ಸ್ಥಗಿತಗೊಂಡಿವೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ತಿಳಿಸಿದ್ದಾರೆ.
ನಗರದ ವ್ಯಾಕ್ಸಿನ್ ದಾಸ್ತಾನು ಕೇಂದ್ರವಾದ ದಾಸಪ್ಪ ಆಸ್ಪತ್ರೆ ಹಾಗೂ ಇಂದಿರಾ ಕ್ಯಾಂಟೀನ್ ನ ಉಚಿತ ಊಟ ವಿತರಣೆಯನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದಲ್ಲಿ ಎರಡನೇ ಡೋಸ್ ಪಡೆಯುವ, 45 ವರ್ಷ ಮೇಲ್ಪಟ್ಟವರಿಗೆ ಪ್ರಮುಖ ಆದ್ಯತೆ ಕೊಟ್ಟು ವ್ಯಾಕ್ಸಿನ್ ನೀಡಲಾಗುತ್ತದೆ. ಎರಡನೇ ಡೋಸ್ ಸರಿಯಾದ ಸಮಯಕ್ಕೆ ಸಿಗದಿದ್ದರೆ ಮೊದಲ ಡೋಸ್ ಪಡೆದ ಪ್ರಯೋಜನವೂ ಸಿಗುವುದಿಲ್ಲ. ಹೀಗಾಗಿ 2ನೇ ಡೋಸ್ಗೆ ಆದ್ಯತೆ ನೀಡಲಾಗುತ್ತಿದೆ ಎಂದರು.
ನಂತರ 45 ವರ್ಷ ಮೇಲ್ಪಟ್ಟವರಿಗೆ ಮೊದಲನೇ ಡೋಸ್ ಕೊಡಲಾಗುವುದು. ಕೊನೇಯದಾಗಿ 18 ವರ್ಷ ಮೇಲ್ಪಟ್ಟವರಿಗೆ ನೀಡಲಾಗುವುದು. ಆದರೆ 18 ವರ್ಷ ಮೇಲ್ಪಟ್ಟವರಿಗೆ ಇನ್ನು ಲಸಿಕೆ ಪೂರೈಕೆಯಾಗಿಲ್ಲ. ಆದ ನಂತರ ಕೊಡಲಾಗುವುದು ಎಂದು ಆಯುಕ್ತರು ತಿಳಿಸಿದರು.
ನಗರದಲ್ಲಿ ಲಸಿಕೆ ದಾಸ್ತಾನು ಮಾಡುವ ವ್ಯವಸ್ಥೆ ಇದೆ. ಆದರೆ ಪೂರೈಕೆ ಕಡಿಮೆ ಆಗಿರುವುದರಿಂದ, ಅದಕ್ಕೆ ತಕ್ಕಂತೆ ವ್ಯಾಕ್ಸಿನ್ ವಿತರಣೆ ಮಾಡಲಾಗುತ್ತಿದೆ. ಹೀಗಾಗಿ ಎಲ್ಲರೂ ಮೊದಲೇ ನೋಂದಣಿ ಮಾಡಿಕೊಂಡು, ಸಮಯ ನಿಗದಿಯಾದ ನಂತರವೇ ಲಸಿಕೆ ಕೇಂದ್ರಗಳಿಗೆ ಬರಬೇಕು. ಇದರಿಂದ ಲಸಿಕಾ ಕೇಂದ್ರಗಳಲ್ಲಿ ಗುಂಪಾಗುವುದು ತಡೆಯಬಹುದು ಎಂದರು.
ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಸಹ ಲಸಿಕೆ ಅಭಾವ ಇದೆ. ಅಲ್ಲಿಯೂ ಅಭಾವ ತಡೆಯಬೇಕಿದೆ. ಇದೀಗ ರಾಜ್ಯಕ್ಕೆ 3 ಕೋಟಿ ಲಸಿಕೆ ಅಗತ್ಯವಿದ್ದು, ಬೆಂಗಳೂರಿನ ಜನಸಂಖ್ಯೆಗೆ ಬೇಕಾದಷ್ಟು ಲಸಿಕೆಗೆ ಬೇಡಿಕೆ ಸಲ್ಲಿಸಲಾಗಿದೆ. ನಗರದಲ್ಲಿ ಟೆಸ್ಟಿಂಗ್ ಕಿಟ್ ಹಾಗೂ ಪ್ರಾಯೋಗಾಲಯಗಳ ಯಾವುದೇ ಕೊರತೆ ಇದೆ. ಕೋವಿಡ್ ಲಕ್ಷಣ ಇರುವವರಿಗೆ, ಪ್ರಾಥಮಿಕ ಸಂಪರ್ಕಿತರನ್ನು ತಕ್ಷಣ ಟೆಸ್ಟಿಂಗ್ ಮಾಡುವಂತೆ ಸೂಚಿಸಲಾಗಿದೆ. ಟೆಸ್ಟಿಂಗ್ ಮುಂದುವರಿಸಲಾಗುತ್ತದೆ. ನಗರದಲ್ಲಿ 600 ಅಂಬುಲೆನ್ಸ್ ಗಳಿವೆ. ಇದರಲ್ಲಿ ಅಡ್ವಾನ್ಸ್ ಲೈಫ್ ಸಪೋರ್ಟ್ ನ 441 ಅಂಬುಲೆನ್ಸ್ ಗಳಿವೆ ಎಂದು ಇದೇ ವೇಳೆ ಮಾಹಿತಿ ನೀಡಿದರು.
ದಿನಕ್ಕೆ 3 ಲಕ್ಷ ಊಟ ವಿತರಣೆ ಗುರಿ
ಧರ್ಮರಾಯ ಸ್ವಾಮಿ ಟೆಂಪಲ್ ವಾರ್ಡ್ ನ ಇಂದಿರಾ ಕಿಚನ್ ಗೆ ಭೇಟಿ ನೀಡಿ, ಆಹಾರ ತಯಾರಿಕೆಯನ್ನು ಮುಖ್ಯ ಆಯುಕ್ತರು ಗಮನಿಸಿದರು. ಅಡುಗೆ ಮನೆಯಲ್ಲಿ ಆಹಾರದ ರುಚಿ ನೋಡಿ, ಇದೇ ರೀತಿ ರುಚಿಯನ್ನು ನೀಡಬೇಕು. ನಗರದಲ್ಲಿರುವ ಎಲ್ಲ ಇಂದಿರಾ ಕ್ಯಾಂಟೀನ್ ಗಳಲ್ಲಿ ಬಡವರು, ವಲಸಿಗಲು, ಕೂಲಿ ಕಾರ್ಮಿಕರಿಗೆ ಬೆಳಗಿನ ಉಪಹಾರ, ಮಧ್ಯಾಹ್ನ ಹಾಗೂ ರಾತ್ರಿ ಊಟ ಸೇರಿ ದಿನದ ಮೂರು ಹೊತ್ತು ಆಹಾರ ಪೊಟ್ಟಣಗಳನ್ನು ಉಚಿತವಾಗಿ ವಿತರಣೆ ಮಾಡಲಾಗುವುದು. ಒಟ್ಟು 3 ಆಹಾರ ಪೊಟ್ಟಣ ಕೊಡಲಾಗುತ್ತದೆ, ಪಡಿತರ ಚೀಟಿ ಇದ್ದರೆ ಹೆಚ್ಚೂ ಕೊಡಲಾಗುವುದು. 15 ಅಡುಗೆ ಮನೆಯಿಂದ ಆಹಾರ ಸಪ್ಲೈ ಆಗುತ್ತಿದ್ದು, ಮೂರು ಹೊತ್ತು ಊಟ, ತಿಂಡಿ ಸೇರಿ ದಿನಕ್ಕೆ 3 ಲಕ್ಷ ಕೊಡುವ ಗುರಿ ಇದೆ ಎಂದರು.
ಚಿಕ್ಕಪೇಟೆ ವಾರ್ಡ್- 109 ಇಂದಿರಾ ಕ್ಯಾಂಟೀನ್ ಭೇಟಿ ನೀಡಿ, ಆಹಾರ ಪೊಟ್ಟಣಗಳನ್ನು ವಿತರಿಸುವುದನ್ನು ಪರಿಶೀಲಿಸಿದರು. ಗುರುತಿನ ಚೀಟಿ ತರದಿದ್ದರು ಮುಂದಿನ ಬಾರಿ ತರಲು ತಿಳಿಸಿ ಆಹಾರ ಪೊಟ್ಟಣಗಳನ್ನು ಕೊಡಲು ಸೂಚಿಸಿದರು.